ಮಧುಗಿರಿ:

ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಬೇಸಾಯ ಪದ್ಧತಿ ಮಾರ್ಪಾಡು ಆದ ಹಿನ್ನೆಲೆಯಲ್ಲಿ ಪೌಷ್ಟಿಕ ಆಹಾರ ದೊರೆಯದೆ ಇರುವುದು ಬೇಸರದ ಸಂಗತಿ ಎಂದು ರೈತ ಸಂಘದ ಜಿ. ಶಂಕರಪ್ಪ ತಿಳಿಸಿದರು.
ಅವರು ಗುರುವಾರ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಕೃಷಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಕಿಸಾನ್ ಗೋಷ್ಠಿ ಮತ್ತು ರೈತರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಿಪ್ಪೆಗೊಬ್ಬರ ಮತ್ತು ಸಾಂಪ್ರದಾಯಿಕ ಕೃಷಿ ಪದ್ದತಿಯಿಂದ ಆಹಾರ ಎಂದಿಗೂ ಕಲುಷಿತವಾಗುತ್ತಿರಲಿಲ್ಲ. ವ್ಯವಸಾಯ ವ್ಯವಸ್ಥೆಯನ್ನು ಸರಿಪಡಿಸಿಕೊಂಡು ನೀರಾವರಿಗೆ ಆದ್ಯತೆ, ಮಾರುಕಟ್ಟೆ ಬಲಪಡಿಸುವ ಮೂಲಕ ಸರ್ಕಾರ ರೈತರ ನೆರವಿಗೆ ಬರಬೇಕು. ಭೂಮಿಯಲ್ಲಿ ಫಲವತ್ತತೆ ನಾಶವಾಗಿ ಸೂಕ್ಷ್ಮಾಣುಜೀವಿಗಳು ಇಲ್ಲದಂತಾಗಿದೆ. ರೈತರನ್ನು ಆರ್ಥಿಕವಾಗಿ ಸದೃಢ ಪಡಿಸದ ಹೊರತು ರೈತ ದಿನ ಆಚರಣೆಗೆ ಅರ್ಥ ಬರುವುದಿಲ್ಲವೆಂದರು.
ಬಿಜೆಪಿ ನೇತೃತ್ವದ ಸರ್ಕಾರಗಳಲ್ಲಿ ರೈತರಿಗೆ ಮಾರಕವಾಗುವಂತಹ ಕಾಯ್ದೆಗಳು ಜಾರಿಯಲ್ಲಿವೆ. ಕರ್ನಾಟಕದಲ್ಲಿಯೂ ಕೂಡ ದೆಹಲಿ ಮಾದರಿಯ ಹೋರಾಟ ನಡೆಯಬೇಕಾಗಿದೆ. ಇಸ್ರೇಲ್ನಂತಹ ಪುಟ್ಟ ದೇಶದಲ್ಲಿ ಸಂಪೂರ್ಣ ನೀರಾವರಿ ಕೃಷಿ ಪದ್ದತಿ ಇರಬೇಕಾದರೆ ನಮ್ಮ ದೇಶದಲ್ಲಿ ಆಗುತ್ತಿಲ್ಲವೇಕೆ ಎಂದು ಕಳವಳ ವ್ಯಕ್ತಪಡಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಹನುಮಂತರಾಯಪ್ಪ, ಕೃಷಿ ಸಮಾಜ ಉಪಾಧ್ಯಕ್ಷ ಚೆನ್ನಲಿಂಗಪ್ಪ, ಅಮರಾವತಿ ಗಂಗಾಧರ, ತುಂಗೋಟಿ ಲಕ್ಷ್ಮೀಕಾಂತ, ಗುಟ್ಟೆ ರಮೇಶ್, ಉಮೇಶ್, ಸಿದ್ಧಾಪುರ ರಂಗಶ್ಯಾಮಣ್ಣ, ರೈತ ವೇದಿಕೆ ಅಧ್ಯಕ್ಷ ಸುನೀಲ್ ಕುಮಾರ್, ಮಿಡಿಗೇಶಿ ನಾಗಣ್ಣ, ಮಿಡಿಗೇಶಿ ಗ್ರಾಪಂ ಅಧ್ಯಕ್ಷೆ ಪ್ರೇಮಲತಾ ರವಿಕುಮಾರ್, ತೋಟಗಾರಿಕೆ ಇಲಾಖೆಯ ವಿಶ್ವನಾಥ ಗೌಡ, ರೇಷ್ಮೆ ಇಲಾಖೆ ಲಕ್ಷ್ಮೀ ನರಸರಸಯ್ಯ, ಅರಣ್ಯ ಇಲಾಖೆಯ ಮಂಜುನಾಥ್, ಹೋಬಳಿಯ ಕೃಷಿ ಅಧಿಕಾರಿಗಳು, ತಾಂತ್ರಿಕ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರದವರು ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








