ನ್ಯಾ. ನಾಗಮೋಹನ್‌ದಾಸ್ ಅವರಿಂದ ಸಿಎಂ ಸಿದ್ದರಾಮಯ್ಯಗೆ ಒಳಮೀಸಲು ವರದಿ ಸಲ್ಲಿಕೆ

ಬೆಂಗಳೂರು:

    ಒಳಮೀಸಲಾತಿ   ಜಾರಿ ವಿಚಾರವಾಗಿ ನಡೆಯುತ್ತಿರುವ ಹೋರಾಟಗಳ ನಡುವೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್  ನೇತೃತ್ವದ ಆಯೋಗವು ಸಿಎಂ ಸಿದ್ದರಾಮಯ್ಯ  ಅವರಿಗೆ ಮಧ್ಯಂತರ ವರದಿಯನ್ನು ಸಲ್ಲಿಸಿದೆ. ಗುರುವಾರ ಕ್ಯಾಬಿನೆಟ್ ಸಭೆಗೂ ಮುನ್ನ ನ್ಯಾ. ನಾಗಮೋಹನ್ ದಾಸ್ ಅವರು ಮಧ್ಯಂತರ ವರದಿಯನ್ನು ಸಿಎಂಗೆ ಸಲ್ಲಿಸಿದರು. ಮಧ್ಯಂತರ ವರದಿ ಕೊಡಿ ಎಂದು ಸರ್ಕಾರ ನಮ್ಮನ್ನು ಕೇಳಲಿಲ್ಲ. ನಾವೇ ಸ್ವ ಇಚ್ಛೆಯಿಂದ ವರದಿಯನ್ನು ‌ನೀಡಿದ್ದೇವೆ ಎಂದು ನ್ಯಾ. ನಾಗಮೋಹನ್ ದಾಸ್‌ ಹೇಳಿದ್ದಾರೆ.

   ವರದಿ ಸಲ್ಲಿಕೆ ಬಳಿಕ ಮಾತನಾಡಿದ ಅವರು, ಎರಡು ತಿಂಗಳಿಗಿಂತ ‌ಹೆಚ್ಚು ನಾನು ಹಾಗೂ ನನ್ನ ತಂಡ ಆಳವಾದ ಅಧ್ಯಯನ ಮಾಡಿ 104 ಪುಟಗಳ ಒಳಮೀಸಲಾತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಇದರಲ್ಲಿ ತರಾತುರಿ ಪ್ರಶ್ನೆ ಇಲ್ಲ. ಮಧ್ಯಂತರ ವರದಿ ಕೊಡಿ ಎಂದು ಸರ್ಕಾರ ನಮ್ಮನ್ನು ಕೇಳಲಿಲ್ಲ. ನಾವೇ ಸ್ವ ಇಚ್ಛೆಯಿಂದ ವರದಿಯನ್ನು ‌ನೀಡಿದ್ದೇವೆ.‌ ವರದಿ ನೀಡಿರುವ ಹಂತದಲ್ಲಿ ಬೇರೆ ಯಾವ ವಿಚಾರವನ್ನೂ ಹೇಳಲು ಸಾಧ್ಯವಿಲ್ಲ. ಸರ್ಕಾರದ ತೀರ್ಮಾನ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಧ್ಯಂತರ ವರದಿ ನೀಡಿರುವುದು ಒಳ ಮೀಸಲಾತಿ ಜಾರಿಯ ವಿಳಂಬ ಧೋರಣೆಗೆ ಅನುಕೂಲ ಎಂಬ ವಾದವನ್ನು ನಿರಾಕರಣೆ ಮಾಡಿದ ಅವರು, ನನಗೆ ಹೀಗೆ ಅನ್ನಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಶಾಶ್ವತವಾದ ಪರಿಹಾರವನ್ನು ಕೊಡಬೇಕು ಎಂಬುದು ನಮ್ಮ ಆಸೆಯಾಗಿದೆ. ಸರ್ಕಾರ ಏನು ತೀರ್ಮಾನ ಮಾಡುತ್ತದೆ ಅದರ ಆಧಾರದಲ್ಲಿ ಅಂತಿಮ ವರದಿ ಸಲ್ಲಿಸುತ್ತೇನೆ. ಮಧ್ಯಂತರ ವರದಿ ನೀಡಿದ್ದೇನೆ, ಇದಕ್ಕೆ ಸರ್ಕಾರ ಉತ್ತರ ಕೊಟ್ಟಿಲ್ಲ. ಉತ್ತರದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದರು‌.

ಮಧ್ಯಂತರ ವರದಿಯಲ್ಲಿ ನೇಮಕಾತಿ ಬಗ್ಗೆ ಯಾವುದೇ ಸಲಹೆ ಕೊಟ್ಟಿಲ್ಲ. ವರದಿಯಲ್ಲಿ ಏನಿದೆ ಎಂಬುದಕ್ಕೆ ನಾನು ಉತ್ತರ ನೀಡಲ್ಲ. ಇದನ್ನು ಸರ್ಕಾರದ ಬಳಿ ಕೇಳಬೇಕು ಎಂದು ಹೇಳಿದರು. ನ್ಯಾ. ನಾಗಮೋಹನ್ ದಾಸ್ ಅವರು ತಮ್ಮ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಿದ್ದು, ಕ್ಯಾಬಿನೆಟ್‌ನಲ್ಲಿ ಈ ವಿಚಾರ ಚರ್ಚೆ ಆಗುವ ಸಾಧ್ಯತೆ ಇದೆ. ಒಳಮೀಸಲಾತಿಗಾಗಿ ಹೋರಾಟ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕ್ಯಾಬಿನೆಟ್ ಸಭೆಯಲ್ಲಿ ಏನು ತೀರ್ಮಾನ ಕೈಗೊಳ್ಳಲಾಗುವುದು ಎಂಬುದು ಮಹತ್ವ ಪಡೆದಿದೆ.

Recent Articles

spot_img

Related Stories

Share via
Copy link