ನವದೆಹಲಿ
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾದೇಶಿಕ ಸಂಗ್ರಹ ಆರ್ಥಿಕ ಪಾಲುದಾರಿಕೆ (ಆರ್ ಸಿಇಪಿ) ವ್ಯಾಪಾರದ ಒಪ್ಪಂದದಿಂದ ಹಿಂದೆ ಸರಿಯಲು ವಿಪಕ್ಷ ಕಾಂಗ್ರೆಸ್ ಹಾಗೂ ಅದರ ಮುಖಂಡ ರಾಹುಲ್ ಗಾಂಧಿ ಅವರು ಒತ್ತಡವೇ ಕಾರಣ ಎಂದು ಕಾಂಗ್ರೆಸ್ ಹೇಳಿಕೆ ನೀಡಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಎಐಸಿಸಿ ಸಂಪರ್ಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ‘ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರ ತೀವ್ರ ಒತ್ತಡದಿಂದ ಬಿಜೆಪಿ ಸರ್ಕಾರ ರೈತರು, ಹಾಲು ಉತ್ಪಾದಕರು, ಮೀನುಗಾರರು, ಸಣ್ಣ ಮತ್ತು ಮಧ್ಯಮ ವ್ಯವಹಾರಸ್ತರಿಗೆ ಅನಾನುಕೂಲವಾಗುವಂತಹ ಒಪ್ಪಂದದಿಂದ ಹಿಂದೆ ಸರಿಯುವಂತಾಯಿತು’ ಎಂದಿದ್ದಾರೆ.
“ರಾಷ್ಟ್ರೀಯ ಹಿತಾಸಕ್ತಿಗಾಗಿ ಪ್ರತಿಯೊಬ್ಬರೂ ಹೋರಾಟ ನಡೆಸಿದಕ್ಕೆ ದೊರೆತ ಜಯವಿದು” ಎಂದಿದ್ದಾರೆ.
ಇದಕ್ಕೂ ಮುನ್ನ, ಭಾರತದ ಆರ್ ಸಿಇಪಿ ಒಪ್ಪಂದದಿಂದ ಹಿಂದೆ ಸರಿಯಲು ನಿರ್ಧರಿಸಿರುವುದಾಗಿ ಪ್ರಕಟಿಸಿತ್ತು. ‘ರಾಷ್ಟ್ರೀಯ ಹಿತಾಸಕ್ತಿಯಿಂದ ಭಾರತ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಘೋಷಿಸಿದೆ ’ ಎಂದು ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಈ ಕುರಿತು ಹೇಳಿಕೆ ನೀಡಿದ್ದಾರೆ.
ಬಿಜೆಪಿ ಸರ್ಕಾರ ದೇಶದ ನಿಜವಾದ ಕಾಳಜಿ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಗಮನಿಸದೆ ಆರ್ ಸಿಇಪಿಗೆ ಸಹಿ ಹಾಕಲು ಮುಂದಾಗಿತ್ತು. ತೀವ್ರ ನಿರುದ್ಯೋಗ, ಕುಸಿಯುತ್ತಿರುವ ಆರ್ಥಿಕತೆ ಮತ್ತು ಕೃಷಿ ಬಿಕ್ಕಟ್ಟಿನ ನಡುವೆ ಇಂತಹದೊಂದು ಒಪ್ಪಂದಕ್ಕೆ ಸಹಿ ಹಾಕಿದ್ದರೆ,ದೇಶದಲ್ಲಿ ಉಸಿರುಗಟ್ಟುವ ವಾತಾವರಣ ಉಂಟಾಗುತ್ತಿತ್ತು ಎಂದು ಸುರ್ಜೇವಾಲ ಹೇಳಿದ್ಧಾರೆ.
![](https://prajapragathi.com/wp-content/uploads/2019/11/images.jpeg)