ಮಧುಗಿರಿ :
ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳು, ಅವರ ಸಂಬಂಧಿಕರು, ಸಿಬ್ಬಂದಿ ವರ್ಗ, ನಿರಾಶ್ರಿತರು ಯಾರು ಕೂಡ ಉಪವಾಸದಿಂದ ಇರಬಾರದೆಂಬ ದೃಷ್ಟಿಯಿಂದ ಉಚಿತ ಉಪಾಹಾರದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕ್ರಿಬ್ಕೊ ನಿರ್ದೇಶಕ ಆರ್. ರಾಜೇಂದ್ರ ತಿಳಿಸಿದರು.
ಅವರು ಪಟ್ಟಣದ ಎಂ.ಜಿ.ಎಂ. ಪ್ರೌಢಶಾಲೆ ಮುಂಭಾಗದಲ್ಲಿ ಕೆ.ಎನ್.ಆರ್ ಮತ್ತು ಆರ್.ಆರ್, ಅಭಿಮಾನಿಗಳ ಬಳಗ ಹಾಗೂ ತಾಲ್ಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ಉಚಿತ ಉಪಾಹಾರ ಹಂಚಿಕೆಗೆ ಚಾಲನೆ ನೀಡಿ ಮಾತನಾಡಿದರು. ಕೆ.ಎನ್.ರಾಜಣ್ಣನವರ ಮಾರ್ಗದರ್ಶನದಲ್ಲಿ ಲಾಕ್ಡೌನ್ ಮುಗಿಯುವವರೆಗೂ ಉಚಿತ ಉಪಾಹಾರದ ವ್ಯವಸ್ಥೆ ಮಾಡಲಾಗುತ್ತ್ತಿದೆ. ಅನ್ನದಾನ ಶ್ರೇಷ್ಠದಾನವಾಗಿದ್ದು, ಅನ್ನವನ್ನು ಯಾರು ಸಹ ಅಪವ್ಯಯ ಮಾಡಬಾರದು. ಜಿಲ್ಲೆಯಲ್ಲಿ ಮಧುಗಿರಿ ಕೊರೋನಾ ಹರಡುವಿಕೆಯಲ್ಲಿ 3 ನೆ ಸ್ಥಾನದಲ್ಲಿದ್ದು, ನಮ್ಮ ಪಕ್ಷದ ಯುವಕರು ತಂಡ ಕಟ್ಟಿಕೊಂಡು ಗ್ರಾಮೀಣ ಭಾಗದಲ್ಲಿನ ಜನರಿಗೆ ಕೊರೊನಾ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ಕೊಟ್ಟರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹಸಿದವರಿಗೆ ಅನ್ನ ನೀಡುವ ಉದ್ದೇಶದಿಂದ ಪ್ರಾರಂಭಿಸಲಾದ ಇಂದಿರಾ ಕ್ಯಾಂಟೀನ್ಗಳು ರಾಜ್ಯದ 176 ಕ್ಷೇತ್ರಗಳಲ್ಲಿದ್ದು, ಈ ಸಂದರ್ಭದಲ್ಲಿ ಪ್ರತಿ ದಿನ ಸಾವಿರಾರು ಜನರಿಗೆ 3 ಹೊತ್ತು ಆಹಾರ ಒದಗಿಸುವ ಕೇಂದ್ರಗಳಾಗಿವೆ ಎಂದ ಅವರು, ಕೊರೋನಾ ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕಾಗಿ ನಮ್ಮ ಪಕ್ಷದ ವತಿಯಿಂದ ಒಂದೆರಡು ದಿನಗಳಲ್ಲಿ ಉಚಿತವಾಗಿ ಶವಗಳನ್ನು ಸಾಗಿಸುವ ವಾಹನವನ್ನು ನೀಡಲಾಗುವುದು ಎಂದರು.
ರಾಜ್ಯ ಸಹಕಾರ ಮಹಾಮಂಡಲದ ಮಾಜಿ ಅಧ್ಯಕ್ಷ ಎನ್.ಗಂಗಣ್ಣ ಮಾತನಾಡಿ, ಕೊರೋನಾ ಮೊದಲನೇ ಅಲೆ ಸಂದರ್ಭದಲ್ಲು ಅಭಿಮಾನಿ ಬಳಗದ ವತಿಯಿಂದ ಉಪಾಹಾರದ ವ್ಯವಸ್ಥೆ ಕೈ ಗೊಳ್ಳಲಾಗಿತ್ತು. ಈಗ ಮತ್ತೆ ಲಾಕ್ ಡೌನ್ ಜಾರಿಯಾಗಿರುವುದರಿಂದ ಪಟ್ಟಣಕ್ಕೆ ಬರುವ ರೈತರಿಗೆ ಹಾಗೂ ರೋಗಿಗಳಿಗೆ ಅನುಕೂಲವಾಗಲೆಂದು ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ನಮ್ಮ ಪಕ್ಷದ ವತಿಯಿಂದ ವಿತರಿಸಲಾಗಿರುವ 2 ಆ್ಯಂಬ್ಯುಲೆನ್ಸ್ ವಾಹನಗಳು ತಾಲ್ಲೂಕಿನ ಜನರ ಸೇವೆಯಲ್ಲಿವೆ. ಇನ್ನೂ ಕೊರೋನಾ ರೋಗದ ಬಗ್ಗೆ ಗ್ರಾಮೀಣ ಜನರಲ್ಲಿ ಗೀತೆಗಳ ಮೂಲಕ ಅರಿವು ಮೂಡಿಸಲು 2 ವಾಹನಗಳನ್ನು ಸಹ ಒದಗಿಸಲಾಗಿದೆ ಎಂದರು.
ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ಪುರಸಭೆ ಮಾಜಿ ಅಧ್ಯಕ್ಷರುಗಳಾದ ಎಂ.ಕೆ.ನಂಜುಂಡಯ್ಯ, ಎಂ.ವಿ.ಗೋವಿಂದರಾಜು, ಸದಸ್ಯರುಗಳಾದ ಮಂಜುನಾಥ್ ಆಚಾರ್, ಅಲೀಮ್ ಉಲ್ಲಾ, ಮುಖಂಡರುಗಳಾದ ಎಂ.ಎಸ್.ಶಂಕರ್ನಾರಾಯಣ್, ಎಂ.ವಿ.ಮಂಜುನಾಥ್, ಎಸ್.ಬಿ.ಟಿ.ರಾಮು, ಯುವ ಕಾಂಗ್ರೆಸ್ನ ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಬಂದ್ರೇಹಳ್ಳಿ ನಾಗಾರ್ಜುನ, ಹೊನ್ನಾಪುರ ದೀಪಕ್, ಆನಂದಕೃಷ್ಣ, ಡಾ.ಡಿ.ಟಿ.ಸಂಜೀವಮೂರ್ತಿ, ರಾಜೇಶ್, ಗಂಗರಾಜು, ಮಾರುತಿ, ಮೂಡಲಗಿರೀಶ್ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
