ಮೋದಿ ಸುಳ್ಳು ಭರವಸೆ ವಿರುದ್ದ ಪಾದಯಾತ್ರೆ

ಚಿತ್ರದುರ್ಗ:

      ಚುನಾವಣಾ ಪೂರ್ವದಲ್ಲಿ ದೇಶದ ಜನರಿಗೆ ಪೊಳ್ಳು ಭರವಸೆಗಳನ್ನು ನೀಡಿ ಸುಖಾ ಸುಮ್ಮನೆ ನಾಲ್ಕವರೆ ವರ್ಷಗಳನ್ನು ಕಳೆದಿರುವ ಪ್ರಧಾನಿ ನರೇಂದ್ರಮೋದಿ ವಿರುದ್ದ ಬೀದರ್‍ನಿಂದ ಬೆಂಗಳೂರುವರೆಗೆ ಯಾತ್ರೆ ಕೈಗೊಳ್ಳಲಾಗುವುದೆಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಬಸವನಗೌಡ ಬಾದರ್ಲಿ ತಿಳಿಸಿದರು

       ದುರ್ಗದ ಸಿರಿಯಲ್ಲಿ ಬುಧವಾರ ನಡೆದ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಪ್ರಧಾನಿ ಮೋದಿ ಜನರಿಗೆ ನೀಡಿರುವ ಸುಳ್ಳು ಆಶ್ವಾಸನೆಗಳು ಯಾವುದು ಈಡೇರಿಲ್ಲ ಎಂಬುದನ್ನು ರಾಜ್ಯದ ಜನರಿಗೆ ತಿಳಿಸುವುದಕ್ಕಾಗಿ ಅ.2 ಗಾಂಧಿಜಯಂತಿಯಂದು ಬೀದರ್‍ನಲ್ಲಿ ಮೋದಿ ವಿರುದ್ದದ ಯಾತ್ರೆಗೆ ಚಾಲನೆ ನೀಡಲು ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ತಿಳಿಸಿದರು

      ವರ್ಷಕ್ಕೆ ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುತ್ತೇನೆ, ವಿದೇಶಗಳಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗಳಿಗೆ ಹದಿನೈದು ಲಕ್ಷ ರೂ.ಗಳನ್ನು ಜಮ ಮಾಡುವುದಾಗಿ ಹೇಳಿ ಯಾವುದನ್ನು ಈಡೇರಿಸಿಲ್ಲ. ಹಾಗಾಗಿ ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ.ಯನ್ನು ಸೋಲಿಸಿ ರಾಹುಲ್‍ಗಾಂಧಿಯನ್ನು ಪ್ರಧಾನಿ ಮಾಡಬೇಕಾಗಿರುವುದರಿಂದ ಈಗಿನಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಯೂತ್ ಕಾಂಗ್ರೆಸ್ ಕಾರ್ಯಕರ್ತರಿಗೆ ಕಾರ್ಯಕಾರಿಣಿ ಸಭೆಯಲ್ಲಿ ಸೂಚಿಸಿರುವುದಾಗಿ ಹೇಳಿದರು.

      ಪಕ್ಷ ಸಂಘಟನೆ ನಮ್ಮ ಉದ್ದೇಶ. ಮುಂಬರುವ ಲೋಕಸಭಾ ಚುನಾವಣೆಯನ್ನು ಹೇಗೆ ಸಮರ್ಥವಾಗಿ ಎದುರಿಸಬೇಕು ಎನ್ನುವುದರ ಬಗ್ಗೆ ಕಾರ್ಯಕಾರಿಣಿಯಲ್ಲಿ ಚರ್ಚಿಸಿದ್ದೇವೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಹುಮತದಿಂದ ಗೆಲ್ಲಿಸಿ ಎ.ಐ.ಸಿ.ಸಿ.ಅಧ್ಯಕ್ಷ ಯುವ ನೇತಾರ ರಾಹುಲ್‍ಗಾಂಧಿಯನ್ನು ದೇಶದ ಪ್ರಧಾನಿಯನ್ನಾಗಿ ಮಾಡಬೇಕಾಗಿದೆ. ವಿಧಾನಸಭೆ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಾಕಷ್ಟು ಯುವಕರಿಗೆ ಆದ್ಯತೆ ನೀಡಿದ್ದೇವೆ. ಸ್ಪರ್ಧಾಕಾಂಕ್ಷಿಗಳೆಲ್ಲರಿಗೂ ಪಕ್ಷದಿಂದ ಟಿಕೇಟ್ ನೀಡಲು ಆಗುವುದಿಲ್ಲ. ಆಗ ಅಸಮಾಧಾನ, ಭಿನ್ನಾಭಿಪ್ರಾಯಗಳು ಸ್ಪೋಟಗೊಳ್ಳುವುದು ಸಹಜ. ಎಲ್ಲವನ್ನು ಸರಿಪಡಿಸಿಕೊಂಡು ಮುಂದಿನ ಎಂ.ಪಿ.ಚುನಾವಣೆಯನ್ನು ಎದುರಿಸಲು ಯುವಪಡೆ ಸಿದ್ದರಾಗುವಂತೆ ಕಾರ್ಯಕಾರಿಣಿ ಸಭೆಯಲ್ಲಿ ತಿಳಿಸಿದ್ದೇನೆ.

      ಅರವತ್ತಕ್ಕೂ ಹೆಚ್ಚು ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್‍ನಿಂದ ಯಾವುದೇ ಅಭಿವೃದ್ದಿಯಾಗಿಲ್ಲ. ನಮಗೆ ಅಧಿಕಾರ ನೀಡಿ ಎಪ್ಪತ್ತು ವರ್ಷಗಳಲ್ಲಿ ಆಗದ ಅಭಿವೃದ್ದಿಯನ್ನು ಒಂದೇ ವರ್ಷದಲ್ಲಿ ಮಾಡುತ್ತೇವೆ ಎಂದು ದೇಶದ ಜನತೆಗೆ ಪ್ರಧಾನಿ ಮೋದಿ ನೀಡಿರುವ ಯಾವುದೇ ಆಶ್ವಾಸನೆಗಳು ಈಡೇರಿಲ್ಲ ಎನ್ನುವುದನ್ನು ಜನರಿಗೆ ತಿಳಿಸಿ ಕೋಮುವಾದಿ ಬಿಜೆಪಿ.ಯನ್ನು 2019 ರ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೋಲಿಸುವುದೇ ನಮ್ಮ ಗುರಿ. ಅದಕ್ಕಾಗಿ ಯುವ ಕಾಂಗ್ರೆಸ್ ಸಮಿತಿ ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳುತ್ತಿದೆ ಎಂದರು.

      ಯುವ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಮಧುಪಾಲೇಗೌಡ ಮಾತನಾಡಿ ಕೋಮುವಾದಿ ಕೇಂದ್ರ ಸರ್ಕಾರ ದೇಶದ ಜನತೆಗೆ ಮಾಡುತ್ತಿರುವ ಮೋಸ, ಸುಳ್ಳು ಭರವಸೆ ಇವುಗಳೆಲ್ಲಾ ಬಡ ಜನತೆಗೆ, ರೈತರಿಗೆ, ನಿರುದ್ಯೋಗಿ ಯುವಕರಿಗೆ, ಮಹಿಳೆಯರಿಗೆ ತಿಳಿಸುವುದಕ್ಕಾಗಿ ಯೂತ್ ಕಾಂಗ್ರೆಸ್‍ನಿಂದ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವುದು. ಮೋದಿ ಕೊಟ್ಟ ಆಶ್ವಾಸನೆಗಳೆಲ್ಲಾ ಬುಡಮೇಲಾಗಿರುವುದರಿಂದ ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಹುಮತಗಳಿಂದ ಗೆಲ್ಲಿಸಿಕೊಳ್ಳಲು ಬೇಕಾಗಿರುವ ತಂತ್ರಗಾರಿಕೆಯನ್ನು ರೂಪಿಸುವ ಕುರಿತು ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಹೇಳಿದರು.

      ಲೋಕಸಭಾ ಚುನಾವಣೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಂತೆ ಕೆಲಸ ಮಾಡಬೇಕಾಗಿರುವುದರಿಂದ ಯುವ ಕಾಂಗ್ರೆಸ್‍ನ ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಕಾರ್ಯಕರ್ತರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಕೆ.ಪಿ.ಸಿ.ಸಿ.ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರದಾಸ್, ಉಪಾಧ್ಯಕ್ಷರುಗಳಾದ ಅಮೃತ್‍ಗೌಡ, ಕೆಂಪರಾಜು, ಶಿವಕುಮಾರ್, ಕಾರ್ಯದರ್ಶಿ ಆರ್.ಶ್ರೀನಿವಾಸಮೂರ್ತಿ, ಉಸ್ತುವಾರಿಗಳಾದ ಕೃಷ್ಣನಾಯ್ಕ, ಆರ್.ಕಿರಣ್, ಕಾರ್ಯದರ್ಶಿ ಡಾ.ಬಿ.ಯೋಗೇಶ್‍ಬಾಬು, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಎಸ್.ಕರಿಯಪ್ಪ, ಅಶೋಕ್‍ನಾಯ್ಡು, ಸೈಯದ್ ಖೂದ್ದೂಸ್, ಅಶ್ವಿನ್‍ಕುಮಾರ್, ವಿಕಾಸ್, ಎಂ.ಡಿ.ಹಸನ್‍ತಾಹೀರ್, ತಿಪ್ಪೇಸ್ವಾಮಿ, ಕಾರೇಹಳ್ಳಿ ಉಲ್ಲಾಸ್, ವಸೀಂ ಬಡಾಮಕಾನ್, ಅಶು ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ್ದರು.

                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link