ನವದೆಹಲಿ
ಸರಕು ಮತ್ತು ಸೇವಾ ತೆರಿಗೆ ಜಿಎಸ್ಟಿ ಅಡಿ ಐಜಿಎಸ್ಟಿ ಅಂದರೆ ಇಂಟಿಗ್ರೇಟೆಡ್ ಜಿಎಸ್ಟಿ ಯ ಹಣ ಹಿಂಪಾವತಿ ಅಂದರೆ ರೀಫಂಡ್ ಪ್ರಕ್ರಿಯೆಗಳನ್ನು ನೇರವಾಗಿ ಆನ್ಲೈನ್ ಅರ್ಜಿ ಪರಿಗಣಿಸದೇ ವಾಸ್ತವವಾಗಿ ಅದರ ಸತ್ಯಾಂಶ ಪರಿಶೀಲಿಸಿ ನಂತರ ಹಣ ವಾಪಸ್ ನೀಡಲಾಗುವುದು ಎಂದು ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ. ರಫ್ತುದಾರರ ವಂಚನೆ ತಡೆಗಟ್ಟಲು ಈ ಕ್ರಮ ಎಂದು ಕೇಂದ್ರ ಪರೋಕ್ಷ ತೆರಿಗೆ ಮತ್ತು ಅಬಕಾರಿ ಮಂಡಳಿ (ಸಿಬಿಐಸಿ) ತಿಳಿಸಿದೆ.
ಈ ಪ್ರಕ್ರಿಯೆಯಿಂದ ನೈಜ ರಫ್ತುದಾರರಿಗೆ ಯಾವುದೇ ತೊಂದರೆಯಾಗುವುದಿಲ್ಲ, ಅವರಿಗೆ ನ್ಯಾಯವಾಗಿ ಹಿಂದಿರುಗಬೇಕಾದ ಪಾವತಿಸಿದ ತೆರಿಗೆ ಮೊತ್ತ ದೊರೆಯಲಿದೆ ಎಂದು ಸಿಬಿಐಸಿ ಸ್ಪಷ್ಟಪಡಿಸಿದೆ.ಸ್ವಯಂಚಾಲಿತ ತೆರಿಗೆ ವಾಪಸ್ ನೀಡಿಕೆ ಪ್ರಕ್ರಿಯೆಗೆ ಹಿನ್ನೆಡೆಯಾಗಿದೆ ಎಂಬ ಮಾಧ್ಯಮ ವರದಿ ಹಿನ್ನೆಲೆಯಲ್ಲಿ ಸಿಬಿಐಸಿ ಈ ಹೇಳಿಕೆ ನೀಡಿದೆ.ಐಜಿಎಸ್ಟಿ ರೀಫಂಡ್ ಅಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ವಂಚನೆಯಾಗುತ್ತಿದ್ದು ಪರಿಶೀಲನೆ ನಂತರ ಪಾವತಿಸಿದ ಹಣ ಹಿಂದಕ್ಕೆ ನೀಡುವ ಪ್ರಕ್ರಿಯೆಗೆ ಸರ್ಕಾರ ಮುಂದಾಗಿದೆ.
ಕೆಲವು ರಫ್ತುದಾರರ ನಮೂದಿಸುವ ಐಟಿಸಿ (ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ – ಖರೀದಿ ಮೇಲೆ ಪಾವತಿಸಿರುವ ತೆರಿಗೆ) ಸರಿಯಾಗಿದೆಯೇ ಎಂದು ಪರಿಶೀಲಿಸುವಂತೆ ಸಿಬಿಐಸಿ ಇತ್ತೀಚೆಗೆ ಅಬಕಾರಿ ಮತ್ತು ಜಿಎಸ್ಟಿ ಇಲಾಖೆಗಳಿಗೆ ಸೂಚನೆ ನೀಡಿತ್ತು.
ಒಟ್ಟು 1.42 ಲಕ್ಷ ರಫ್ತುದಾರರ ಪೈಕಿ ಈವರೆಗೆ 5,106 ರಫ್ತುದಾರರನ್ನು ಅಪಾಯಕಾರಿ ಎಂದು ಗುರುತಿಸಲಾಗಿದೆ. ಅಂದರೆ ಒಟ್ಟು ರಫ್ತುದಾರರ ಪೈಕಿ ಶೇ 3.5 ರಷ್ಟು ಮಾತ್ರ ಅಪಾಯಕಾರಿಯಾಗಿದ್ದು ಕಳೆದೆರಡು ದಿನಗಳಲ್ಲಿ ಅಂದರೆ ಜೂನ್ 17 ಮತ್ತು 18 ರಂದು ಕೇವಲ 925 ರಫ್ತುದಾರರು ನಮೂದಿಸಿದ ಶಿಪ್ಪಿಂಗ್ ಬಿಲ್ ಪೈಕಿ 1,436 ಬಿಲ್ ಗಳನ್ನು ಮಾತ್ರ ತಡೆಹಿಡಿಯಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ದಿನಂಪ್ರತಿ ಸುಮಾರು 9 ಸಾವಿರ ರಫ್ತುದಾರರು 20 ಸಾವಿರ ಶಿಪ್ಪಿಂಗ್ ಬಿಲ್ ಗಳನ್ನು ನೀಡುತ್ತಿದ್ದು ಈಗ ತಡೆಹಿಡಿರುವ ಬಿಲ್ ಅತ್ಯಲ್ಪ. ಸದ್ಯಕ್ಕೆ ತಡೆಹಿಡಿಯಲಾದ ಬಿಲ್ ಗಳಲ್ಲಿನ ಉತ್ಪನ್ನಗಳ ರಫ್ತಿಗೂ ಅನುಮತಿ ನೀಡಲಾಗಿದೆ. ಪರಿಶೀಲನೆ ನಂತರವಷ್ಟೇ ಗರಿಷ್ಠ 30 ದಿನಗಳೊಳಗೆ ರೀಫಂಡ್ ನೀಡಲಾಗುವುದು ಎಂದು ಸಿಬಿಐಸಿ ವಿವರಿಸಿದೆ.ವಂಚನೆ ತಡೆಗಟ್ಟಲು ಈ ಪರಿಶೀಲನೆಯ ಹೊಸ ಪ್ರಕ್ರಿಯೆ ಆರಂಭಿಸಲಾಗಿದ್ದು, ಎಲ್ಲ ನೈಜ ರಫ್ತುದಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಿಬಿಐಸಿ ಅಭಯ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
