ಲಖನೌ:
ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ, ಆತ್ಮಹತ್ಯೆ ಪ್ರಚೋದನೆ ಇತ್ಯಾದಿ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಕೇವಲ ಹೆಣ್ಮಕ್ಕಳ ಮೇಲೆ ಮಾತ್ರವಲ್ಲ ಪುರುಷರೂ ಕೂಡ ದೌರ್ಜನ್ಯ ಎದುರಿಸುತ್ತಿದ್ದಾರೆ. ಇದೀಗ ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದರಲ್ಲಿ ಪತ್ನಿಯೇ ತನ್ನ ಪತಿಗೆ ವಿಷ ಕುಡಿಸಿದ್ದಾಳೆ. ಲೈಂಗಿಕ ಕ್ರಿಯೆಗೆ ಒಪ್ಪದ ಗಂಡನಿಗೆ ಹೆಂಡತಿಯಾದವಳು ವಿಷಪ್ರಾಶನ ಮಾಡಿದ್ದಾಳೆ.
ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ಈ ದುಷ್ಕೃತ್ಯ ನಡೆದಿದೆ. ಪಿಂಕಿ ಶರ್ಮಾ ಎಂಬಾಕೆ ಈ ಕೃತ್ಯ ಎಸಗಿದವಳು. ಈಕೆ 2023ರಲ್ಲಿ ಅನುಜ್ ಶರ್ಮಾ ಜೊತೆ ಸಪ್ತಪದಿ ತುಳಿದಿದ್ದಾಳೆ. ಅನುಜ್ ಲೈಂಗಿಕ ಕ್ರಿಯೆಯಲ್ಲಿ ಅಷ್ಟಾಗಿ ಆಸಕ್ತಿ ಹೊಂದಿರಲಿಲ್ಲ. ಹೀಗಾಗಿ ಈ ಎರಡು ವರ್ಷಗಳಲ್ಲಿ ಕೇವಲ ಎರಡು ಬಾರಿ ಮಾತ್ರ ಅವರು ಲೈಂಗಿಕ ಕ್ರಿಯೆ ಮಾಡಿದ್ದರು.
ಇದರಿಂದ ಬೇಸತ್ತ ಪತ್ನಿ ಹಲವು ಬಾರಿ ತನ್ನ ಗಂಡನಿಗೆ ಆಹ್ವಾನ ನೀಡಿದ್ದಾಳೆ. ಆದರೆ, ಪತಿ ಲೈಂಗಿಕತೆಯಲ್ಲಿ ಆಸಕ್ತಿ ತೋರದಿದ್ದಾಗ ಕೋಪಗೊಂಡ ಅವಳು ಕಠಿಣ ನಿರ್ಧಾರ ತೆಗೆದುಕೊಂಡಿದ್ದಾಳೆ. ಅವನ ಆಹಾರದಲ್ಲಿ ವಿಷಪ್ರಾಶನ ಮಾಡಿ ಪತಿಯನ್ನು ಕೊಲ್ಲಲು ಪ್ರಯತ್ನಿಸಿದ್ದಾಳೆ. ಅದೃಷ್ಟವಶಾತ್ ಗಂಡ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸದ್ಯ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ದೆಹಲಿಯಲ್ಲಿ ಇಂಥದ್ದೆ ಘಟನೆ ನಡೆದಿತ್ತು. ಪತ್ನಿಯೊಬ್ಬಳು ತನ್ನ ಪತಿ ಲೈಂಗಿಕ ಕ್ರಿಯೆಯಲ್ಲಿ ತೃಪ್ತಿಪಡಿಸದಿದ್ದಕ್ಕೆ ಕೋಪಗೊಂಡು ಇರಿದು ಕೊಂದಿದ್ದಾಳೆ. ಕೊನೆಗೆ ಆತ್ಮಹತ್ಯೆಯ ಸುಳ್ಳು ಕಥೆ ಹೆಣೆದಿದ್ದಳು. ಮೊಹಮ್ಮದ್ ಶಾಹಿದ್ ಮೃತ ಪತಿ. ಜುಲೈ 20ರ ಸಂಜೆ ವೇಳೆಗೆ ನಿಹಾಲ್ ವಿಹಾರ್ ಪೊಲೀಸ್ ಠಾಣೆಗೆ ಸ್ಥಳೀಯ ಆಸ್ಪತ್ರೆಯಿಂದ ಕರೆ ಬಂದಿತ್ತು. ಪುರುಷನೊಬ್ಬ ಇರಿತದ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ, ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದರು.
ಪೊಲೀಸರು, ಇದನ್ನು ಕೊಲೆ ಪ್ರಕರಣವೆಂದು ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದರು. ವಿಚಾರಣೆ ವೇಳೆ ಮೃತಪಟ್ಟ ವ್ಯಕ್ತಿಯ ಪತ್ನಿಯ ಮೊಬೈಲ್ ಫೋನ್ ಅನ್ನು ಪರಿಶೀಲಿಸಲಾಯಿತು. ಈ ವೇಳೆ ಕೆಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂತು. ಕೊಲ್ಲುವ ಮಾರ್ಗ ಹೇಗೆ ಎಂಬ ಬಗ್ಗೆ ಆಕೆ ಇಂಟರ್ನೆಟ್ನಲ್ಲಿ ಹುಡುಕಾಡಿದ್ದಳು. ಇದನ್ನು ಪೊಲೀಸರು ಪ್ರಶ್ನಿಸಿದ್ದಾಗ, ತನ್ನ ಅಪರಾಧವನ್ನು ಮಹಿಳೆ ಒಪ್ಪಿಕೊಂಡಳು.
ಪತಿಯೊಂದಿಗಿನ ದೈಹಿಕ ಸಂಬಂಧದಲ್ಲಿ ಅತೃಪ್ತಳಾಗಿ ಆತನನ್ನು ಕೊಲ್ಲಲು ನಿರ್ಧರಿಸಿದ್ದಾಗಿ ಆಕೆ ಪೊಲೀಸರಿಗೆ ತಿಳಿಸಿದ್ದಾಳೆ. ಪತಿ ಶಾಹಿದ್ನ ಎದೆಗೆ ಮೂರು ಬಾರಿ ಇರಿದು, ನಂತರ ತಾನೇ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಪೊಲೀಸರ ದಾರಿ ತಪ್ಪಿಸಲು ಆತ್ಮಹತ್ಯೆಯ ಕಥೆಯನ್ನು ಹೆಣೆದಿದ್ದಾಳೆ. ಕೊಲೆಗೆ ಬಳಸಲಾಗಿದ್ದ ಆಯುಧವಾದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನೊಂದೆಡೆ, ಮದುವೆ ಸಂಭ್ರಮದ ಮಧ್ಯೆ ಸಂಭವಿಸಿದ ಹೃದಯವಿದ್ರಾವಕ ಘಟನೆಯೊಂದು ನಡೆದಿತ್ತು. ಸೀರೆ ಮತ್ತು ಹಣಕ್ಕೆ ಸಂಬಂಧಿಸಿದ ವಿವಾದವು ದೊಡ್ಡ ಜಗಳಕ್ಕೆ ತಿರುಗಿ, ಕೊನೆಗೆ ವಧುವಿನ ಪ್ರಾಣವನ್ನೇ ಕಸಿದುಕೊಂಡಿದೆ. ಗುಜರಾತ್ನ ಭಾವನಗರದಲ್ಲಿ ಈ ಆಘಾತಕಾರಿ ಘಟನೆ ಇತ್ತೀಚೆಗೆ ನಡೆದಿದೆ. ಮದುವೆಗೆ ಕೇವಲ ಒಂದು ಗಂಟೆ ಮೊದಲು ಸೀರೆ ಮತ್ತು ಹಣದ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋಪದ ಭರದಲ್ಲಿ ವರನು, ವಧುವಿಗೆ ಕಬ್ಬಿಣದ ಪೈಪ್ನಿಂದ ಹೊಡೆದು, ಆಕೆಯ ತಲೆಯನ್ನು ಗೋಡೆಗೆ ಹೊಡೆದಿದ್ದಾನೆ. ಪರಿಣಾಮವಾಗಿ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.








