ಬೆಂಗಳೂರು:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಒಂದು ಕೆಜಿ ಚಿನ್ನದ ಆಫರ್ ನೀಡಿದ್ದಾರೆ. ಜತೆಗೊಂದು ಸವಾಲು ಹಾಕಿದ್ದಾರೆ. ಈ ಸವಾಲು ಸ್ವೀಕರಿಸಿ ಈಡೇರಿಸಿದರೆ ಒಂದು ಕೆಜಿ ಚಿನ್ನ ಉಡುಗೊರೆ ನೀಡಿ ಸನ್ಮಾನಿವುದಾಗಿಯೂ ನಿರಾಣಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ನಮ್ಮ ಸರ್ಕಾರ ಇದ್ದಾಗ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಮಾಡಿಕೊಟ್ಟರೆ ಒಂದು ಕೆಜಿ ಕುಂದಾ ತಂದು ಸನ್ಮಾನ ಮಾಡುವುದಾಗಿ ಹೇಳಿದ್ದರು. ನಿಮ್ಮ ಕೈಯ್ಯಲ್ಲಿ ಆಗದಿದ್ದರೆ ಮೂರು ತಿಂಗಳ ನಂತರ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು, 2ಎ ಮೀಸಲಾತಿ ಮಾಡಿಕೊಡುತ್ತೇವೆ. ಆಗ ನೀವು ಒಂದು ಜತೆ ಬಂಗಾರದ ಬಳೆ ಮಾಡಿಸಿ ಕೊಡಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದರು ಎಂದು ನಿರಾಣಿ ನೆನಪಿಸಿದರು.
ಈಗ ಅವರದ್ದೇ ಸರ್ಕಾರ ಬಂದು ಒಂದೂವರೆ ವರ್ಷ ಆಯಿತು. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಮಾಡಿ ಕೊಡಿಸಿದರೆ, ಒಂದು ಕೆಜಿ ಬಂಗಾರ ನೀಡು ಸನ್ಮಾನಿಸುವೆ ಎಂದು ಸವಾಲು ಹಾಕಿದರು.
ಪ್ರತಿಪಕ್ಷದಲ್ಲಿದ್ದಾಗ ಪಂಚಮಸಾಲಿ ಸಮುದಾಯದ ಬಗ್ಗೆ ಎಲ್ಲಿಲ್ಲದ ಕಾಳಜಿ ತೋರಿಸಿದ್ದರು. 2ಎ ಮೀಸಲಾತಿ ನೀಡಲು ಬಿಜೆಪಿ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾಗುತ್ತಿದೆ. ಈ ಬೇಡಿಕೆ ಕುರಿತು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಒಂದು ಸಭೆ ಕೂಡ ಮಾಡಲಾಗಿಲ್ಲ ಎಂದು ಮುರುಗೇಶ್ ನಿರಾಣಿ ಕೆಣಕಿದರು.
