ಬೆಂಗಳೂರು:
ರಾಜಧಾನಿಯಲ್ಲಿ ಸಣ್ಣಪುಟ್ಟ ಜಗಳ, ಅದರಿಂದ ಹುಟ್ಟಿಕೊಂಡ ದ್ವೇಷ ತೀರಿಸಲು ಬರ್ಬರವಾಗಿ ಕೊಲೆ ಮಾಡುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇದೀಗ ಪಕ್ಕದ ಮನೆಯವರ ಮೇಲಿನ ದ್ವೇಷಕ್ಕೆ ಆ ಮನೆಯ ಬಾಲಕನನ್ನೇ ಅಪಹರಿಸಿ , ಕೊಲೆಗೈದಿರುವ ಪೈಶಾಚಿಕ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ರಮಾನಂದ ಎಂಬ ಬಾಲಕನನ್ನು ಕಿಡ್ನಾಪ್ ಮಾಡಿ ಭೀಕರವಾಗಿ ಕೊಲೆ ಮಾಡಲಾಗಿದೆ.
ಪಕ್ಕದ ಮನೆಯ ನಿವಾಸಿ ಮತ್ತೂರು ಎಂಬಾತನಿಂದ ಈ ಹೇಯ ಕೃತ್ಯ ನಡೆದಿದೆ. ಬಾಲಕ ರಮಾನಂದನ ಕುಟುಂಬ ಮತ್ತು ಮತ್ತೂರು ಕುಟುಂಬದ ನಡುವೆ ಗಲಾಟೆ ಆಗಿತ್ತು. ಗಲಾಟೆ ಹಿನ್ನೆಲೆಯಲ್ಲಿ ಬಾಲಕ ರಮಾನಂದನನ್ನು ಅಪಹರಿಸಿ ಕೊಲೆಗಯ್ಯಲಾಗಿದೆ. ಕೊಲೆಯ ಬಳಿಕ ಆರೋಪಿ ಮತ್ತೂರು ಬಾಲಕನ ಮೃತದೇಹವನ್ನು ಚೀಲದಲ್ಲಿ ಕಟ್ಟಿ ಕೆರೆಯಲ್ಲಿ ಬಿಸಾಕಿದ್ದಾನೆ. ನಿನ್ನೆ ರಾಯಸಂದ್ರ ಕೆರೆಯ ಬಳಿ ಬಾಲಕನ ಮೃತದೇಹ ಪತ್ತೆಯಾಗಿದೆ. ಆರೋಪಿ ಮತ್ತೂರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.