ಮಧುಗಿರಿ:-
ಪಟ್ಟಣದ ಐನಾತಿ ಕುಟುಂಬವೊಂದು ತಂದೆ ತಾಯಿ ಸಹೋದರರಿಲ್ಲದ ಅವಿವಾಹಿತರನ್ನು ಟಾರ್ಗೆಟ್ ಮಾಡಿ ವಿವಾಹದ ಹೆಸರಿನಲ್ಲಿ ವಂಚಿಸುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಾಜ್ಯ ಅಲ್ಲದೆ ಹೊರರಾಜ್ಯಗಳಲ್ಲೂ ಈ ಕುಟುಂಬ ವಂಚನೆ ಎಸಗಿರುವ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಜಿಲ್ಲೆಯ ಮಧುಗಿರಿ ಪಟ್ಟಣದ ಅರಳೆಪೇಟೆಯ ಬಸವಣ್ಣ ದೇವಸ್ಥಾನದ ಸಮೀಪ ಬಸವೇಶ್ವರ ಐಸ್ ಪ್ಯಾಕ್ಟರಿ ನಡೆಸುತ್ತಿರುವ ಎಂ.ಬಿ.ವಿನಯ್, ಅವರ ತಂದೆ ಬಸವರಾಜು, ತಾಯಿ ಶಾಂತಕುಮಾರಿ, ಸಹೋದರಿ ಶೋಭಾ. ಇವರೆಲ್ಲ ಸೇರಿಕೊಂಡು 7ಕ್ಕೂ ಹೆಚ್ಚು ಯುವತಿಯರಿಂದ ಚಿನ್ನಾಭರಣ, ಕೋಟ್ಯಂತರ ರೂ. ಪಡೆದು ವಂಚಿಸಿದ್ದಾರೆ. ಈ ಬಗ್ಗೆ ಕರ್ನಾಟಕ ಹಾಗೂ ಚೆನ್ನೈನ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ಗಳು ದಾಖಲಾಗಿವೆ.
ಮದುವೆಯಾಗುವುದಾಗಿ ನಂಬಿಸಿ ಪರಿಶಿಷ್ಟ ವರ್ಗದ ಯುವತಿಯನ್ನು ವಂಚಿಸಿದ್ದ ಪ್ರಕರಣದಲ್ಲಿ ತುಮಕೂರು ಸೆಷನ್ಸ್ ನ್ಯಾಯಾಲಯ ಆರೋಪಿ ವಿನಯ್ಗೆ ಜೈಲು ಶಿಕ್ಷೆ ವಿಧಿಸಿತ್ತು. ಮೂರು ತಿಂಗಳ ಬಳಿಕ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿದ್ದ ಈತನ ವಿರುದ್ಧ ರಾಜ್ಯದ ವಿವಿಧ ಜಿಲ್ಲೆ,ತಾಲೂಕುಗಳಲ್ಲಿ ಸಂತ್ರಸ್ತೆ ಯುವತಿಯರು ದೂರು ನೀಡಿದ್ದರಿಂದ ಹಲವು ಪ್ರಕರಣ ದಾಖಲಾಗಿವೆ. ಜೈಲಿನಿಂದ ಹೊರಬಂದ ಬಳಿಕವೂ, ಸಾಮಾಜಿಕ ಜಾಲತಾಣ ಸೇರಿದಂತೆ ಇತರ ವೆಬ್ಸೈಟ್ಗಳಲ್ಲಿ ನಕಲಿ ಪ್ರೊಫೈಲ್ ಅಪ್ಲೋಡ್ ಮಾಡಿ ವಂಚನೆ ಮುಂದುವರಿಸಿದ್ದ.
ಬಿಎಸ್ಸಿ,ಎಂಎಸ್ಸಿ ಓದಿರುವುದಾಗಿ ನಂಬಿಸುತ್ತಿದ್ದ ಸುಳ್ಳು ಹೇಳಿ ಯುವತಿಯರ ವಿಶ್ವಾಸ ಗಳಿಸುತ್ತಿದ್ದ 2016ರಿಂದಲೇ ವಂಚನೆ ಕೃತ್ಯ ನಡೆಸುತ್ತಿದ್ದು ಯುವತಿಯರಿಂದ ಈ ದೋಚಿದ ಹಣದಲ್ಲಿ ಮೋಜು, ಮಸ್ತಿ ಮಾಡಿದ್ದಾನೆ. ತಮಿಳುನಾಡಿನ ಚೆನ್ನೈನಲ್ಲಿ ಅಂಡಾಳ್,ಪಾವಗಡದ ಸಾಯಿಸೌಂದರ್ಯ,ಹಿರಿಯೂರಿನ ನಿಹಾರಿಕಾ ಹಾಗೂ ತುಮಕೂರಿನ ಕೀರ್ತನಾ ಎಂಬ ಯುವತಿಗೆ ವಂಚಿಸಿ 15 ಲಕ್ಷ ರೂಪಾಯಿ ಪಡೆದಿದ್ದಾನೆ.
ಕೆಲ ಅವಿವಾಹಿತ ಯುವತಿಯರ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಲೋನ್ ಮಾಡಿಕೊಂಡ ಪ್ರಕರಣಗಳೂ ಬೆಳಕಿಗೆ ಬಂದಿವೆ.ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿರುವ ಯುವತಿಯೊಬ್ಬಳಿಗೆ. ಚಿಕ್ಕ ವಯಸ್ಸಲ್ಲೇ ತಂದೆ ಮೃತಪಟ್ಟಿದ್ದು ತಾಯಿಯೊಂದಿಗೆ ವಾಸವಾಗಿದ್ದ ಈಕೆ, 2021ರಲ್ಲಿ ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ ತಮ್ಮ ಮದುವೆ ಪ್ರೊಫೈಲ್ ನೋಂದಣಿ ಮಾಡಿದ್ದಳು. ಇದನ್ನು ಗಮನಿಸಿದ ವಿನಯ್ ಸಹೋದರಿ ಶೋಭಾ, ಅಣ್ಣನ ಮದುವೆಗೆ ಹುಡುಗಿ ನೋಡುತ್ತಿದ್ದೇವೆ.
ನೀವು ಸೂಕ್ತ ಜೋಡಿ ಎಂದು ಸಹೋದರನ ನಕಲಿ ಪ್ರೊಫೈಲ್ ಕಳುಹಿಸಿ ಮರುದಿನ ಯುವತಿಯ ಮನೆಗೆ ಬಂದ ವಿನಯ್ ಕುಟುಂಬಸ್ಥರು,ಮಗ ವಿದೇಶದಲ್ಲಿ ಎಕ್ಸಪೋರ್ಟ್ ಆ್ಯಂಡ್ ಇಂಪೋರ್ಟ್ ಕೆಲಸ ಮಾಡಿಕೊಂಡಿದ್ದಾನೆ, ನಮಗೆ ಮಧುಗಿರಿಯಲ್ಲಿ ಜಮೀನು, ಐಸ್ ಫ್ಯಾಕ್ಟರಿ ಇದೆ. ತುಮಕೂರಿನಲ್ಲಿ ಹೊಸಮನೆ ಕಟ್ಟಿಸುತ್ತಿದ್ದೇವೆ ಎಂದು ಹೇಳಿ ಮದುವೆಗೆ ಒಪ್ಪಿಗೆ ಸೂಚಿಸಿದ್ದರು.ಶಾಸ್ರೋಕ್ತ ವಾಗಿ ಹಾರಬದಲಾಯಿಸಿಕೊಂಡಿದ್ದರು. ನನ್ನ ತಂಗಿ ಮದುವೆ ನಂತರವೇ ನಮ್ಮ ಮದುವೆ ಎಂದು ಹೇಳಿದ್ದ ವಂಚಕ, ಕೆಲ ದಿನಗಳ ಬಳಿಕ ಲ್ಯಾಟ್ರಿಯಾ ದೇಶದಲ್ಲಿ ತುರ್ತು ವ್ಯವಹಾರಕ್ಕೆ 30 ಲಕ್ಷ ರೂ. ಬೇಕೆಂಬ ಬೇಡಿಕೆ ಇಟ್ಟಿದ್ದನು ಇದನ್ನು ನಂಬಿದ ಯುವತಿ 10 ಲಕ್ಷ ರೂ. ನೀಡಿದ್ದಳು. ನಂತರ ಲ್ಯಾಟ್ರಿಯಾಗೆ ಹೋಗಲು ಡಿಫೆಂಡೆಂಟ್ ವೀಸಾ ಮಾಡಿಸಲು ಮ್ಯಾರೇಜ್ ಸರ್ಟಿಫಿಕೇಟ್ ಬೇಕಾಗಿದೆ ಎಂದು ಯುವತಿಯನ್ನು ಕರೆದುಕೊಂಡು ನಾಗರಬಾವಿಯಲ್ಲಿರುವ ರಿಜಿಸ್ಟಾರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿದ್ದನೆಂದು ತಿಳಿದು ಬಂದಿದ್ದು.
2021 ರಿಂದ 2025ರವರೆಗೆ ಹಂತ ಹಂತವಾಗಿ ವರದಕ್ಷಿಣೆ ಹೆಸರಿನಲ್ಲಿ 21.12 ಲಕ್ಷ ರೂ. ಪಡೆದುಕೊಂಡು,ತಂದೆ- ತಾಯಿಗೆ ಅನಾರೋಗ್ಯ, ಮನೆ ನಿರ್ಮಾಣಕ್ಕೆ,ಮದುವೆ ಕಲ್ಯಾಣ ಮಂಟಪದ ಖರ್ಚು 7 ಲಕ್ಷ ರೂ.ಅದ್ದೂರಿ ಮದುವೆ ಹೆಸರಲ್ಲಿ 5 ಲಕ್ಷ ರೂ. ಲಗ್ನಪತ್ರಿಕೆ ಹಂಚಿದ ಬಳಿಕ ತಾನು ಮದುವೆಗೆ ಬರುವುದಿಲ್ಲ ಎಂದು ಹೆದರಿಸಿ 3 ಲಕ್ಷ ರೂ.- ಹೀಗೆ ಎರಡೂವರೆ ವರ್ಷದಲ್ಲಿ 40 ಲಕ್ಷ ರೂ.ಗೂ ಹೆಚ್ಚು ಹಣ ವಸೂಲಿ ಮಾಡಿದ್ದರು. ನಂತರ 2025 ಫೆ. 2 ರಂದು ತುಮಕೂರಿನ ಕ್ಯಾತ್ಸಂದ್ರದ ಚನ್ನಕೇಶವಸ್ವಾಮಿ ಕಲ್ಯಾಣ ಮಂಟಪದಲ್ಲಿ ವಿವಾಹವಾಗಿದ್ದ.
ಮದುವೆಯಾಗಿ ಎರಡು ತಿಂಗಳ ಬಳಿಕ ಯುವತಿಯ ಬಳಿ ಇದ್ದ 80 ಗ್ರಾಂ ಚಿನ್ನಾಭರಣ ಕಿತ್ತುಕೊಂಡಿದ್ದ.ಮದುವೆ ಹೆಸರಿನಲ್ಲಿ 30 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ 5 ಮೇ 2025 ರಂದು ಇನ್ನೊಬ್ಬ ಯುವತಿ ಪ್ರಕರಣ ದಾಖಲಿಸಿದ ಬಳಿಕ ವಂಚಕ ವಿನಯ್ ಅಸಲಿ ಬಣ್ಣ ಬಯಲಾಗಿದೆ.ಮಧುಗಿರಿ ಬಸವ ರಾಜು, ಗಣೇಶ್,ವಿನಯ್ ಆರಾಧ್ಯ, ಎಂಬ ಹಲವು ಹೆಸರುಗಳನ್ನು ಹೊಂದಿರುವ ಫೇಸ್ಬುಕ್, ಇನ್ಸ್ಟಾಗ್ರಾಂ ಐಡಿ,ವಿವಿಧ ಮ್ಯಾಟ್ರಿಮೋನಿಯಲ್ಲಿ ಬೇರೆ ಬೇರೆ ಹೆಸರಿನಲ್ಲಿ ನೋಂದಣಿ ಮಾಡಿ ಯುವತಿಯರನ್ನು ವಂಚಿಸುತ್ತಿದ್ದನೆಂದು ತಿಳಿದು ಬಂದಿದೆ.
