ತುಮಕೂರು :  ಜೆ.ಸಿ.ಮಾಧುಸ್ವಾಮಿ ಖಾತೆ ಬದಲಾವಣೆ

 ತುಮಕೂರು: 

     ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವರಾಗಿದ್ದ ಜೆ.ಸಿ. ಮಾಧುಸ್ವಾಮಿ ಅವರ ಖಾತೆಗಳನ್ನು ಬದಲಾಯಿಸಲಾಗಿದೆ. ಇವರ ಬಳಿ ಇದ್ದ ಈ ಖಾತೆಗಳಲ್ಲಿ ಕಾನೂನು ಖಾತೆಯನ್ನು ಗೃಹಖಾತೆಯನ್ನು ಹೊಂದಿರುವ ಬಸವರಾಜ ಬೊಮ್ಮಾಯಿ ಅವರಿಗೆ, ಸಣ್ಣ ನೀರಾವರಿ ಖಾತೆಯನ್ನು ನೂತನ ಸಚಿವ ಸಿ.ಪಿ.ಯೋಗೀಶ್ವರ್ ಅವರಿಗೆ ನೀಡಲಾಗಿದೆ.

      ಜೆ.ಸಿ. ಮಾಧುಸ್ವಾಮಿ ಅವರಿಗೆ ಈ ಹಿಂದೆ ಕೆ.ಸುಧಾಕರ್ ಅವರ ಬಳಿ ಇದ್ದ ವೈದ್ಯಕೀಯ ಶಿಕ್ಷಣ ಜೊತೆಗೆ ಕನ್ನಡ ಮತ್ತು ಸಂಸ್ಕøತಿ ಇಲಾಖಾ ಖಾತೆಯನ್ನು ನೀಡಲಾಗಿದೆ. ಖಾತೆ ಬದಲಾವಣೆಯ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿರುವ ಜೆಸಿ ಮಾಧುಸ್ವಾಮಿ ತಮ್ಮ ಊರಿನಲ್ಲಿಯೇ ಇದ್ದು ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಗೈರಾಗಿದ್ದರು ಎಂದು ಹೇಳಲಾಗಿದೆ. ಸಿದ್ಧಗಂಗಾ ಮಠಕ್ಕೆ ಆಗಮಿಸಿದರಾದರೂ ಮುಖ್ಯಮಂತ್ರಿಗಳು ಹೋದ ನಂತರವೇ ಬಂದಿರುವುದು ಅಸಮಾಧಾನಕ್ಕೆ ಪುಷ್ಠಿ ನೀಡಿದಂತಾಗಿದೆ.

      ಈ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಜೆ.ಸಿ.ಎಂ. ಕಳೆದ ಎರಡು ದಿನಗಳ ಹಿಂದೆಯೇ ಮುಖ್ಯಮಂತ್ರಿಗಳ ಬಳಿ ಸಣ್ಣ ನೀರಾವರಿ ಖಾತೆಯನ್ನು ಬದಲಾವಣೆ ಮಾಡಬೇಡಿ ಎಂದಿದ್ದೆ. ಆದರೂ ಬದಲಾವಣೆ ಮಾಡಿದ್ದಾರೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

      ಜೆ.ಸಿ.ಎಂ. ಅವರು ಸಚಿವರಾದಾಗಿನಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ವಿವಾದಕ್ಕೆ ಒಳಗಾಗುತ್ತಲೇ ಬಂದಿದ್ದಾರೆ. ಬಿಜೆಪಿ ಸ್ವಪಕ್ಷೀಯರೊಡನೆ ಮಾತ್ರವಲ್ಲದೆ, ಇತರೆ ಮುಖಂಡರುಗಳ ಜೊತೆಯೂ ಸರಿಯಾಗಿ ವಿಶ್ವಾಸದಿಂದ ಇರಲಿಲ್ಲ ಎಂಬ ಮಾತುಗಳು ಆ ಪಕ್ಷದವರಿಂದಲೇ ಕೇಳಿಬರುತ್ತಿದ್ದವು. ಪ್ರಮುಖವಾಗಿ ಬಹಿರಂಗ ಸಭೆ, ಸಮಾರಂಭಗಳಲ್ಲಿ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಇರಿಸುಮುರಿಸಾಗುವ ರೀತಿಯಲ್ಲಿ ಮಾತನಾಡುವುದು ಹಲವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು.

      ಇದು ಸಾಲದೆಂಬಂತೆ ಕಳೆದ ವಾರ ಚಿ.ನಾ.ಹಳ್ಳಿ ತಾಲ್ಲೂಕು ಶೆಟ್ಟಿಕೆರೆಯಲ್ಲಿ ನಡೆದ ಅಭಿನಂದನಾ ಸಮಾರಂಭದ ನಂತರ ಹಲವು ಅಪಸ್ವರಗಳು ಕೇಳಿ ಬಂದಿದ್ದವು.ನೀರಾವರಿ ವಿಚಾರದಲ್ಲಿ ರಾಜಕೀಯ ಸಲ್ಲದು ಎಂಬಂತೆ ಜೆಸಿಎಂ ಅವರಿಗೆ ಸೆಡ್ಡು ಹೊಡೆದು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಅದೇ ಸ್ಥಳದಲ್ಲಿ ಮತ್ತೊಂದು ಅಭಿನಂದನಾ ಸಮಾರಂಭ ಏರ್ಪಡಿಸಿದ್ದರು. ಪರೋಕ್ಷವಾಗಿ ಜೆಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಾದ ಮರುದಿನವೇ ಜೆಸಿಎಂ ಅವರ ಖಾತೆಗಳಲ್ಲಿ ಬದಲಾವಣೆಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap