ಮಧುಗಿರಿ :

ಎರಡು ಡೋಸ್ ವ್ಯಾಕ್ಸಿನ್ ಹಾಕಿಸಿ ಕೊಂಡಿರುವವರಿಗೆ ಶೇ. 99.99 ರಷ್ಟು ಕೊರೋನ ವೈರಸ್ ತಗಲುವುದಿಲ್ಲ. ಕೆಲವರಲ್ಲಿ ತಗಲಿದರೂ ಕೂಡ ಮೃತಪಟ್ಟ ಬಗ್ಗೆ ವರದಿಯಾಗಿಲ್ಲ ಎಂದು ಕೋಡ್ಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಎ. ರವಿ ತಿಳಿಸಿದರು.
ಅವರು ಗುರುವಾರ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆಯವರಿಗೆ ಎನ್ -95 ಮಾಸ್ಕ್ಗಳು, ಸ್ಯಾನಿಟೈಸರ್ಸ್ ಮತ್ತು ನಗದು ನೀಡಿ ಮಾತನಾಡಿದರು, ಸಾರ್ವಜನಿಕರು ಸರಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಬೇಕು, ಮಾಸ್ಕ್ ಧರಿಸಿ, ದೈಹಿಕ ಅಂತರ ಪಾಲಿಸಬೇಕು.
ಯಾವುದೇ ಕಾರಣಕ್ಕೂ ಬಟ್ಟೆಯಿಂದ ಮಾಡಿದ ಮಾಸ್ಕ್ಗಳನ್ನು ಬಳಸಬೇಡಿ, ಬಾಣಂತಿಯರಿಗೆ ಸೋಂಕು ದೃಢಪಟ್ಟಲ್ಲಿ ಮಗುವಿಗೆ ಎದೆ ಹಾಲು ಕೊಡಬಹುದು, ಸೋಂಕಿತೆ ಮಾಸ್ಕ್ಅನ್ನು ಕಡ್ಡಾಯವಾಗಿ ಧರಿಸಿರಬೇಕು. ಹಾಲು ನೀಡಿದ ನಂತರ ತಾಯಿ ಮತ್ತು ಮಗುವನ್ನು ದೂರ ಇರಿಸುವುದು ಒಳಿತು. ಇನ್ನು ಗರ್ಭಿಣಿಯರಿಗೆ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಸ್ತ್ರೀರೋಗ ತಜ್ಞರ ಸಲಹೆ ಪಡೆಯಬೇಕು. ಗಂಜಲಗುಂಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುದ್ದೇನಹಳ್ಳಿ, ಕೃಷ್ಣಯ್ಯನಪಾಳ್ಯ, ಅಮರಾವತಿ, ಸಂಜೀವಪುರ ಗೊಲ್ಲರಹಟ್ಟಿಗಳಲ್ಲಿ ಕೊರೋನಾ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಎಷ್ಟೇ ಹೇಳಿದರೂ ಯಾರೂ ಮುಂದೆ ಬರುತ್ತಿಲ್ಲವೆಂದು ಬೆಸರ ವ್ಯಕ್ತಪಡಿಸಿದರು.
ಆಶಾ ಅಂಗನವಾಡಿ ಕಾರ್ಯಕರ್ತರು ಸೋಂಕಿತರ ಮನೆಗೆ ಕನಿಷ್ಠ ದಿನಕ್ಕೆ 2 ಬಾರಿ ಭೇಟಿ ಮಾಡಿ ಆರೋಗ್ಯ ವಿಚಾರಿಸಲೆ ಬೇಕು. ಇಷ್ಟೆಲ್ಲಾ ಕ್ರಮ ತೆಗೆದುಕೊಂಡೂ ಸೋಂಕಿತರು ಮನೆಯಲ್ಲೇ ಮೃತಪಟ್ಟರೆ ಇಡೀ ವ್ಯವಸ್ಥೆಯ ವಿಫಲತೆಗೆ ಕಾರಣವಾಗುತ್ತದೆ. ಸೋಂಕಿತರಿಗೆ ಏನಾದರೂ ಹೇಳಲು ಹೋದ ಆಶಾ ಮತ್ತು ಅಂಗನವಾಡಿ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಅವರಿಗೆ ಸೋಂಕಿತರು ಬೈಯುತ್ತಾರೆ ಎಂಬ ಮಾಹಿತಿಯಿದ್ದು, ಅಂತಹವರ ವಿರುದ್ಧ ತಹಸೀಲ್ದಾರ್ ಮತ್ತು ಪೊಲೀಸ್ ಇಲಾಖೆಯವರಿಗೆ ದೂರು ನೀಡಿ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ಮರುವೇಕೆರೆ ವಿಎಸ್ಸೆಸ್ಸೆನ್ ಅಧ್ಯಕ್ಷ ಫಾಜೀಲ್ ಖಾನ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ದಾಸೇಗೌಡ, ಸಿದ್ದಗಂಗಮ್ಮರಾಮಚಂದ್ರಪ್ಪ, ಮುದ್ದರಂಗಪ್ಪ, ದೇವರಾಜು, ಚಂದ್ರಕಲಾನರಸಿಂಹಮೂರ್ತಿ, ಮರುವೇಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಭೂಮಿಕಾ, ಪಿಡಿಒ ರವಿಚಂದ್ರ, ಆರ್ಐ.ಸಿದ್ದರಾಜು, ಕಿರಿಯ ಆರೋಗ್ಯ ಸಹಾಯಕಿ ಮಂಜುಳಾ ದೇವಿ, ಆರೋಗ್ಯ ಸಹಾಯಕ ಜಿ.ರವಿ ಮತ್ತಿತರರು ಇದ್ದರು.
