ನವದೆಹಲಿ:
ಕೆಲ ತಿಂಗಳ ಹಿಂದೆ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಸಂಬಂಧ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಹೊರಬಿದ್ದ ಬಳಿಕ, ಇದೀಗ ಅದೇ ರೀತಿಯಲ್ಲಿ ಮಸೀದಿಗಳಿಗೆ ಮಹಿಳೆಯರಿಗೂ ಪ್ರವೇಶ ಕಲ್ಪಿಸಬೇಕೆಂದು ಕೋರಿ ಪುಣೆ ಮೂಲದ ದಂಪತಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ಸಂಬಂಧ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ಸಮ್ಮತಿಸಿದ್ದು, ಕೇಂದ್ರ ಸರ್ಕಾರ, ಮಹಿಳಾ ಆಯೋಗ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಕೇಂದ್ರೀಯ ವಕ್ಫ್ ಮಂಡಳಿಗೆ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್.ಎ ಬೊಬ್ಡೆ ಹಾಗೂ ಎಸ್ ಅಬ್ದುಲ್ ನಝೀರ್ ನೇತೃತ್ವದ ಪೀಠ ನೋಟಿಸ್ ಜಾರಿಗೊಳಿಸಿದೆ. ಶಬರಿಮಲೆ ದೇಗುಲ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಒಂದೇ ಕಾರಣಕ್ಕಾಗಿ ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.
ಇಸ್ಲಾಂನ ಧರ್ಮಗ್ರಂಥವಾದ ಕುರಾನ್ನ ಯಾವ ಭಾಗದಲ್ಲೂ ಗಂಡು ಮತ್ತು ಹೆಣ್ಣಿನ ನಡುವೆ ಬೇಧಬಾವ ಮಾಡಿಲ್ಲ. ಆದ್ರೆ ಇತ್ತೀಚಿಗೆ ಇಸ್ಲಾಂ ಧರ್ಮವು ಮಹಿಳೆಯರನ್ನು ತುಳಿಯುವ ಧರ್ಮವಾಗಿ ಮಾರ್ಪಾಡಾಗಿದ್ದು. ಪ್ರವಾದಿಗಳ ಕಾಲದಲ್ಲಿ ಮಹಿಳೆಯರಿಗೆ ಮಸೀದಿಯೊಳಗೆ ಪ್ರವೇಶವಿತ್ತು.
ಕಾಲಕ್ರಮೇಣ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯಲು ಆರಂಭವಾದ ಬಳಿಕ ಮುಖ್ಯ ಪ್ರರ್ಥನಾ ಸಭಾಂಗಣಕ್ಕೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಯಿತು ಎಂದು ಅರ್ಜಿದಾರ ದಂಪತಿ ಯಾಸ್ಮಿನ್ ಹಾಗೂ ಝಬರ್ ಅಹ್ಮದ್ ಪೀರ್ಜಾಡೆ ತಿಳಿಸಿದ್ದಾರೆ.
ಶಬರಿಮಲೆ ಆದೇಶದಂತೆ ಮುಸ್ಲಿಂ ಮಹಿಳೆಯರಿಗೆ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಮೆಕ್ಕಾ ಮತ್ತು ಕೆನಡಾದಲ್ಲಿ ಮಹಿಳೆಯರಿಗೆ ಇಂತಹ ಅವಕಾಶವಿದೆ ಎಂದು ಅರ್ಜಿದಾರರು ಸುಪ್ರೀಂಗೆ ಮನವಿ ಮಾಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








