ಮಿಡಿಗೇಶಿ:
ಮಧುಗಿರಿ ತಾಲ್ಲೂಕು ಐ.ಡಿ.ಹಳ್ಳಿ ಹೋಬಳಿ ಚಿಕ್ಕದಾಳವಟ್ಟ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಕರ್ನಾಟಕ ಸರ್ಕಾರದ ಪಂಚಾಯತ್ ರಾಜ್ ಆಯುಕ್ತಾಲಯದ ನಿರ್ದೇಶಕರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಸದರಿ ಗ್ರಾಮ ಪಂಚಾಯತಿಯಲ್ಲಿ 2020-21ನೇ ಸಾಲಿನಲ್ಲಿ ಪಿಡಿಓ ಮಂಜುನಾಥ್ ಮತ್ತು ಅಧ್ಯಕ್ಷರು 11ನೇ ಹಣಕಾಸು ಕ್ರಿಯಾ ಯೋಜನೆಯಲ್ಲಿ ಅಕ್ರಮವಾಗಿ ಹಣ ಖರ್ಚು ಮಾಡಿದ್ದರ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಸಭೆಯ ನಡಾವಳಿಯಿಲ್ಲದೆ ಬೇಕಾಬಿಟ್ಟಿಯಾಗಿ ಲಕ್ಷಾನುಗಟ್ಟಲೆ ಹಣವನ್ನು ಖರ್ಚು ಮಾಡಿರುವ ಬಗ್ಗೆ ದೂರುಗಳು ಸಲ್ಲಿಕೆಯಾಗಿದ್ದವು.
ಎಸ್ಸಿ, ಎಸ್ಟಿ ಕಾಲೋನಿಗಳಲ್ಲಿ ಕಾಮಗಾರಿ ಮಾಡದೆಯೇ ಬಿಲ್ ಮಾಡಿಕೊಂಡಿರುತ್ತಾರೆಂಬ ಆರೋಪದಿಂದ ಹಿಡಿದು ಪಿಡಿಓ ಅವರು 15 ದಿನಗಳಾದರೂ ಗ್ರಾಪಂಗೆ ಬಂದಿರುವುದಿಲ್ಲ, ಗ್ರಾಪಂ ಸದಸ್ಯರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಮಾಹಿತಿ ಕೇಳಿದರೂ ಅದನ್ನು ನೀಡುವುದಿಲ್ಲ. ಆದ್ದರಿಂದ ಇವರ ವಿರುದ್ಧ ಕ್ರಮ ಜರುಗಿಸಿ ಎಂದು ದೂರು ಸಲ್ಲಿಕೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಆಯುಕ್ತಾಲಯದ ನಿರ್ದೇಶಕರು ಇಲ್ಲಿನ ಜಿಲ್ಲಾ ಪಂಚಾಯತ್ಗೆ ದೂರಿನ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
