ಮಧುಗಿರಿ :
ಐತಿಹಾಸಿಕ ಶ್ರೀ ಮಲ್ಲೇಶ್ವರಸ್ವಾಮಿ ದೇವಸ್ಥಾನದ ನಾಟ್ಯ ಮಂಟಪದ ಮುಂಭಾಗ ಇರುವ ಕಲ್ಲಿನ ಸ್ತಂಭದ ಮೇಲ್ಭಾಗದಲ್ಲಿ ಛಾವಣಿಗೆ ಹಾಕಿರುವ ಕಲ್ಲು ಚಪ್ಪಡಿಗಳು ಜರುಗಿದ್ದು ಬೀಳುವ ಹಂತಕ್ಕೆ ತಲುಪಿವೆ.
ಪಟ್ಟಣದ ಕೇಂದ್ರ ಬಿಂದುವಾಗಿರುವ ಹಾಗೂ ತನ್ನದೆ ಆದಂತಹ ಧಾರ್ಮಿಕ ನೆಲೆಗಟ್ಟಿನ ಹಿನ್ನೆಲೆಯನ್ನು ಹೊಂದಿರುವ ದೇವಾಲಯ ಇದಾಗಿದ್ದು, ಪ್ರತಿದಿನ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಿದೆ. ಈ ದೇವಾಲಯಕ್ಕೆ ಸೂಕ್ತವಾದ ನಿರ್ವಹಣೆ ಇಲ್ಲದಂತಾಗಿದೆ.
ಈ ದೇವಾಲಯದಲ್ಲಿನ ಇನ್ನೂ ಕೆಲ ಭಾಗಗಳು ಸಹ ಬೀಳುವ ಹಂತ ತಲುಪುತ್ತಿವೆ. ವಾಲುತ್ತಿರುವ ಕಲ್ಲುಗಳನ್ನು ನೋಡಿ ಭಕ್ತಾದಿಗಳು ಭಯಭೀತರಾಗುತ್ತಿದ್ದಾರೆ. ಶಿವನ ನೋಡಬೇಕೆ ಅಥವಾ ಶಿವನ ಪಾದ ಸೇರಬೇಕೆ? ಮುಖ್ಯ ದ್ವಾರದ ಸಮೀಪದಲ್ಲಿನ ಆವರಣಕ್ಕೆ ಭೇಟಿ ನೀಡಿದರೆ ಸಾಕು, ಭಯದ ವಾತವರಣದಲ್ಲಾಗಲಿ ಅಥವಾ ಆಕಸ್ಮಿಕವಾಗಿ ಕಲ್ಲುಗಳು ದೇವರ ದರ್ಶನಕ್ಕಾಗಿ ಹೋದವರ ಮೇಲೆ ಬಿದ್ದರೆ ನೇರವಾಗಿ ಶಿವನ ಪಾದ ಸೇರುವುದು ಗ್ಯಾರೆಂಟಿ ಎಂಬುದು ಭಕ್ತಾದಿಗಳ ಆರೋಪ.
ಶಿವರಾತ್ರಿಯ ಹಬ್ಬವು ಸಮೀಪಿಸುತ್ತಿದ್ದು, ಆದಷ್ಟು ಬೇಗ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಇಲಾಖೆಯವರು ಈ ಬಗ್ಗೆ ಗಮನಹರಿಸಿ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕೆಂದು ಭಕ್ತಾದಿಗಳು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ