ನವದೆಹಲಿ:
ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ ರಾಜ್ಯಸಭೆಯಲ್ಲೂ ಪಾಸಾಗಿದೆ. ರಾಷ್ಟ್ರೀಯ ಉದ್ದೀಪನ ನಿಗ್ರಹ ಮಸೂದೆ ಸಹ ಪಾಸಾಗಿದ್ದು, ಎರಡೂ ಮಸೂದೆಗಳು ರಾಷ್ಟ್ರಪತಿಗಳಿಂದ ಅಂಗೀಕಾರಗೊಳ್ಳುವುದು ಬಾಕಿ ಇದೆ. ಸೋಮವಾರ ಲೋಕಸಭೆಯಲ್ಲಿ ಅನುಮೋದನೆ ಪಡೆದಿತ್ತು.
ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಮಂಗಳವಾರ ಮಧ್ಯಾಹ್ನ ಮೇಲ್ಮನೆಯಲ್ಲಿ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯನ್ನು ಮಂಡಿಸಿದರು. ‘20 ದೇಶಗಳಲ್ಲಿ ಕ್ರೀಡಾ ನೀತಿ ಇದೆ. ಭಾರತವನ್ನು 21ನೇ ದೇಶವನ್ನಾಗಿಸಬೇಕು ಎಂದು ರಾಜ್ಯಸಭೆಗೆ ಮನವಿ ಮಾಡುತ್ತೇನೆ’ ಎಂದು ಮಾಂಡವೀಯ ತಮ್ಮ ಮಾತು ಆರಂಭಿಸಿದರು.
ಚರ್ಚೆ ವೇಳೆ ಬಿಜೆಡಿ ಸಂಸದ ಶುಭಾಶಿಷ್ ಕುಂತಿಯಾ, ಕ್ರೀಡಾ ಆಡಳಿತ ಮಸೂದೆಯು ಕೆಲ ಸಮಸ್ಯೆಗಳನ್ನು ಒಳಗೊಂಡಿರುವುದಾಗಿ ತಿಳಿಸಿದರು. ಮಸೂದೆಯು ಕ್ರೀಡಾಪಟುಗಳಿಗೆ ಪೂಕರವಾಗಿರಬೇಕೇ ಹೊರತು ಅವರನ್ನು ನಿಯಂತ್ರಿಸಬಾರದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಂಡವೀಯ, ‘ಕ್ರೀಡಾಪಟುಗಳಿಗೆ ಏನು ನೆರವು ಬೇಕೋ ಅದನ್ನು ಒದಗಿಸುವುದಷ್ಟೇ ಸರ್ಕಾರದ ಕೆಲಸ. ಸರ್ಕಾರವು ಯಾರನ್ನೂ ನಿಯಂತ್ರಿಸಲು ಇಚ್ಛಿಸುವುದಿಲ್ಲ. ಕ್ರೀಡಾ ಆಡಳಿತದಲ್ಲಿ ಪಾರದರ್ಶಕತೆ ತರಬೇಕು ಎನ್ನುವುದೇ ನಮ್ಮ ಉದ್ದೇಶ’ ಎಂದರು.
ಬಿಸಿಸಿಐ ಒಂದು ಖಾಸಗಿ ಸಂಸ್ಥೆಯಾಗಿದ್ದು, ಸರ್ಕಾರದ ನಿಯಂತ್ರಣದಿಂದ ಹೊರಗಿದೆ. ಆದರೆ ಕ್ರೀಡಾ ಆಡಳಿತ ಮಸೂದೆಯು ರಾಜ್ಯಸಭೆಯಲ್ಲೂ ಅಂಗೀಕಾರ ಪಡೆದ ಕಾರಣ ಇತರೆಲ್ಲಾ ಕ್ರೀಡಾ ಒಕ್ಕೂಟಗಳ ಬಿಸಿಸಿಐ ಮೇಲೂ ಸರ್ಕಾರ ಕಣ್ಣಿಡಲಿದೆ. ಅಲ್ಲದೆ, ತನ್ನ ವಾರ್ಷಿಕ ಮಾನ್ಯತೆಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.
2011ರಿಂದ ರಾಷ್ಟ್ರೀಯ ಕ್ರೀಡಾ ಸಂಹಿತೆ ಚಾಲ್ತಿಯಲ್ಲಿತ್ತು. ಈಗ ಅದನ್ನು ಬದಲಾಯಿಸಿ ಕ್ರೀಡಾ ಆಡಳಿತ ಮಸೂದೆ 2025 ಪರಿಚಯಿಸಲಾಗಿದೆ. ಇದರಲ್ಲಿ ರಾಷ್ಟ್ರೀಯ ಕ್ರೀಡಾ ಮಂಡಳಿ(ಎನ್ಎನ್ಬಿ), ರಾಷ್ಟ್ರೀಯ ಕ್ರೀಡಾ ನ್ಯಾಯಾಧಿಕರಣ(ಎನ್ಎಸ್ಟಿ), ರಾಷ್ಟ್ರೀಯ ಕ್ರೀಡಾ ಚುನಾವಣಾ ಪ್ಯಾನೆಲ್ ಸ್ಥಾಪನೆಗೆ ಅವಕಾಶ ರೂಪಿಸಲಾಗಿದೆ. ಎನ್ಎಸ್ಬಿಯು ಬಿಸಿಸಿಐ ಸೇರಿ ಎಲ್ಲಾ ರಾಷ್ಟ್ರೀಯ ಕ್ರೀಡಾ ಫೆಡರೇಶನ್ಗಳ ಕಾರ್ಯವೈಖರಿ ಮೇಲೆ ಕಣ್ಣಿಡಲಿದ್ದು, ಕಾರ್ಯಚಟುವಟಿಕೆಗಳು ನಿಯಮಾನುಸಾರ ನಡೆಯಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಿದೆ.
