ಸಚಿವನಾಗಿ ಬಡವರ ಸಾಲ ಮನ್ನಾ ಮಾಡುವೆ : ಕೆಎನ್‍ಆರ್

ಮಧುಗಿರಿ :

     ಇದೇ ರೀತಿಯ ರಾಜಕೀಯ ವ್ಯವಸ್ಥೆ ಮುಂದುವರಿದಲ್ಲಿ 2023 ಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ನಿಮ್ಮೆಲ್ಲರ ಆಶೀರ್ವಾದಿಂದ ನಾನು ಗೆದ್ದು, ಸಹಕಾರ ಸಚಿವನಾಗಿ ಆಯ್ಕೆಯಾದಲ್ಲಿ ಬಡ ಜನರ, ರೈತರ ಎಲ್ಲಾ ಸಾಲ ಮನ್ನಾ ಮಾಡುತ್ತೇವೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.

      ಅವರು ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ಕೆಎನ್‍ಆರ್, ಜಿ.ಎಸ್.ಬಸವರಾಜು, ಆರ್‍ಆರ್ ಅಭಿಮಾನಿಗಳ ಬಳಗ ಹಾಗೂ ತಾಲ್ಲೂಕು ನಾಯಕ ಸಮುದಾಯ ಏರ್ಪಡಿಸಿದ್ದ, ಪುರಸಭೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

     ಮಾಜಿ ಸಿಎಂ ಕುಮಾರಸ್ವಾಮಿ ಸ್ವಸಹಾಯ ಸಂಘಗಳ ಸಾಲ, ಲೇವಾದೇವಿ ಸಾಲ ಸೇರಿದಂತೆ ಎಲ್ಲಾ ಸಾಲ ಮನ್ನಾ ಮಾಡುವುದಾಗಿ ಹೇಳಿ, ಜನರನ್ನು ತಪ್ಪು ದಾರಿಗೆ ಎಳೆದಿದ್ದು, ಇಂದು ಬಹಳಷ್ಟು ಜನರ ಸಾಲ ಮನ್ನಾ ಆಗದೇ ಪರಿತಪಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಲ್ಲಿ ಎಲ್ಲಾ ಸಾಲ ಮನ್ನಾ ಮಾಡುವ ಮೂಲಕ ಬಡವರ, ರೈತರ ಕೈ ಹಿಡಿಯುತ್ತೇವೆ. ಅಧಿಕಾರಕ್ಕಿಂತ ಪ್ರೀತಿ-ವಿಶ್ವಾಸ ಮುಖ್ಯವಾಗಿದ್ದು, ಅಧಿಕಾರ ಶಾಶ್ವತ ಅಲ್ಲ. ನನ್ನ ಬಗ್ಗೆ ಅಭಿಮಾನವಿಟ್ಟು ಪ್ರೀತಿ-ವಿಶ್ವಾಸ ತೋರುವ ಪ್ರತಿಯೊಬ್ಬರಿಗೂ ಋಣಿಯಾಗಿದ್ದು, ಮುಂದಿನ ಗ್ರಾ.ಪಂ ಚುನಾವಣೆ ಸಂದರ್ಭದಲ್ಲಿ ಎಲ್ಲಾ ಹಳ್ಳಿಗಳಿಗೂ ಭೇಟಿ ನೀಡುತ್ತೇನೆ ಎಂದರು.

      ಪುರಸಭೆ ಆಡಳಿತ ಜೆಸಿಬಿ ಪಕ್ಷಗಳ ತೆಕ್ಕೆಯಲ್ಲಿದೆ :

       ನೂತನ ಅಧ್ಯಕ್ಷ ತಿಮ್ಮರಾಯಪ್ಪ ಜೆಡಿಎಸ್ ಪಕ್ಷದಿಂದ ಗೆದ್ದು ಬಂದಿದ್ದರೂ, ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ ಮತ್ತು ಸಂಸದ ಜಿ.ಎಸ್. ಬಸವರಾಜುರವರ ಆಶೀರ್ವಾದದಿಂದ ಅಧ್ಯಕ್ಷರಾಗಿದ್ದಾರೆ. ಈಗ ಪುರಸಭೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಬೆಂಬಲದೊಂದಿಗೆ ಅಧಿಕಾರ ಹಿಡಿದಿದ್ದು, ಜ್ಯಾತ್ಯತೀತವಾಗಿ ಎಲ್ಲರೂ ಸೇರಿ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. ತಿಮ್ಮರಾಯಪ್ಪ ಬಡ ಕುಟುಂಬದಿಂದ ಬಂದ ವ್ಯಕ್ತಿಯಾಗಿದ್ದು, ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಅಧಿಕಾರ ಹಿಡಿಯಲು ಹಣ ಬಲ, ಜಾತಿ ಬಲ ಮುಖ್ಯ ಪಾತ್ರ ವಹಿಸುತ್ತದೆ. ಆದರೆ ಬಡ ಕುಟುಂಬದ ವ್ಯಕ್ತಿಯೊಬ್ಬರಿಗೆ ಅಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ ಮಧುಗಿರಿ ಜನತೆ ಔದಾರ್ಯತೆ ಮೆರೆದಿದ್ದಾರೆ. ನೂತನ ಅಧ್ಯಕ್ಷ ತಿಮ್ಮರಾಯಪ್ಪ ಮತ್ತು ಉಪಾಧ್ಯಕ್ಷೆ ರಾಧಿಕಾ ಆನಂದಕೃಷ್ಣ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಧುಗಿರಿಯ ಅಭಿವೃದ್ದಿಗೆ ಶ್ರಮಿಸಬೇಕು ಎಂದರು.

      ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ತುಮಕೂರು ಜಿಲ್ಲೆ ನತದೃಷ್ಟ ಜಿಲ್ಲೆಯಾಗಿದ್ದು, ಸುಮಾರು 2000 ಕೆÀರೆಗಳನ್ನು ಹೊಂದಿದ್ದರೂ ಈ ಜಿಲ್ಲೆಯ ಕೆರೆಗಳು ಸರಿಯಾಗಿ ಮಳೆಯಾಗದೆ ಕಳೆದ 35 ವರ್ಷಗಳಿಂದ ಸರಿಯಾಗಿ ತುಂಬಿಲ್ಲ. ಎತ್ತಿನಹೊಳೆ ನೀರಿಗಾಗಿ ರೂಪಿಸಿರುವ ಯೋಜನೆಯಂತೆಯೆ ನೇತ್ರಾವತಿ-ತುಂಗಾಭದ್ರಾ ನದಿಗಳು ಸೇರುವ ಜಾಗದಲ್ಲಿ ಸುರಂಗದ ಮೂಲಕ ನೀರು ಹರಿಸುವಂತಹ ಮತ್ತೊಂದು ಮೆಗಾ ಪ್ರಾಜೆಕ್ಟ್ ರೂಪಿಸಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಜಿಲ್ಲೆ ಸೇರಿದಂತೆ ತುಮಕೂರು ಜಿಲ್ಲೆಗೆ ನೀರು ಹರಿಸುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ಆಶ್ವಾಸನೆ ನೀಡಿದ್ದಾರೆ.

      ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಗೂಬಲಗುಟ್ಟೆ ಗ್ರಾಮದ ಕೆರೆಯ ಬಳಿ ಬೃಹತ್ ಅಣೆಕಟ್ಟು ನಿರ್ಮಿಸಲಾಗುವುದು. ನಾವು ನುಡಿದಂತೆ ನಡೆಯುವವರಾಗಿದ್ದು, ಕೇವಲ ಆಶ್ವಾಸನೆ ನೀಡುವವರಲ್ಲ. ಈ ಯೋಜನೆ ಅನುಷ್ಠಾನಕ್ಕೆ ಜನರು ಸಹಕರಿಸಿ, ಉತ್ತಮ ನಾಯಕತ್ವವುಳ್ಳ ನಾಯಕರನ್ನು ಚುನಾವಣೆಯಲ್ಲಿ ಆಯ್ಕೆ ಮಾಡಬೇಕು. ಮಧುಗಿರಿ ನನಗೆ ರಾಜಕೀಯ ಪುನರ್‍ಜನ್ಮ ನೀಡಿದ್ದು, ನನ್ನ ಗೆಲುವಿನಲ್ಲಿ ಮಧುಗಿರಿ ಜನತೆಯ ಪಾತ್ರ ಬಹಳಷ್ಟು ದೊಡ್ಡದು, ಕ್ಷೇತ್ರದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕ್ರಿಬ್ಕೋ ನಿರ್ದೇಶಕ ಆರ್. ರಾಜೇಂದ್ರ, ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್. ಗಂಗಣ್ಣ, ಜಿ.ಪಂ ಸದಸ್ಯ ಜಿ.ಜೆ. ರಾಜಣ್ಣ, ತಾ.ಪಂ ಅಧ್ಯಕ್ಷೆ ಇಂದಿರಾ ದೇನಾನಾಯ್ಕ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ. ನಾಗೇಶ್ ಬಾಬು, ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಕೆ. ನಂಜುಂಡಯ್ಯ, ಕೆ. ಪ್ರಕಾಶ್, ಗೋವಿಂದರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್. ರಾಜಗೋಪಾಲ್, ಎಂ.ಎಸ್. ಮಲ್ಲಿಕಾರ್ಜುನಯ್ಯ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಂಗಾಶ್ಯಾಮಣ್ಣ, ಮತ್ತು ತಾಲ್ಲೂಕು ನಾಯಕ ಸಂಘದ ಗೌರವಾಧ್ಯಕ್ಷ ರಂಗಾಶ್ಯಾಮಣ್ಣ, ಅಧ್ಯಕ್ಷ ಸಿದ್ದಗಂಗಪ್ಪ, ಕಾರ್ಯದರ್ಶಿ ಶಂಕರನಾರಾಯಣ, ಜಗದೀಶ್ ಕುಮಾರ್, ಹನುಮಂತರಾಯಪ್ಪ ಹಾಗೂ ಮತ್ತಿತರರು ಇದ್ದರು.

 ಕುಮಾರಸ್ವಾಮಿ ಸುಳ್ಳಿನ ಗಿರಾಕಿ :

      ಮಾಜಿ ಸಿಎಂ ಕುಮಾರಸ್ವಾಮಿ ಸುಳ್ಳಿನ ಗಿರಾಕಿ, ಇವರ ಆಟ ಸಿರಾ ಕ್ಷೇತ್ರದಲ್ಲಿ ನಡೆಯುವುದಿಲ್ಲ. ಸಿರಾ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಮಾತ್ರ ಸ್ಪರ್ಧೆ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಗೆಲುವು ಖಚಿತ. ಜೆಡಿಎಸ್‍ಗೆ ಮೂರನೆ ಸ್ಥಾನ ಲಭ್ಯವಾಗಲಿದೆ. ವಿಪರ್ಯಾಸವೆಂದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ನಾವು ಬಸವರಾಜುರವರನ್ನು ಗೆಲ್ಲಿಸಲು ಕೆಲಸ ಮಾಡಿದ್ದರೆ, ಈಗ ಸಿರಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಹಿಂದೆ ಜಿ.ಎಸ್. ಬಸವರಾಜು ವಿರುದ್ದ ಕೆಲಸ ಮಾಡಿದ್ದರು. ಆದರೂ ಜಿ.ಎಸ್.ಬಿ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡಿದ್ದು, ವಿಜಯದ ಮಾಲೆ ಮಾತ್ರ ಕಾಂಗ್ರೆಸ್‍ಗೆ ದೊರೆಯಲಿದೆ.

– ಕೆ.ಎನ್. ರಾಜಣ್ಣ, ಮಾಜಿ ಶಾಸಕ.

      ಎಲ್ಲಾ ಪುರಸಭೆ ಸದಸ್ಯರ ಸಹಕಾರದಿಂದ ಅಧ್ಯಕ್ಷರಾಗಿ ತಿಮ್ಮರಾಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದು, ನೂತನ ಅಧ್ಯಕ್ಷರು ಪಟ್ಟಣದಲ್ಲಿ ಕುಡಿಯುವ ನೀರು, ಸ್ವಚ್ಛತೆ ಹಾಗೂ ಇತರೆ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಬೇಕು. ಪಟ್ಟಣದ ಅಭಿವೃದ್ಧಿಗೆ ಶಾಸಕನಾಗಿ ಎಲ್ಲ ರೀತಿಯ ಸಹಕಾರ ನೀಡುತ್ತೇನೆ.

-ಎಂ.ವಿ. ವೀರಭದ್ರಯ್ಯ, ಶಾಸಕ.

       ಎಲ್ಲಾ ಹಿರಿಯ ಮುಖಂಡರು, ಪುರಸಭೆ ಸದಸ್ಯರು ಮತ್ತು ಪಟ್ಟಣದ ಜನತೆಯ ಆಶೀರ್ವಾದದಿಂದ ಪುರಸಭೆಗೆ ನೂತನ ಅಧ್ಯಕ್ಷನಾಗಿ ಆಯ್ಕೆಯಾಗಿದ್ದು, ಕುಡಿಯುವ ನೀರು, ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ ಜನತೆಯ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ.

– ತಿಮ್ಮರಾಯಪ್ಪ, ಪುರಸಭೆ ನೂತನ ಅಧ್ಯಕ್ಷ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link