ಬೆಂಗಳೂರು:
ಬಹುಕೋಟಿ ಬಿಟ್ ಕಾಯಿನ್ ಪ್ರಕರಣದಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ಗೆ ಬಂಧನ ಭೀತಿ ಎದುರಾಗಿದೆ. ಹ್ಯಾಕರ್ ಶ್ರೀಕಿ ಜೊತೆ ನಲಪಾಡ್ಗೆ ಸಂಪರ್ಕ ಇದೆ ಹಾಗೂ ವ್ಯವಹಾರಿಕ ನಂಟು ಇತ್ತು ಎಂದು ತನಿಖೆಯಲ್ಲಿ ಬಯಲಾಗಿದ್ದು, ಆರೋಪ ಹಿನ್ನೆಲೆಯಲ್ಲಿ ನಾಳೆ ಫೆ.7 ರಂದು ವಿಚಾರಣೆಗೆ ಹಾಜರಾಗುವಂತೆ ಸೆಕ್ಷನ್ 41ರಡಿ ವಿಶೇಷ ತನಿಖಾ ತಂಡ (SIT) ನೋಟಿಸ್ ನೀಡಿದೆ.
ಕೆಲವು ತಿಂಗಳ ಹಿಂದೆ ಕೂಡ SIT ಅಧಿಕಾರಿಗಳು ನಲಪಾಡ್ ಅವರನ್ನು ವಿಚಾರಣೆ ಮಾಡಿ ಹೇಳಿಕೆ ಪಡೆದಿದ್ದರು. ಹ್ಯಾಕರ್ ಶ್ರೀಕಿಯಿಂದ ಕೋಟ್ಯಂತರ ರೂಪಾಯಿ ಹಣವನ್ನು ವ್ಯವಹಾರಿಕವಾಗಿ ಪಡೆದಿದ್ದಾರೆ ಎಂಬ ಆರೋಪದ ಬಗ್ಗೆ SIT ಅಧಿಕಾರಿಗಳು ತನಿಖೆ ನಡೆಸಿದ್ದರು.ಈ ಹಿಂದೆ ವಿಚಾರಣೆ ನಡೆಸಿದ್ದ ಪೊಲೀಸರು ಪ್ರಮುಖ ಆರೋಪಿಯಾದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಗೆ ನಲಪಾಡ್ ಆಪ್ತನಾಗಿದ್ದ ಎನ್ನುವ ಕಾರಣಕ್ಕೆ ಬೆಂಗಳೂರಿನ ಕಾಟನ್ಪೇಟೆ ಹ್ಯಾಕಿಂಗ್ ಕೇಸ್ನಲ್ಲಿ ಶ್ರೀಕಿ ಜೊತೆ ವ್ಯವಹಾರಿಕ ಸಂಬಂಧದ ಅನುಮಾನದಲ್ಲಿ ವಿಚಾರಣೆ ನಡೆಸಲಾಗಿತ್ತು.
ಇದೀಗ ನಲಪಾಡ್ ಆರೋಪಿ ಎಂದು ಎಸ್ಐಟಿ ಹೇಳಿದೆ. ಈ ಹಿಂದೆ ಸಿಐಡಿ ಕಚೇರಿಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರನ್ನು ವಿಚಾರಣೆ ಮಾಡಲಾಗಿತ್ತು. ಹೇಳಿಕೆ ದಾಖಲು ಮಾಡಿಕೊಂಡ ಬಳಿಕ ಪ್ರಕರಣದಲ್ಲಿ ನಲಪಾಡ್ ಅವರನ್ನೂ ಆರೋಪಿಯನ್ನಾಗಿ ಮಾಡಲಾಗಿದೆ.
ಶ್ರೀಕಿ ಜೊತೆಗೆ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸಿರುವ ಹಿನ್ನಲೆಯಲ್ಲಿ ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ನಲಪಾಡ್ಗೆ ಎಸ್ಐಟಿ ಅಧಿಕಾರಿಗಳು ನೊಟೀಸ್ ನೀಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯೊಂದಿಗೆ ನಂಟು ಹೊಂದಿದ್ದ ಆರೋಪದಡಿ ವಿಚಾರಣೆಗೆ ಹಾಜರಾಗುವಂತೆ ನಲಪಾಡ್ಗೆ ನೋಟಿಸ್ ನೀಡಲಾಗಿತ್ತು.
ಆಗ ಹೇಳಿಕೆ ದಾಖಲಿಸಿಕೊಂಡಿದ್ದರು. ಆದರೆ ಈ ಬಾರಿ ನಲಪಾಡ್ರನ್ನೇ ಆರೋಪಿಸಿ ನೋಟಿಸ್ ನೀಡಲಾಗಿದೆ. ಸಿಐಡಿಯ ಇ-ಪ್ರೊಕ್ಯೂರ್ಮೆಂಟ್ ಜಾಲತಾಣ ಹ್ಯಾಕ್ ಮಾಡಿ 1 ಕೋಟಿ ರೂಪಾಯಿ ವಂಚಿಸಿದ್ದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಐಪಿಎಸ್ ಅಧಿಕಾರಿ ವಂಶಿಕೃಷ್ಣ ಅವರೆದುರು ನಲಪಾಡ್ ಹಾಜರಾಗಿದ್ದರು.