ಕಾನೂನು ಎಷ್ಟಿದ್ದರೂ, ಏಕತೆಯ ಭಾವ ಹೃದಯದಿಂದ ಮಾತ್ರ ಮೂಡುತ್ತದೆ..!!

ನವದೆಹಲಿ

     ಜಮ್ಮು ಕಾಶ್ಮೀರಕ್ಕೆ ಸ್ವಾಯತ್ತತೆ ಒದಗಿಸಿದ್ದ ಸಂವಿಧಾನದ 370ನೇ ವಿಧಿಯನ್ನು ಹಿಂಪಡೆಯುವ ಸಂಬಂಧ ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಸೋಮವಾರ ಮಂಡಿಸಿದ ಶಾಸನಬದ್ಧ ನಿರ್ಣಯಕ್ಕೆ ವಿಪಕ್ಷ ನಾಯಕ ಗುಲಾಮ್ ನಬಿ ಆಜಾದ್ ತೀವ್ರ ವಿರೋಧ ವ್ಯಕ್ತಪಡಿಸಿದರು.

     ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಕೇಂದ್ರ ಸರ್ಕಾರ ಎಷ್ಟು ನಿಯಮಗಳನ್ನು ಬೇಕಾದರೂ ಜಾರಿಗೆ ತರಬಹುದು. ಅದರೆ, ಏಕೀಕರಣ ಕಾನೂನಿನಿಂದಲ್ಲ, ಬದಲಿಗೆ ಹೃದಯದಿಂದ ಮಾತ್ರ ಸಾಧ್ಯ ಎಂಬುದನ್ನು ಮರೆಯಬಾರದು ಎಂದರು. ಜಮ್ಮು ಕಾಶ್ಮೀರದ ಜನರು ದೇಶದ ಇತರ ಭಾಗಗಳೊಂದಿಗೆ 30-35 ವರ್ಷಗಳಿಂದ ಹೊಂದಿದ್ದ ಏಕತೆಯ ಭಾವವನ್ನು ಎನ್ ಡಿಎ ಸರ್ಕಾರ ಅಂತ್ಯಗೊಳಿಸಿದೆ ಎಂದು ಆರೋಪಿಸಿದರು.

     ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆಯುವ ನಿರ್ಣಯ ವಿರೋಧಿಸಿದ ಅವರು, ‘ನಿಮಗೆ ರಾಜ್ಯವನ್ನು ಲೆಫ್ಟಿನೆಂಟ್ ಗವರ್ನರ್ ಆಳ್ವಿಕೆ ನಡೆಸಬೇಕಿದೆ. ನೀವು ಜಮ್ಮು ಕಾಶ್ಮೀರವನ್ನು ಶೂನ್ಯಗೊಳಿಸಿದ್ದೀರಿ’ ಎಂದು ಕಿಡಿಕಾರಿದರು.

     ಈ ನಿರ್ಣಯವನ್ನು ಕೈಗೊಳ್ಳುವವರು ಗುಜರಾತ್ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸಲು ಯತ್ನಿಸಲಿ. ಆಗ ಪರಿಣಾಮ ತಿಳಿಯುತ್ತದೆ ಎಂದ ಅವರು, ಹಳೆಯ ಭಾರತವನ್ನು ಮುರಿಯುವ ಆದೇಶಗಳ ಆಧಾರದ ಮೇಲೆ ಕೇಂದ್ರ ಸರ್ಕಾರ ನವ ಭಾರತದ ನಿರ್ಮಾಣಕ್ಕೆ ಮುಂದಾಗಿದೆ ಎಂದು ಆರೋಪಿಸಿದರು. ಭಾರತದ ಭೂಪಟದಲ್ಲಿ ಇಂದು ಒಂದು ರಾಜ್ಯ ಕಡಿಮೆಯಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

      ಕೇಂದ್ರ ಸರ್ಕಾರ ಮತಬ್ಯಾಂಕ್ ಗಾಗಿ ದೇಶದ ಸಂಪ್ರದಾಯ, ಸಂಸ್ಕೃತಿ ಹಾಗೂ ಇತಿಹಾಸದೊಂದಿಗೆ ಆಟವಾಡಬಾರದು. ಈ ನಿರ್ಧಾರವನ್ನು ನಾಲ್ಕೈದು ತಿಂಗಳ ನಂತರವೂ ತೆಗೆದುಕೊಳ್ಳಬಹುದಿತ್ತು ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap