ಭೋಪಾಲ್:
ಬಿಜೆಪಿಯ ವಿವಾದಾತ್ಮಕ ಸಂಸದೆ ಎಂದು ಹೆಸರಾಗಿರುವ ಸಾಧ್ವಿ ಪ್ರಾಗ್ಯ ಠಾಕೂರ್ ಅವರಿಗೆ ಮಧ್ಯ ಪ್ರದೇಶ ಕಾಂಗ್ರೆಸ್ ಶಾಸಕರೊಬ್ಬರು ಜೀವ ಬೆದರಿಕೆ ಹಾಕಿದ್ದಾರೆ.
ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರೇನಾದರು ರಾಜ್ಯಕ್ಕೆ ಕಾಲಿಟ್ಟರೆ ಅವರನ್ನು ಜೀವಂತವಾಗಿ ಸುಟ್ಟು ಹಾಕುವುದಾಗಿ ಕಾಂಗ್ರೆಸ್ ಶಾಸಕರೊಬ್ಬರು ಬೆದರಿಕೆ ಹಾಕಿದ್ದಾರೆ. ಬಿಯೋರಾ ಶಾಸಕ ಗೋವರ್ಧನ್ ದಂಗಿ ಸಾಧ್ವಿ ಪ್ರಾಗ್ಯ ಸಿಂಗ್ ಠಾಕೂರ್ ವಿರುದ್ಧ ಈ ಹೇಳಿಕೆ ನೀಡಿದ್ದಾರೆ.
ಕಳೆದ ಬುಧವಾರ ವಿಶೇಷ ರಕ್ಷಣಾ ಪಡೆ ತಿದ್ದುಪಡಿ ಮಸೂದೆ ಮೇಲಿನ ಚರ್ಚೆ ಸಂದರ್ಭದಲ್ಲಿ ಸಾಧ್ವಿ ಪ್ರಾಗ್ಯ ಸಿಂಗ್ ಮಾತನಾಡುತ್ತಾ ಮಹಾತ್ಮಾ ಗಾಂಧೀಜಿಯವರನ್ನು ಹತ್ಯೆ ಮಾಡಿದ್ದ ನಾಥೂರಾಮ್ ಗೋಡ್ಸೆ ದೇಶಭಕ್ತ ಎಂದು ಕರೆದಿದ್ದರು.ಇದು ಸದನದಲ್ಲಿ ವ್ಯಾಪಕ ಕೋಲಾಹಲ, ಗದ್ದಲಕ್ಕೆ ಕಾರಣವಾಗಿ ಸಾಧ್ವಿ ಪ್ರಾಗ್ಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಒತ್ತಾಯಿಸಿತ್ತು.ಪ್ರತಿಪಕ್ಷದವರ ತೀವ್ರ ಟೀಕೆ, ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಬಿಜೆಪಿ ಸಾಧ್ವಿ ಪ್ರಾಗ್ಯ ಅವರನ್ನು ರಕ್ಷಣಾ ಸಲಹಾ ಸಮಿತಿ ಸ್ಥಾನದಿಂದ ತೆಗೆದುಹಾಕಿತ್ತು. ಅಲ್ಲದೆ ಸಂಸದೀಯ ಸಭೆಗೆ ಬಾರದಂತೆ ಸೂಚನೆ ನೀಡಿದೆ.
