ನವದೆಹಲಿ:

ಉಗ್ರರ ದಾಳಿ ನಡೆದು ಇಲ್ಲಿಗೆ 14 ದಿನ ಕಳೆದ ಮೇಲೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇನ್ನೂ ಖಂಡಿಸಿಲ್ಲ, ಹೀಗಿರುವಾಗ ಅವರನ್ನು ನಾವು ಹೇಗೆ ನಂಬುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಶಾ, ಭಯೋತ್ಪಾದನೆಯ ಹಿಂದೆ ನಿಂತಿರುವವರಿಗೆ ಮೋದಿ ಸರ್ಕಾರ ಸಿಂಹಸ್ವಪ್ನವಾಗಿದೆ ಮತ್ತು ಪಾಕ್ ಮೂಲದ ಭಯೋತ್ಪಾದಕರಿಗೆ ಭಯ ಮೂಡಿಸುತ್ತಿದೆ ಎಂದು ಹೇಳಿದ್ದಾರೆ.
ಸ್ವತಂತ್ರ್ಯ ನಂತರ ಭಾರತದಲ್ಲಿ ಭಯೋತ್ಪಾದಕರನ್ನು ಮಟ್ಟ ಹಾಕುವಲ್ಲಿ ನಮ್ಮ ಸರ್ಕಾರದ ಸಾಧನೆ ಹಿಂದೆ ಇದ್ದ ಎಲ್ಲಾ ಸರ್ಕಾರಗಳಿಗೆ ಹೋಲಿಸಿದರೆ ಉತ್ತಮವಾಗಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಉಗ್ರರನ್ನು ನಾಶ ಮಾಡಲಾಗಿದೆ, ಆದರೆ ಪುಲ್ವಾಮ ಉಗ್ರರ ದಾಳಿಯನ್ನು ಪಾಕಿಸ್ತಾನ ಪ್ರಧಾನಿ ಏಕೆ ಖಂಡಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕೊನೆ ಪಕ್ಷ ಕನಿಷ್ಠ ಒಂದು ಬಾರಿಯಾದರೂ ಪುಲ್ವಾಮ ದಾಳಿಯನ್ನು ಖಂಡಿಸಬೇಕಿತ್ತು, ಆದರೆ ಅದನ್ನು ಅವರು ಮಾಡಿಲ್ಲ, ಹೀಗಿರುವಾಗ ಅವರನ್ನು ನಾವು ಹೇಗೆ ನಂಬುವುದು, ಬಹುಶ ಪರಿಸ್ಥಿತಿ ಅವರ ನಿಯಂತ್ರಣದಲ್ಲಿಲ್ಲವೇನೋ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
