ದಾವಣಗೆರೆ:
ಕೋರ್ಟ್ ಆವರಣದಲ್ಲೇ ವ್ಯಕ್ತಿಯೊಬ್ಬ ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ (Stabbing Case) ದಾವಣಗೆರೆಯಲ್ಲಿ ನಡೆದಿದೆ. ನಗರದ ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಈ ಘಟನೆ ನಡೆದಿದೆ. ಪತ್ನಿಗೆ ಚಾಕುವಿನಿಂದ ಇರಿದ ಬಳಿಕ ತಾನೂ ಕೈಗೆ ಇರಿದುಕೊಂಡು ಪತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಪತ್ನಿ ಪವಿತ್ರಾ ಮೇಲೆ ಪತಿ ಪ್ರವೀಣ್ ಚಾಕುವಿನಿಂದ ಇರಿದು ಹಲ್ಲೆಗೈದಿದ್ದಾನೆ. ಈ ಘಟನೆಯಲ್ಲಿ ಗಾಯಗೊಂಡ ಪತ್ನಿ ಪವಿತ್ರಾ ಹಾಗೂ ಪತಿ ಪ್ರವೀಣ್ನನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ದಾವಣಗೆರೆಯ ಜಾಲಿನಗರದ ನಿವಾಸಿ ಪ್ರವೀಣ್, ಬೆಂಗಳೂರು ಮೂಲದ ಪವಿತ್ರಾ ಜತೆ ಮದುವೆಯಾಗಿದ್ದ. ಪರಸ್ಪರ ಪ್ರೀತಿಸಿದ್ದ ಇವರು ಅಂತರ್ಜಾತಿ ವಿವಾಹ ಆಗಿದ್ದರು. ಆದರೇ ಶೀಲ ಶಂಕಿಸಿದ್ದ ಕಾರಣ ಕೆಲ ದಿನಗಳ ಹಿಂದೆ ಪತ್ನಿ ಪವಿತ್ರಾ ಗಂಡನನ್ನು ತೊರೆದು ಹೋಗಿದ್ದರು. ಇಂದು ನ್ಯಾಯಾಲಯದಲ್ಲಿ ವಿಚಾರಣೆ ಇರುವ ಕಾರಣ ದಂಪತಿ ಕೋರ್ಟ್ಗೆ ಆಗಮಿಸಿದ್ದರು. ಈ ವೇಳೆ ಪತ್ನಿಗೆ ಪ್ರವೀಣ್ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ.








