ಕೊರಟಗೆರೆ:
ಕರ್ನಾಟಕದ 234 ತಾಲ್ಲೂಕಿನಲ್ಲಿ ಈಗಾಗಲೇ ನಮ್ಮ ಸಂಘಟನೆ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘಟನೆ ಬಲ ಪಡಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಾಂತ ಪ್ರವಾಸ ಕೈಗೊಂಡಿದ್ದೇನೆ ಎಂದು ನಮ್ಮ ಕರ್ನಾಟಕ ರಾಜ್ಯ ಅಹಿಂದ ಜನಪರ ವೇದಿಕೆ ರಾಜ್ಯಾಧ್ಯಕ್ಷ ನರ್ಲು ನರಸಿಂಹಪ್ಪ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಮ್ಮ ಕರ್ನಾಟಕ ರಾಜ್ಯ ಅಹಿಂದ ಜನಪರ ವೇದಿಕೆ ನೂತನ ತಾಲ್ಲೂಕು ಘಟಕ ಉದ್ಘಾಟನಾ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಉದ್ಯೋಗ ರೂಪಿಸಿಕೊಳ್ಳಲು ಮುಂದಾದ ಯುವಕರಿಗೆ ಸಂಘಟನೆ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲದ ರೂಪದಲ್ಲಿ ನೀಡಲಾಗುವುದು. ಅಹಿಂದ ತತ್ವವನ್ನು ಅನುಸರಿಸಿ ನೊಂದವರಿಗೆ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಮಾನತೆ ಸಿಗುವಂತೆ ಮಾಡುವ ಉದ್ದೇಶ ಹೊಂದಿದೆ ಈ ಸಂಘಟನೆ ಪಕ್ಷಾತೀತವಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಮತ್ತು ತಾ.ಅಧ್ಯಕ್ಷ ಸಿದ್ದಲಿಂಗಯ್ಯ.ಟಿ.ಬಿ ಮಾತನಾಡಿ, ಅಲ್ಪಾಸಂಖ್ಯಾತರು, ಹಿಂದುಳಿದ ವರ್ಗಗಳ, ತಳ ಮಟ್ಟದ ಜನರನ್ನ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಲಾಗುವುದು. ಅಹಿಂದ ಮೂಲಕ ಚುನಾಯಿತರಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಳ ಮಟ್ಟದ ಜನರನ್ನು ಮೇಲೆ ತರುವ ಕೆಲಸ ಮಾಡುವುದರ ಜೊತೆಗೆ ಜನಪರ ಆಡಳಿತ ನೀಡುತ್ತಿದ್ದಾರೆ ಎಂದು ಹೇಳಿದರು.
ಅಸ್ಪೃಶ್ಯತೆಯಿಂದ ಬಳಲುತ್ತಿರುವ ಜನರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಜೊತೆಗೆ ಸಮಾಜದಲ್ಲಿ ತಮ್ಮ ಹಕ್ಕನ್ನು ಪ್ರಶ್ನಿಸಿ ಪಡೆಯುವುದನ್ನು ನಮ್ಮ ಸಂಘಟನೆಯ ಅಹಿಂದ ಸಿದ್ಧಾಂತ ತಿಳಿಸುತ್ತದೆ. ಅಂಬೇಡ್ಕರ್, ಬಸವಣ್ಣ, ಕನಕದಾಸರ ಸಿದ್ದಾಂತಗಳನ್ನು ಒಳಗೊಂಡು ನಮ್ಮ ಸಂಘಟನೆ ರಾಜ್ಯಾದ್ಯಾಂತ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ ಎಂದರು.
ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್, ಸಾಮಾಜಿಕ ಜಾಲತಾಣ ಉಸ್ತುವಾರಿ ಟಿವಿವಿ ಗೋವಿಂದರಾಜು, ಸಂಘಟನಾ ಕಾರ್ಯದರ್ಶಿ ಕೃಷ್ಣಚಾರಿ, ತಾ.ಉಪಾಧ್ಯಕ್ಷೆ ಕೆಂಪಮ್ಮ, ಪ್ರಧಾನ ಕಾರ್ಯದರ್ಶಿ ಇರ್ಫಾನ್, ಸಹ ಕಾರ್ಯದರ್ಶಿ ಪುಟ್ಟಸ್ವಾಮಿ, ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಅಮೀಬಾ, ಉಪಾಧ್ಯಕ್ಷ ರಿಜ್ವಾನ್, ಯುವ ಘಟಕ ಅಧ್ಯಕ್ಷ ರಾಘವೇಂದ್ರ ಎ.ಆರ್, ಸದಸ್ಯರಾದ ಟಿ.ಎನ್ ನಾಗರಾಜು, ಬಾಲಪ್ಪ, ನಾನೊಬ್ಬಯ್ಯ, ಲಕ್ಷ್ಮಿನಾರಾಯಣ್ ಸೇರಿದಂತೆ ಇತರರು ಇದ್ದರು
