ಮಿಡಿಗೇಶಿ :
ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಡೆದಿರುವ ಅಕ್ರಮಗಳು ಕೆಲವಷ್ಟೇ ಬಯಲಿಗೆ ಬರುತ್ತಿವೆ. ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ನಂತರ ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದು, ಒಂದಷ್ಟು ಅಕ್ರಮಗಳು ಬಯಲಾಗತೊಡಗಿವೆ. ಪ್ರಾಮಾಣಿಕ ಮತ್ತು ವಾಸ್ತವ ತನಿಖೆಗಳು ನಡೆದರೆ ಇಡೀ ಜಿಲ್ಲೆಯಲ್ಲಿ ನರೇಗಾ ಹೆಸರಿನಲ್ಲಿ ಮಾಡಿರುವ ಕೋಟಿಗಟ್ಟಲೆ ದಂಧೆ ಬಯಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಬೇಡತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿರುವ ಬಗ್ಗೆ ಈ ಹಿಂದೆ ವರದಿಯಾಗಿತ್ತು. ಜೊತೆಗೆ ಕಾಮಗಾರಿ ನಿರ್ವಹಿಸದೆ ಹಣ ಅಪವ್ಯಯವಾಗುತ್ತಿರುವ ಬಗ್ಗೆಯೂ ಆರೋಪಗಳು ಕೇಳಿಬಂದಿದ್ದವು. ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗುವುದರ ಜೊತೆಗೆ ಗ್ರಾಮಗಳ ಅಭಿವೃದ್ಧಿಗೆ ಹಿನ್ನಡೆ ಆಗುತ್ತಿದೆ ಎಂದು ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ಸರಣಿ ಸುದ್ದಿಗಳು ಪ್ರಕಟವಾದವು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿರವರು ಈ ಸುದ್ದಿಗಳನ್ನು ಸೂಕ್ಷ್ಮವಾಗಿ ಗಮನಿಸಿ, ಜಿಲ್ಲಾ ಪಂಚಾಯಿತಿ ಮುಖ್ಯ ವ್ಯವಸ್ಥಾಪಕರನ್ನು ತಾಲ್ಲೂಕಿನ ನೋಡಲ್ ಅಧಿಕಾರಿಯಾಗಿ ನೇಮಿಸಿದ್ದು, ಸದರಿ ನೋಡಲ್ ಅಧಿಕಾರಿಗಳು ವಾರಕ್ಕೆ ಎರಡು ಗ್ರಾಮ ಪಂಚಾಯಿತಿಗಳ ಕಾರ್ಯವೈಖರಿ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದರು.
ಅದರಂತೆ ಜೂನ್ 29 ರಂದು ನೋಡಲ್ ಅಧಿಕಾರಿಗಳು ಬೇಡತ್ತೂರು, ಮಿಡಿಗೇಶಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದರಿ ವರದಿಯನ್ನು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಒಪ್ಪಿಸಲಿದ್ದಾರೆ. ಜೂನ್ 30 ರಂದು ಜಿಲ್ಲಾ ಪಂಚಾಯಿತಿಯಿಂದ ಕಾಮಗಾರಿಗಳ ಗುಣಮಟ್ಟ, ಅವುಗಳ ಆಗು-ಹೋಗುಗಳ ಬಗ್ಗೆ ಸ್ಥಳ ಪರಿಶೀಲನೆಗಾಗಿ ನಿವೃತ್ತ ಎಂಜಿನಿಯರ್ ಮಂಜುನಾಥ್ ಮೇಲ್ಕಂಡ ಬೇಡತ್ತೂರು ಗ್ರಾಮ ಪಂಚಾಯಿತಿಯಲ್ಲಿನ ಕೃಷಿಹೊಂಡಗಳ ಪರಿಶೀಲನೆಯನ್ನು ನರೇಗಾ ಎಂಜಿನಿಯರ್ ಜೊತೆಗೂಡಿ ಕೈಗೊಂಡಿದ್ದಾರೆ.
ಕೃಷಿ ಹೊಂಡಗಳನ್ನು ಯಾವ ಯಾವ ಪ್ರದೇಶಗಳಲ್ಲಿ ಮಾಡಿಸಿದರೆ, ಮಳೆ ನೀರು ಉತ್ತಮವಾಗಿ ಸಂಗ್ರಹವಾಗಲಿದೆ ಎಂಬ ಬಗ್ಗೆ ತಿಳಿಸಲಿದ್ದಾರೆ. ಬೇಡತ್ತೂರು ಗ್ರಾಮದ ಚಿಕ್ಕ ಕೆರೆಯ ಮೇಲ್ಭಾಗದ ರಸ್ತೆ ಅಗಲೀಕರಣದ ಕಾಮಗಾರಿಯನ್ನು ಯಾವುದೇ ಇಲಾಖೆಯ ಅನುಮತಿಯನ್ನು ಪಡೆಯದೆ ಪ್ರಾರಂಭಿಸಿರುವ ಬಗ್ಗೆ ಪೊಲೀಸ್ ಠಾಣೆಗೆ ಗ್ರಾಪಂ ದೂರು ನೀಡುವುದಕ್ಕೆ ಜೂ. 30 ರಂದು ನಡೆದ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಒಕ್ಕೊರಲ ಬೆಂಬಲ ದೊರೆತಿದೆ.
2021-22 ನೆ ಸಾಲಿಗೆ ಮೇಟರಿಯಲ್ ಕಾಮಗಾರಿಗೆ ಸಿದ್ಧತೆ :
ಬೇಡತ್ತೂರು ಗ್ರಾಮದ ಸರ್ವೆ ನಂ 208 ರಲ್ಲಿ ತೆಂಗು ಸಸಿ ನೆಟ್ಟಿರುವುದಾಗಿ, ಬದು ನಿರ್ಮಾಣ ಮಾಡಿರುವುದಾಗಿ ಹಾಗೂ ದನದ ಕೊಟ್ಟಿಗೆ ನಿರ್ಮಿಸಿರುವುದಾಗಿ ಕಾಮಗಾರಿ (1525005017/ಐ.ಎಫ್ 93393042892484036) ನಂ (48) ಬಿಲ್ ಆಗಿದ್ದು, 29,900 ರೂ. ಬಿಲ್ ಹಣ ಪಡೆಯಲು ಅಧ್ಯಕ್ಷರ ಡಯಾಂಗಲ್ ಆಗಲು ಸಿದ್ಧತೆ ತಯಾರಾಗಿರುತ್ತದೆ. ಒಂದು ವೇಳೆ ಗ್ರಾಪಂ ಅಧ್ಯಕ್ಷರೇನಾದರೂ ಡಯಾಂಗಲ್ ನೀಡಲು ನಿರಾಕರಿಸಿದಲ್ಲಿ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳು ಡಯಾಂಗಲ್ ನೀಡಿದರೂ ಹಣ ಡ್ರಾ ಆಗಲಿದೆ.
ಗ್ರಾಮಸ್ಥರ ಆರೋಪ:
ಇಲ್ಲಿ ದನದ ಕೊಟ್ಟಿಗೆ ನಿರ್ಮಾಣ ಮಾಡಲಾಗಿಲ್ಲ. ನೇರಳೆ, ತೆಂಗು ಸಸಿಗಳ್ಯಾವುವನ್ನೂ ನೆಟ್ಟಿಲ್ಲ, ಆದರೂ ಹಣ ಡ್ರಾ ಮಾಡುವ ಸಿದ್ಧತೆ ನಡೆದಿದೆ. ನಂಬರು (9) ಬೇಡತ್ತೂರು ಗ್ರಾಮದ ಸ.ನಂ 7 ರ ಹಿಸ್ಸಾ 1 ರ ಜಮೀನಿನಲ್ಲ್ಲಿ ತೆಂಗು, ಮಾವು, ನೇರಳೆ ಅಭಿವೃದ್ಧಿ (152500500171/ ಐ.ಎಫ್ 9339045892521793) ಮೆಟೀರಿಯಲ್ ನಂಬರ್ 19 ಕ್ಕೆ 7000 ರೂ., (ನಂಬರ್ 37) ಬೇಡತ್ತೂರು ಗ್ರಾಮದ ಕೃಷ್ಣಪ್ಪನ ಮನೆಯಿಂದ ಸಿಹಿ ನೀರಿನ ಬಾವಿವರೆವಿಗೂ ರೈತರ ರಸ್ತೆ ಅಭಿವೃದ್ಧಿ (ಈ ಮೊದಲು ಮಣ್ಣಿನ ರಸ್ತೆ ಎಂದು ನಮೂದಿಸಿದ್ದರು) ಮೆಟೀರಿಯಲ್ ನಂಬರು 59ಕ್ಕೆ 176967 ರೂ. ಮತ್ತು (ನಂ 38) ಬೇಡತ್ತೂರು ಗ್ರಾಮದ ಸಿದ್ದಗಂಗಪ್ಪ ಜಮೀನಿನಿಂದ ಅಗಸರ ಗೋಪಾಲಪ್ಪನವರ ಜಮೀನಿನವರೆಗೆ ರೈತರ ರಸ್ತೆ ಅಭಿವೃದ್ಧಿ ಮೆಟೀರಿಯಲ್ ನಂಬರ್ 161 (1525005017/ಆರ್.ಸಿ9339042892239203) 90, 700 ರೂ. ಆಗಿರುತದೆ.
ಸದರಿ ಹಣ ಪಾವತಿಗಾಗಿ ಅಪ್ಲೋಡ್ ಆಗಿದ್ದು, ಸದರಿ ಗ್ರಾಪಂನಲ್ಲಿನ ಅವ್ಯವಹಾರಗಳ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಪ್ರಕಟಗೊಂಡಿದ್ದರಿಂದ ವರ್ಕ್ ಡಿಲಿಟ್ ಆಗಿರುತ್ತದೆ. ಈಗಿನ ಕಳಪೆ ಮತ್ತು ನಡೆಯದೇ ಇರುವ ಕಾಮಗಾರಿಗಳ ಬಗ್ಗೆ ಆನ್ಲೈನ್ಲ್ಲಿ ಮಾಹಿತಿ ಸಿಗುವುದಿಲ್ಲ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಪ್ರಾಮಾಣಿಕ ತನಿಖೆಯಿಂದ ಮತ್ತಷ್ಟು ಹಗರಣಗಳು ಬಯಲಿಗೆ ಬರುವುದರಲ್ಲಿ ಸಂದೇಹವಿಲ್ಲ.
ಕಳೆದ ಏಳು ತಿಂಗಳುಗಳಲ್ಲಿ ಅಧಿಕಾರಕ್ಕೆ ಬಂದಂತಹ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರುಗಳ ಹಿಂದೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ತೆರೆಮರೆಯ ಕಾರುಬಾರುಗಳು ನಡೆಯುತ್ತಿದ್ದು, ಇದಕ್ಕೆ ಕೆಲ ಅಧಿಕಾರಿಗಳ ಪರೋಕ್ಷ ಬೆಂಬಲವೂ ಇದ್ದು, ಗ್ರಾಮ ಪಂಚಾಯಿತಿಗಳಲ್ಲಿ ಹಗರಣಗಳು ನಡೆಯಲು ಪ್ರೋತ್ಸಾಹಿಸಿದಂತಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
