ಮಿಡಿಗೇಶಿ:
ಹೋಬಳಿಯ ತಿಪ್ಪಾಪುರ ಗ್ರಾಮದ ನರಸಿಂಹಮೂರ್ತಿ ಎಂಬಾತ ಚಿನ್ನೇನಹಳ್ಳಿ ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ಸಾವನ್ನಪಿರುವ ಘಟನೆ ವರದಿಯಾಗಿದ್ದು, ಮೃತನ ಪತ್ನಿ ಸಾವಿನ ಬಗ್ಗೆ ಅನುಮಾನ ವ್ಯಕ್ತ ಪಡಿಸಿ ಮಿಡಿಗೇಶಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಮೀನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ನರಸಿಂಹಮೂರ್ತಿ ತಾಲ್ಲೂಕಿನ ಐ.ಡಿ.ಹಳ್ಳಿ ಹೋಬಳಿಗೆ ಸೇರಿದ ತಿಪ್ಪಾಪುರ, ದಾದಗೊಂಡನಹಳ್ಳಿ ಗ್ರಾಮದ ಐದು ಜನರ ತಂಡದ ಜೊತೆ ಸೇರಿ ಮೀನಿನ ಬಲೆಯೊಂದಿಗೆ ಏಪ್ರಿಲ್ 29 ರಂದು ಬೆಳಿಗ್ಗೆ 8 ಗಂಟೆಗೆ ಚಿನ್ನೇನಹಳ್ಳಿ ಕೆರೆಗೆ ಬಂದು ಮದ್ಯಾಹ್ನ 1.30 ರ ವೇಳೆಗೆ ಮೀನು ಹಿಡಿದುಕೊಂಡು ತಿಪ್ಪಾಪುರ ತಾಂಡದ ಹೋಟೆಲ್ ಶಿವಣ್ಣ ಎಂಬುವವನಿಗೆ ಮಾರಾಟ ಮಾಡಿ ಐದು ಜನರು ಮದ್ಯ ಸೇವನೆ, ಊಟ ಮಾಡಿ ಮತ್ತೆ ಚಿನ್ನೇನಹಳ್ಳಿ ಕೆರೆಗೆ ಬಂದು ಮೀನು ಹಿಡಿಯಲು ಹೋಗಿರುತ್ತಾರೆ. ಈ ಕುರಿತು ಮುದ್ದೇನಹಳ್ಳಿಯ ರಮೇಶ್ ಬಿನ್ ಅಂಜನಪ್ಪ (ಆಶ್ರಮ) ಪೊಲೀಸ್ ಠಾಣೆಗೆ ಹೇಳಿಕೆ ನೀಡಿರುತ್ತಾನೆ.
ಮೃತ ನರಸಿಂಹ ಮೂರ್ತಿಯ ದ್ವಿಚಕ್ರ ವಾಹನ (ಕೆ.ಎ.5ಇ.1353) ಸಹ ಕಾಣೆಯಾಗಿದ್ದು, ಮೀನು ಹಿಡಿಯಲು ಈತನ ಜೊತೆ ಹೋಗಿದ್ದ ಐದು ಜನರ ಗುಂಪಿನಲ್ಲಿ ರಮೇಶ್ ಬಿನ್ ಬೋಡಪ್ಪ, ಚೆನ್ನಿಗರಾಮ, ರಾಜೇಶ್, ರಾಮಕೃಷ್ಣ ತಲೆಮರೆಸಿಕೊಂಡಿದ್ದು ಮೊಬೈಲ್ ಸ್ವಿಚ್ ಆಫ್ ಆಗಿರುವುದಾಗಿ ತಿಳಿದು ಬಂದಿದೆ.
ಘಟನೆ ಬಗ್ಗೆ ಮಿಡಿಗೇಶಿಯ ಪೋಲೀಸ್ ಎ.ಎಸ್.ಐ. ಪ್ರಕಾಶ್ ಅವರು ಪ್ರಕರಣ ದಾಖಲಿಕೊಂಡಿದ್ದು ಸದರಿ ಘಟನಾ ಸ್ಥಳಕ್ಕೆ ಸಿ.ಪಿ.ಐ ಎಂ.ಎಸ್.ಸರ್ದಾರ್ ಅವರು ಭೇಟಿ ನೀಡಿ ಹೆಚ್ಚಿನ ತನಿಖೆ ಕೈಗೊಂಡಿರುತ್ತಾರೆ. ಮೃತ ನರಸಿಂಹಮೂರ್ತಿಗೆ ತಂದೆ, ತಾಯಿ, ಹೆಂಡತಿ ಹಾಗೂ ಎರಡು ಹೆಣ್ಣು, ಎರಡು ಗಂಡು ಮಕ್ಕಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ