ನವದೆಹಲಿ:
ಮನೆಯಲ್ಲಿ ಹೆಂಡತಿಗೆ ಹೆದರಿ ಬಾರಿನಲ್ಲಿ ಕುಳಿತು ಮಧ್ಯ ಸೇವನೆ ಮಾಡುವವರಿದ್ದಾರೆ ಆದರೆ ಇಲ್ಲಿ ಹಳಿ ಮೇಲೆ ಕುಳಿತಿದ್ದ ಮೂವರು ರೈಲಿಗೆ ಬಲಿಯಾಗಿರುವ ದುರ್ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಮೂವರೂ ಬೆಳಗ್ಗೆ ಸುಮಾರು 7.15 ಕ್ಕೆ ರೈಲ್ವೇ ಹಳಿ ಮೇಲೆ ಕುಳಿತು ಮದ್ಯ ಸೇವನೆ ಮಾಡುತ್ತಿದ್ದರು. ಈ ವೇಳೆ ಬಿಕಾನೆರ್-ದೆಹಲಿ ಎಕ್ಸ್ ಪ್ರೆಸ್ ರೈಲು ಬಂದಿದೆ. ಈ ಸಂದರ್ಭದಲ್ಲಿ ರೈಲು ಚಾಲಕ ಹಾರ್ನ್ ಹಾಕಿದ್ದಾನೆ. ಆದರೂ ಅವರು ಹಳಿಯಿಂದ ಕದಲದ ಕಾರಣ ಅವರ ಮೇಲೆ ರೈಲು ಸಂಚರಿಸಿದೆ. ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ರೈಲ್ವೇ ಡಿಸಿಪಿ ದಿನೇಶ್ ಗುಪ್ತ ಅವರು ತಿಳಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ರೈಲ್ವೇ ರಕ್ಷಣಾ ಪಡೆ ಮತ್ತು ಸಿವಿಲ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸದ್ಯಕ್ಕೆ ಮೃತರ ಬಗ್ಗೆ ಯಾವುದೇ ಗುರುತು ಪತ್ತೆಯಾಗಿಲ್ಲ. ಈ ಕುರಿತು ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
