ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ: ಆದಾಯದ ಮೇಲೆ ಭಾರಿ ಹೊಡೆತ

ಬೆಂಗಳೂರು

     ನಮ್ಮ ಮೆಟ್ರೋ  ಟಿಕೆಟ್ ದರ ಏರಿಕೆ ಆಗುತ್ತಿದ್ದಂತೆ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದ್ದು, ಇದರಿಂದ ಆದಾಯದಲ್ಲಿ ನಷ್ಟ ಉಂಟಾಗುತ್ತಿದೆಯಂತೆ. ಹೀಗಾಗಿ ಅದನ್ನು ಸರಿದೂಗಿಸಲು ನಮ್ಮ ಮೆಟ್ರೋ ರೈಲಿನ ಒಳಭಾಗ ಮತ್ತು ಹೊರಭಾಗದಲ್ಲೂ ಜಾಹೀರಾತು ಹಾಕಲು ಮುಂದಾಗಿದೆ.

    ಮೆಟ್ರೋ ಟಿಕೆಟ್ ಏರಿಕೆ ಆದ ಮೇಲೆ ಮೆಟ್ರೋದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದ್ದು, ಇದರಿಂದ ಮೆಟ್ರೋಗೆ ನಷ್ಟ ಉಂಟಾಗುತ್ತಿದೆ ಎನ್ನಲಾಗುತ್ತಿದೆ. ಇದರಿಂದ ತಪ್ಪಿಸಿಕೊಳ್ಳಲು ಬಿಎಂಆರ್​ಸಿಎಲ್​ ಜಾಹೀರಾತುಗಳ ಮೊರೆ ಹೋಗಿದ್ದು, ಮೆಟ್ರೋ ಒಳಗೆ ಮತ್ತು ಹೊರಗೆ ಬಣ್ಣ ಬಣ್ಣದ ಜಾಹೀರಾತುಗಳು ಕಾಣಿಸುತ್ತಿವೆ. ಆರ್ಥಿಕ ಹೊಡೆತದಿಂದ ಹೊರಬರಲು ಮೆಟ್ರೋ ಮುಂದಿರುವ ಆಯ್ಕೆ ಸದ್ಯ ಜಾಹೀರಾತು ಎಂಬಂತಾಗಿದೆ.

    ಬಿಎಂಆರ್​​ಸಿಎಲ್​ನಲ್ಲಿ ಸದ್ಯ 57 ರೈಲು ಸಂಚಾರ ಮಾಡುತ್ತಿವೆ. ಈಗ ಒಟ್ಟು 57 ರೈಲುಗಳಲ್ಲೂ ಜಾಹೀರಾತು ಅಳವಡಿಕೆಗೆ ಅವಕಾಶ ನೀಡಲಾಗಿದ್ದು, ಈ ಪೈಕಿ ನೇರಳೆ ಮಾರ್ಗದ 33 ಹಾಗೂ ಹಸಿರು ಮಾರ್ಗದಲ್ಲಿ 24 ರೈಲುಗಳಿಗೆ ಜಾಹೀರಾತು ಅಳವಡಿಸಲಾಗುತ್ತಿದೆ. ಸಂಪೂರ್ಣ ರೈಲುಗಳಿಗೆ ಮೂಲ ಬಣ್ಣ ಹೊರತು ಪಡಿಸಿ ಜಾಹೀರಾತು ಹಾಕಲು ಪ್ಲ್ಯಾನ್​ ಮಾಡಲಾಗುತ್ತಿದೆ. ರೈಲುಗಳ ಒಳಭಾಗ ಮತ್ತು ಹೊರಭಾಗದಲ್ಲಿ ಇಲ್ಲಿಯವರೆಗೆ ಯಾವುದೇ ಜಾಹೀರಾತು ಇರಲಿಲ್ಲ. ಇನ್ಮುಂದೆ ಎಲ್ಲ ರೈಲುಗಳ ಒಳಭಾಗ ಹಾಗೂ ಹೊರಭಾಗದಲ್ಲಿ ಜಾಹೀರಾತು ಅಳವಡಿಸಲು ಅನುಮತಿ ನೀಡಲಾಗಿದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್​ ಹೇಳಿದ್ದಾರೆ. 

   ಇನ್ನೂ ಮೆಟ್ರೋ ರೈಲುಗಳಲ್ಲಿ ಜಾಹೀರಾತು ಅಳವಡಿಕೆಗೆ 25 ಕೋಟಿ ರೂ ಗುತ್ತಿಗೆ ನೀಡಲಾಗಿದ್ದು, ಹಸಿರು ಮಾರ್ಗಕ್ಕೆ 11 ಕೋಟಿ ರೂ ಹಾಗೂ ನೇರಳೆ ಮಾರ್ಗಕ್ಕೆ 14 ಕೋಟಿ ರೂ ಟೆಂಡರ್ ಆಗಿದೆ. ಮೆಟ್ರೋ ಒಟ್ಟು 25 ಕೋಟಿ ರೂ ಟೆಂಡರ್ ಪೂರ್ಣಗೊಳಿಸಿದೆ. 7 ವರ್ಷದವರೆಗೆ ಜಾಹೀರಾತು ಹಾಕಲು ಅವಕಾಶ ನೀಡಿದ್ದು, ಮುದ್ರಾ ವೆಂಚರ್ಸ್ ಮತ್ತು ಲೋಕೇಶ್ ಔಟ್ ಡೋರ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರತಿ ವರ್ಷ 5% ಹೆಚ್ಚಳ ಮಾಡಲಾಗುತ್ತದೆ. ಸಾಮಾಜಿಕ‌ ಕಳಕಳಿ ಇರುವ ಜಾಹೀರಾತು ಹಾಕಲು ಮಾತ್ರ ಅವಕಾಶ ನೀಡಲಾಗಿದೆ. ಆದರೆ ಇದಕ್ಕೆ ಮೆಟ್ರೋ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

  ಒಟ್ಟಿನಲ್ಲಿ ನಮ್ಮ ಮೆಟ್ರೋ ಏನೋ ಆದಾಯ ಸಾಲುತ್ತಿಲ್ಲ. ಮಾಡಿರುವ ಸಾಲಕ್ಕೆ ಬಡ್ಡಿಕಟ್ಟಲು ಆಗುತ್ತಿಲ್ಲ, ಅದಕ್ಕೆ ಜಾಹೀರಾತು ಮೊರೆ ಹೋಗಿದ್ದೀವಿ ಎನ್ನುತ್ತಿದ್ದು, ಇತ್ತ ಪ್ರಯಾಣಿಕರು ಮಾತ್ರ ಟಿಕೆಟ್ ದರ ಕಡಿಮೆ ಮಾಡಿ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗುತ್ತದೆ, ಆದಾಯೂ ಬರುತ್ತದೆ ಎನ್ನುತ್ತಿದ್ದಾರೆ.

Recent Articles

spot_img

Related Stories

Share via
Copy link