ಮಿಡಿಗೇಶಿ :
ಮಧುಗಿರಿ ತಾಲ್ಲೂಕಿನಾದ್ಯಂತ ಮದ್ಯ ಮಾರಾಟವು ಯಾವುದೇ ಭಯವಿಲ್ಲದೆ ರಾಜಾ ರೋಷವಾಗಿ ನಡೆಯುತ್ತ್ತಿದೆ. ಆದರೂ ಸಹ ಸಂಬಂಧಿಸಿದವರು ಕಣ್ಣಿದ್ದೂ ಕುರುಡರಂತೆ ಜಾಣ ಮೌನ ವಹಿಸಿರುವ ಒಳಗುಟ್ಟಾದರೂ ಏನು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಫೆಬ್ರುವರಿ ತಿಂಗಳಿನಲ್ಲಿ ಮಿಡಿಗೇಶಿ ಹೋಬಳಿಗೆ ಸೇರಿದ ಲಕ್ಷ್ಮೀಪುರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಮೂಲಕ ಜಿಲ್ಲಾ ಮಟ್ಟದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದ ಬಗ್ಗೆ ಕೆಲವರು ಲಿಖಿತ ಅರ್ಜಿಗಳನ್ನು ಸಹ ನೀಡಿದ್ದರು. ಆದರೂ ಯಾವ ಒಬ್ಬ ಅಧಿಕಾರಿಯು ಸಹ ಅಕ್ರಮ ಮದ್ಯ ಮಾರಾಟ ನಿಯಂತ್ರಣದ ಬಗ್ಗೆ ಬಾಯಿ ಬಿಡದೆ ಇರುವ ಒಳ ಮರ್ಮವೇನು?
ನಮ್ಮ ರಾಜ್ಯದವರು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಹಿಂದೇಟು ಹಾಕಿದರೆ, ನೆರೆಯ ಆಂಧ್ರ ರಾಜ್ಯದ ಅನಂತಪುರಂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಆದೇಶದ ಮೇರೆಗೆ ಮಡಕಶಿರಾ ತಾಲ್ಲೂಕಿನ ಸರ್ಕಲ್ ಇನ್ಸ್ಪೆಕ್ಟರ್ ರಾಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಮಧುಗಿರಿ ತಾಲ್ಲೂಕಿನಿಂದ ರವಾನೆಯಾದ ಅಕ್ರಮ ಮದ್ಯವನ್ನು ವಶ ಪಡಿಸಿಕೊಳ್ಳಲುವಲ್ಲಿ ಯಶಸ್ವಿಯಾಗಿದ್ದಾರೆ. ಗುಡಿಬಂಡೆ ಪೋಲೀಸ್ ಠಾಣಾಧಿಕಾರಿ ಸುಧಾಕರ್ ಯಾದವ್ ಹಾಗೂ ಸಿಬ್ಬಂದಿ ಮಾ. 02 ರಂದು ರಾತ್ರಿ 8 ಗಂಟೆ ಸಮಯದಲ್ಲಿ ಮಧುಗಿರಿ ಪಟ್ಟಣದಿಂದ ಚಿಕ್ಕಣ್ಣ ಎಂಬ ವೈನ್ಸ್ ಸ್ಟೋರ್ ಮಾಲೀಕ ಎಂದಿನಂತೆ ಮೂವತ್ಮೂರು ಬಾಕ್ಸ್ ಮದ್ಯವನ್ನು ತನ್ನ ವ್ಯಾಗನ್-ಆರ್ ವಾಹನದಲ್ಲಿ ಸಾಗಿಸುವಾಗ, ಲಕ್ಷ್ಮೀಪುರ ಗ್ರಾಮದ ಸಮೀಪ ಆಂಧ್ರ ದ ಗಡಿಯಲ್ಲಿ ಅಕ್ರಮ ಮದ್ಯ ಹಾಗೂ ವೈನ್ಸ್ ಸ್ಟೋರ್ ಮಾಲೀಕನನ್ನು ಬಂಧಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಂಡಿದ್ದಾರೆ. ವಶಪಡಿಸಿಕೊಂಡಿರುವ ಅಕ್ರಮ ಮದ್ಯದ ಅಂದಾಜು ಬೆಲೆ ಒಂದು ಲಕ್ಷದ ನಲವ್ತತು ಸಾವಿರ ರೂ.ಗಳೆನ್ನಲಾಗಿದೆ. ಬಂಧನವಾಗಿರುವ ವ್ಯಕ್ತಿಯ ಹೆಸರಿನಲ್ಲಿ ಮೂರು ವೈನ್ಸ್ ಸ್ಟೋರ್ಗಳಿವೆ ಎಂದು ತಿಳಿದು ಬಂದಿದೆ. ಅವುಗಳಲ್ಲಿ ಒಂದು ಮಧುಗಿರಿ ಪಟ್ಟಣದಲ್ಲಿದ್ದು, ಉಳಿದೆರಡು ಸ್ಟೋರ್ಗಳು ರಾಜ್ಯದ ಗಡಿ ಗ್ರಾಮಗಳಾದ ಕೊಡಿಗೇನಹಳ್ಳಿಯಲ್ಲಿ ಮತ್ತು ಚಂದ್ರಬಾವಿಯಲ್ಲಿ ಇರುತ್ತವೆ.
ವಶಪಡಿಸಿಕೊಂಡಿರುವ ಅಕ್ರಮ ಮದ್ಯದ ಮೌಲ್ಯ ಸುಮಾರು ಐವತ್ತು ಸಾವಿರ ರೂ.ಗಳೆಂದು ತಿಳಿದು ಬಂದಿದೆ. ಆಂಧ್ರ್ರದ ಅಧಿಕಾರಿಗಳೇನಾದರೂ ಜಿಡಿ ಪಾಳ್ಯ ಗ್ರಾಮದ ಸಮೀಪ ಇದ್ದಿದ್ದರೆ ಮತ್ತಷ್ಟು ಅಕ್ರಮ ಮದ್ಯ ಸಿಗುತ್ತಿತ್ತೆಂದು ಜಿಡಿ ಪಾಳ್ಯ ಗ್ರಾಮದ ಸುತ್ತ ಮುತ್ತಲ ಜನತೆ ಹೇಳುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ರೊಳ್ಳ ಪೋಲೀಸ್ ಠಾಣಾಧಿಕಾರಿ ಮಕ್ಬುಲ್ ಬಾಷಾ ಪಾಲ್ಗೊಂಡಿದ್ದರು. ಅಕ್ರಮ ಮದ್ಯ ಮಾರಾಟಗಾರರನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದ ಕೆಲವರು ಲಾಠಿ ರುಚಿಯನ್ನು ತಿಂದು ಪರಾರಿಯಾಗಿರುವುದಾಗಿಯೂ ವರದಿಯಾಗಿರುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ