ರಾಯಚೂರು:
ಮಸ್ಕಿ ಪಟ್ಟಣದ ಮಲ್ಲಿಕಾರ್ಜುನ ಬೆಟ್ಟ ಮತ್ತು ಆಂಜನೇಯ ಸ್ವಾಮಿ ದೇವಾಲಯ ಸುತ್ತಲೂ ನಡೆದಿರುವ ಉತ್ಖನನದ ಸಂದರ್ಭ ಮಾನವನ ನೆಲೆಗೆ ಸಂಬಂಧಿಸಿದ ಸುಮಾರು 4000 ವರ್ಷಗಳ ಹಿಂದಿನ ವಸ್ತುಗಳು ಪತ್ತೆಯಾಗಿವೆ. ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಅಶೋಕನ ಶಾಸನ ಆವಿಷ್ಕಾರದ ಮೂಲಕ ರಾಯಚೂರು ಜಿಲ್ಲೆ ಖ್ಯಾತಿ ಪಡೆದುಕೊಂಡಿತ್ತು. ಸದ್ಯ ಮಸ್ಕಿಯಲ್ಲಿ ಸಂಶೋಧನೆ ನಡೆಸಿರುವ ಪುರಾತತ್ತ್ವ ಸಂಶೋಧಕರ ತಂಡವೂ ಮಸ್ಕಿ ಇತಿಹಾಸವನ್ನು 4000 ವರ್ಷಗಳ ಹಿಂದಕ್ಕೆ ಕೊಂಡೊಯ್ದಿದೆ.
ಭಾರತ, ಅಮೆರಿಕ, ಕೆನಡಾ ದೇಶಗಳ 20ಕ್ಕೂ ಹೆಚ್ಚು ಸಂಶೋಧಕರು ಮಸ್ಕಿಯಲ್ಲಿ ಉತ್ಖನನವನ್ನು ಕೈಗೊಂಡಿದ್ದಾರೆ. ಈ ವೇಳೆ ಅವರ ಸಂಶೋಧನೆಯಲ್ಲಿ 4000 ವರ್ಷಗಳಷ್ಟು ಹಳೆಯದಾದ ಮಾನವನ ವಸಾಹತು ಪ್ರದೇಶ ಇತ್ತು ಎಂಬುವುದಕ್ಕೆ ಪುರಾವೆಗಳು ಪತ್ತೆಯಾಗಿದೆ. ಉತ್ಖನನದ ವೇಳೆ ವಿವಿಧ ಕಲಾಕೃತಿಗಳು ಸೇರಿದಂತೆ ಕೆಲವು ಉಪಕರಣಗಳು ಪತ್ತೆಯಾಗಿದೆ. ಆ ಮೂಲಕ ಒಂದು ಅಭಿವೃದ್ಧಿ ಹೊಂದುತ್ತಿದ್ದ ವಸಾಹತು ಇಲ್ಲಿ ಇತ್ತು ಎಂಬ ಸುಳಿವು ಸಂಶೋಧಕರಿಗೆ ಸಿಕ್ಕಿದೆ.
ಭಾರತದ ದೆಹಲಿಯ ಎನ್ಸಿಆರ್ನ ಶಿವ್ ನಾಡರ್, ಅಮೆರಿಕ ಮೂಲದ ಸ್ಟ್ಯಾನ್ ಫೋರ್ಡ್ ವಿವಿಯ ಪ್ರೊಫೆಸರ್ ಡಾ ಆಂಡ್ರ್ಯೂ ಎಂ ಬಾಯರ್, ಕೆನಡಾದ ಮೆಕ್ಗಿಲ್ ವಿವಿಯ ಡಾ ಪೀಟರ್ ಜಿ ಜೋಹಾನ್ಸೆನ್ ಅವರ ನೇತೃತ್ವದಲ್ಲಿ ಉತ್ಖನನ ನಡೆಸಲಾಗಿದೆ. ಕಳೆದ ಮೂರು ತಿಂಗಳಿನಿಂದ ಈ ತಂಡವೂ ಮಸ್ಕಿಯಲ್ಲಿ ಸಂಶೋಧನೆ ನಡೆಸಿದ್ದು, ಈ ಹುಡುಕಾಟದಲ್ಲಿ ನಾಗರಿಕತೆಯ ಚಿಹ್ನೆಗಳನ್ನು ಪತ್ತೆ ಮಾಡುವ ಕಾರ್ಯವನ್ನು ಮಾಡಿದ್ದಾರೆ.
ಕಾರ್ಯಾಚರಣೆ ನಡೆಸುವ ಮುನ್ನ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ಅನುಮತಿ ಪಡೆದುಕೊಂಡಿದ್ದಾರೆ. ಮಸ್ಕಿಯಲ್ಲಿ ಸುಮಾರು 271 ಸ್ಥಾನಗಳನ್ನು ಗುರುತಿಸಿದ್ದ ತಂಡ ಸದ್ಯ ಮಲ್ಲಿಕಾರ್ಜುನ ಬೆಟ್ಟ ಮತ್ತು ದೇವಾಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕ್ರಿಪೂ 11 ಮತ್ತು 14ನೇ ಶತಮಾನಗಳಲ್ಲಿ ಮಾನವರು ಇಲ್ಲಿ ವಾಸಿಸುತ್ತಿದ್ದರು ಎಂಬುದನ್ನು ದೃಢಿಪಡಸುವ ಪುರಾವೆಗಳನ್ನು ಪತ್ತೆ ಮಾಡಿದ್ದಾರೆ. ಉತ್ಖನನದಲ್ಲಿ ಮಣ್ಣಿನ ಮಡಿಕೆಗಳು, ಹರಿತವಾದ ಉಪಕರಣಗಳು, ಅಡುಗೆ ಸಾಮಾಗ್ರಿಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕದಂಬಿ, ಸುಮಾರು 4 ಸಾವಿರ ವರ್ಷಗಳ ಹಿಂದೆ ಮಸ್ಕಿಯಲ್ಲಿ ಮಾನವನ ನೆಲೆ ಇತ್ತು ಎಂಬದಕ್ಕೆ ಪುರಾವೆಗಳು ಸಿಕ್ಕಿದೆ ಎಂದು ತಿಳಿಸಿದ್ದಾರೆ.