ಮಿಡಿಗೇಶಿ :
ಮಧುಗಿರಿ-ಪಾವಗಡಕ್ಕೆ ಮುಖ್ಯ ರಸ್ತೆಯಲ್ಲಿ ಬೇಡತ್ತೂರು ಗ್ರಾಮಕ್ಕೆ ಹಾದು ಹೋಗುವ ಸರ್ಕಲ್ ಬಳಿ ಇದ್ದ ಪೆಟ್ಟಿಗೆ ಅಂಗಡಿಯ ಬೀಗವನ್ನು ಜು. 7 ರಂದು ಬೆಳಗ್ಗೆ 11 ರಿಂದ 12 ಗಂಟೆಯ ಸಮಯದಲ್ಲಿ ಯಾರೋ ಒಡೆದು, ಎಲ್ಇಡಿ ಟಿವಿ,ಸಿಗರೇಟು ಪಾಕೆಟ್ಗಳನ್ನು ಹಾಗೂ ವ್ಯಾಪಾರದ ಹಣವನ್ನು ಸಂಗ್ರಹಿಸಿಡುತ್ತಿದ್ದ ಡಬ್ಬವನ್ನು ಹೊತ್ತು ಹೋಗಿದ್ದಾರೆ. ಅಂಗಡಿ ಮಾಲೀಕರಾದ ಕಲ್ಪನಾ ಶ್ರೀನಿವಾಸಯ್ಯನವರು ಸಂಬಂಧಿಕರ ಮದುವೆ ಕಾರ್ಯಕ್ಕೆ ಹೋಗಿದ್ದರು ಎನ್ನಲಾಗಿದೆ. ಶ್ರೀನಿವಾಸಯ್ಯನು ಮಿಡಿಗೇಶಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೆ ಕಸಾಪುರ ಹಾಗೂ ಲಕ್ಷ್ಮೀಪುರ ಗ್ರಾಮಗಳ ಬಳಿ ಪೆಟ್ಟಿಗೆ ಅಂಗಡಿಗಳಲ್ಲಿ ಕಳ್ಳತನವಾಗಿತ್ತು. ಮಿಡಿಗೇಶಿ ಬಸ್ ನಿಲ್ದಾಣದ ಸಮೀಪ ಇಂಡಿಯಾ ಎ.ಟಿ.ಎಂ ನಲ್ಲಿ ಕಳ್ಳತನಕ್ಕೆ ವಿಫಲ ಯತ್ನವಾಗಿದ್ದ ಸುದ್ದಿ ಮಾಸುವ ಮುನ್ನವೆ ಮತ್ತೆ ಕಳ್ಳತನ ನಡೆದಿರುವುದು ಜನ ಸಾಮಾನ್ಯರ ನಿದ್ದೆಗೆಡಿಸುತ್ತಿದೆ. ಆದ್ದರಿಂದ ಸಂಬಂಧಿಸಿದ ಪೋಲೀಸ್ ಅಧಿಕಾರಿಗಳು ಆಗಿಂದಾಗ್ಗೆ ನಡೆಯುತ್ತಿರುವ ಕಳ್ಳತನಗಳ ಬಗ್ಗೆ ಹದ್ದಿನ ಕಣ್ಣಿಡುವ ಮೂಲಕ ಕಳವು ಪ್ರಕರಣಗಳಿಗೆ ಇತಿಶ್ರೀ ಹಾಡಲು ಮುಂದಾಗುವರೆ ಎಂದು ಕಾದು ನೋಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ