ಮಧುಗಿರಿ : ದಂಡಿನ ಮಾರಮ್ಮ ಜಾತ್ರೆಗೆ ಮುನ್ಸೂಚನೆ

 ಮಧುಗಿರಿ : 

      ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಪಟ್ಟಣದ ದಂಡಿನ ಮಾರಮ್ಮ ಜಾತ್ರೆಯು ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ದೇವಿಯ ಉತ್ಸವಮೂರ್ತಿಯು ಮತ್ತೆ ಗುಡಿ ಸೇರಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಶುಕ್ರವಾರ ಧಾರ್ಮಿಕ ಕಾರ್ಯಗಳ ಮೂಲಕ ಮತ್ತೆ ಜಾತ್ರೆಗೆ ಮುನ್ಸೂಚನೆ ದೊರೆತಂದಾಗಿದೆ.

      ಪಟ್ಟಣದ ಐತಿಹಾಸಿಕ ದಂಡಿನ ಮಾರಮ್ಮ ದೇವಿಯ ಸ್ಥಗಿತವಾಗಿದ್ದ ಜಾತ್ರಾ ಮಹೋತ್ಸವ ಹಾಗೂ ಉತ್ಸವ ಮೂರ್ತಿಯನ್ನು ಗುಡಿ ದುಂಬಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡುವಂತೆ ಇತ್ತೀಚೆಗೆ ಉಪವಿಭಾಗಾಧಿಕಾರಿಯವರನ್ನು ಭಕ್ತಾದಿಗಳು ಭೇಟಿ ಮಾಡಿ, ದೇವಿಯ ಪೂಜಾ ಕೈಂಕರ್ಯಗಳನ್ನು ಮತ್ತೆ ಆಯೋಜಿಸುವಂತೆ ಮನವಿ ಮಾಡಿದ್ದರು. ಅದರಂತೆ ಗುರುವಾರ ದೋಷ ನಿವಾರಣೆ ಮತ್ತು ಲೋಕ ಕಂಟಕವಾಗಿರುವ ಕರೋನ ಮಾರಿ ಯಾರಿಗೂ ಹರಡದಂತೆ ವಿಶೇಷವಾಗಿ ಧಾರ್ಮಿಕ ಕಾರ್ಯಕ್ರಮಗಳು ದೇವಾಲಯದ ಆವರಣದಲ್ಲಿ ನಡೆದವು.

      ನ್ಯಾಯಾಧೀಶರಾದ ಪಲ್ಲವಿ ಮತ್ತು ಅವರ ಪತಿ ಶ್ರೀನಿವಾಸ್, ಉಪವಿಭಾಧಿಕಾರಿ ಹಾಗೂ ಆಡಳಿತಾಧಿಕಾರಿ ಸೋಮಪ್ಪಕಡಕೋಳ ಹೋಮದ ಪೂರ್ಣಾಹುತಿಯನ್ನು ನೆರವೇರಿಸಿದ್ದು, ನಂತರ ಗಣಪತಿ, ನವಗ್ರಹ, ಮೃತ್ಯುಂಜಯ, ಅಷ್ಟದಿಕ್ಪಾಲಕ, ಸಪ್ತಮಾತೃಕಾ, ತ್ರಿಶಕ್ತಿಯರಾದ ಲಕ್ಷ್ಮೀ-ಸರಸ್ವತಿ-ಕಾಳಿ ಆರಾಧನೆ ಮತ್ತು ದುರ್ಗಾ ಹೋಮಗಳು ನಡೆದವು.

      ಅಮ್ಮನವರನ್ನು ಪುರಪ್ರವೇಶ ಮಾಡಿಸಿ ಮೂಲಸ್ಥಾನಕ್ಕೆ ತುಂಬಿಸುವ ಧಾರ್ಮಿಕ ಕಾರ್ಯಕ್ರಮಗಳು ಕರೋನಾ ನಿಯಮಾವಳಿಯಲ್ಲಿ ಸರಳವಾಗಿ ಆಚರಿಸಲಾಯಿತು. ಧಾರ್ಮಿಕ ಮುಖಂಡ ಡಾ||ಎಂ.ಜಿ.ಶ್ರೀನಿವಾಸ್ ಮೂರ್ತಿ, ಅರ್ಚಕರುಗಳಾದ ಮುರಳಿಧರ ಆಚಾರ್, ಅರುಣ್ ಕುಮಾರ್, ಲಕ್ಷ್ಮೀಕಾಂತಾಚಾರ್, ಅಮರಾವತಿ ದ್ರೇಹಾಚಾರ್, ನವನೀತ್ ಕುಮಾರ್, ಸುರೇಶ್, ಕಂದಾಯ ತನಿಖಾಧಿಕಾರಿ ಸಿದ್ದರಾಜು, ಪಾರುಪತ್ತೆದಾರ ಗಿರೀಶ್ ಶೇಷು ಹಾಗೂ ಭಕ್ತಾದಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ