ಶತಕದ ಮೂಲಕ ರಣಜಿ ಟ್ರೋಫಿ ಪಯಣವನ್ನು ಆರಂಭಿಸಿದ ರಜತ್‌ ಪಾಟಿದಾರ್‌!

ಇಂದೋರ್‌:

     ಪಂಜಾಬ್‌ ಕಿಂಗ್ಸ್‌ ವಿರುದ್ಧ ರಣಜಿ ಟ್ರೋಫಿ ಟೂರ್ನಿಯ   ಆರಂಭಿಕ ಪಂದ್ಯದಲ್ಲಿ ಮಧ್ಯ ಪ್ರದೇಶ ತಂಡದ ನಾಯಕ ರಜತ್‌ ಪಾಟಿದಾರ್‌   ಅವರು ಶತಕವನ್ನು ಬಾರಿಸಿ ಶುಭಾರಂಭ ಕಂಡಿದ್ದಾರೆ. ಇಂದೋರ್‌ನ ಎಮೆರಾಲ್ಡ್‌ ಹೈಸ್ಕೂಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ   ಎರಡನೇ ದಿನ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ ರಜತ್‌ ಪಾಟಿದಾರ್‌, ಶತಕವನ್ನು ಬಾರಿಸ ಮೂರನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಪಾಟಿದಾರ್ ಶತಕದ ಬಲದಿಂದ ಮಧ್ಯ ಪ್ರದೇಶ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 93 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 305 ರನ್‌ ಕಲೆ ಹಾಕಿದೆ.

      ಇದಕ್ಕೂ ಮುನ್ನ ಮೊದಲು ಬ್ಯಾಟ್‌ ಮಾಡಿದ್ದ ಪಂಜಾಬ್‌ ತಂಡ, ಸರಂಶ್‌ ಜೈನ್‌ ಬೌಲಿಂಗ್‌ ದಾಳಿ ನಲುಗಿ 84.3 ಓವರ್‌ಗಳಿಗೆ 232 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಇದೀಗ ಮಧ್ಯ ಪ್ರದೇಶ ತಂಡ, 73 ರನ್‌ಗಳ ಮುನ್ನಡೆಯನ್ನು ಪಡದಿದೆ. ಅಂದ ಹಾಗೆ ಎರಡನೇ ದಿನ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ರಜತ್‌ ಪಾಟಿದಾರ್‌, 185 ಎಸೆತಗಳಲ್ಲಿ 12 ಬೌಂಡರಿಗಳೊಂದಿಗೆ ಅಜೇಯ 107 ರನ್‌ಗಳನ್ನು ಕಲೆ ಹಾಕಿದ್ದಾರೆ. ರಜತ್‌ ಪಾಟಿದಾರ್‌ ಹಾಗೂ ವೆಂಕಟೇಶ್‌ ಅಯ್ಯರ್‌ 147 ರನ್‌ಗಳ ಜೊತೆಯಾಟವನ್ನು ಆಡಿದ್ದರು.

      ಬೌಲರ್‌ಗಳಿಗೆ ಸಾಕಷ್ಟು ನೆರವು ನೀಡುವ ಪಿಚ್‌ನಲ್ಲಿ ಪಾಟಿದಾರ್ ಅವರ ಬ್ಯಾಟಿಂಗ್ ಅದ್ಭುತವಾಗಿ ಮೂಡಿ ಬಂದಿತು. ಈ ರೀತಿಯ ಪಿಚ್‌ನಲ್ಲಿ ಬ್ಯಾಟ್ಸ್‌ಮನ್‌ಗಳಿಂದ ತಾಳ್ಮೆ ಮತ್ತು ಶಿಸ್ತು ಅಗತ್ಯವಾಗಿತ್ತು. ಅದಕ್ಕೆ ತಕ್ಕಂತೆ ಸಂಯಮ ಮತ್ತು ದೃಢಸಂಕಲ್ಪವನ್ನು ಪಾಟಿದಾರ್‌ ತಮ್ಮ ಬ್ಯಾಟಿಂಗ್‌ನಲ್ಲಿ ತೋರಿಸಿದರು. ಆತಿಥೇಯರು 4 ವಿಕೆಟ್‌ಗೆ 155 ರನ್ ಗಳಿಸಿದ್ದಾಗ ಪಾಟಿದಾರ್ ಮತ್ತು ವೆಂಕಟೇಶ್ ಅಯ್ಯರ್ ನಿರ್ಣಾಯಕ ಜೊತೆಯಾಟದೊಂದಿಗೆ ಪಂದ್ಯವನ್ನು ತಿರುಗಿಸಿದರು. 

    ವೆಂಕಟೇಶ್ ಅಯ್ಯರ್ ಪ್ರಮುಖ ಬೆಂಬಲ ನೀಡಿದರು. ಅವರು 114 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 73 ರನ್ ಗಳಿಸಿದರು. ಇವರು ಒಂದು ಸಿಕ್ಸರ್‌ ಹಾಗೂ ಏಳು ಬೌಂಡರಿಗಳನ್ನು ಬಾರಿಸಿದ್ದರು. ಮಧ್ಯ ಪ್ರದೇಶ ತಂಡಕ್ಕೆ ಉತ್ತಮ ಆರಂಭ ಸಿಕ್ಕಿರಲಿಲ್ಲ. ಓಪನರ್‌ಗಳಾದ ಹರ್ಷ್‌ ಗವಾಲಿ ಹಾಗೂ ಯಶ್‌ ದುಬೆ ಅವರು ಕ್ರಮವಾಗಿ 8 ಮತ್ತು 23 ರನ್‌ ಗಳಿಸಿದ ಬಳಿಕ ಔಟ್‌ ಆಗಿದ್ದರು. ಹಿಮಾಂಶು ಶರ್ಮಾ (40) ಹಾಗೂ ಶುಭಮ್‌ ಶರ್ಮಾ (41) ಅವರು ಉತ್ತಮ ಆರಂಭ ಪಡೆದ ಬಳಿಕ ವಿಕೆಟ್‌ ಒಪ್ಪಿಸಿದ್ದರು. ಇದೀಗ ರಜತ್‌ ಪಾಟಿದಾರ್‌ ಅವರ ಜೊತೆ ಮತ್ತೊಂದು ತುದಿಯಲ್ಲಿ ಸರಂಶ್‌ ಜೈನ್‌ ಇದ್ದು, ಮೂರನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.  

    ದೇಶಿ ಕ್ರಿಕೆಟ್‌ನಲ್ಲಿ ಪಾಟಿದಾರ್ ಅವರ ಫಾರ್ಮ್ ಅದ್ಭುತವಾಗಿದೆ. ಈ ವರ್ಷದ ಆರಂಭದಲ್ಲಿ ವಿದರ್ಭ ವಿರುದ್ಧ ಇರಾನಿ ಕಪ್‌ನಲ್ಲಿ ರೆಸ್ಟ್ ಆಫ್ ಇಂಡಿಯಾ ಪರ 66 ರನ್‌ಗಳ ಗಮನಾರ್ಹ ಕೊಡುಗೆ ನೀಡಿದ್ದ ಪಾಟಿದಾರ್‌, ಪ್ರಮುಖ ಪಂದ್ಯಗಳಲ್ಲಿ ವಿಶ್ವಾಸಾರ್ಹ ರೆಡ್-ಬಾಲ್ ಬ್ಯಾಟ್ಸ್‌ಮನ್ ಎಂಬ ಖ್ಯಾತಿಯನ್ನು ಮತ್ತಷ್ಟು ಬಲಪಡಿಸಿದ್ದರು. ಜೂನ್ ಆರಂಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ತಮ್ಮ ಚೊಚ್ಚಲ ಐಪಿಎಲ್ ಕಿರೀಟಕ್ಕೆ ಮುನ್ನಡೆಸಿದ್ದ ಅವರು, ತಮ್ಮ ಯಶಸ್ಸಿನ ಮೇಲೆ ಸೆಂಟ್ರಲ್ ಝೋನ್ ಪರ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಶತಕ ಗಳಿಸಿದ್ದರು.

Recent Articles

spot_img

Related Stories

Share via
Copy link