ನೇಪಾಳ : Gen Z ಗಳಿಂದ ಭಾರೀ ಪ್ರತಿಭಟನೆ, ಗುಂಡೇಟಿಗೆ ಇಬ್ಬರು ಬಲಿ

ಕಠ್ಮಂಡು:

    ನೇಪಾಳವು ಸೋಶಿಯಲ್‌ ಮೀಡಿಯಾ ಅಪ್ಲಿಕೇಷನ್‌ಗಳನ್ನು ನಿರ್ಬಂಧಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಇದೇ ವಿಚಾರವಾಗಿ ನೇಪಾಳದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಕೆಪಿ ಶರ್ಮಾ ಓಲಿ ಸರ್ಕಾರದಲ್ಲಿನ ಭ್ರಷ್ಟಾಚಾರ ಮತ್ತು 26 ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಷೇಧಿಸುವ ಇತ್ತೀಚಿನ ಕ್ರಮದ ವಿರುದ್ಧ ಜೆನ್‌ ಝಿ ಪೀಳಿಗೆಯ ಯುವಕ ಯುವತಿಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಆನ್‌ಲೈನ್‌ನಲ್ಲಿ ಪ್ರಾರಂಭವಾದ ಪ್ರತಿಭಟನೆ ಸೋಮವಾರ ರಸ್ತೆಗಿಳಿಯುವ ಹಂತಕ್ಕೆ ತಲುಪಿತು. ಪ್ರತಿಭಟನಾಕಾರರು ಸಂಸತ್ತಿನ ಬಳಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದರು.

    ಭದ್ರತಾ ಪಡೆಗಳು ವಿದ್ಯಾರ್ಥಿಗಳನ್ನು ಚದುರಿಸಲು ಗುಂಡು ಹಾರಿಸಿದ್ದಾರೆ. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, 8o ಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗಿವೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಹೇಳಲಾಗಿದೆ. ಜೆನ್‌ ಝಿ ಎಂದು ಕರೆಯಲ್ಪಟ್ಟಿರುವ ಈ ಪ್ರತಿಭಟನೆ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ನಡೆದಿದೆ. ಸಾವಿರಾರು ಯುವ ಪ್ರತಿಭಟನಾಕಾರರು ನೆರೆದಿದ್ದರು. ಅನೇಕರು ನಿರ್ಬಂಧಿತ ವಲಯಗಳನ್ನು ಉಲ್ಲಂಘಿಸಿ, ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಿದರು. ಘರ್ಷಣೆಗಳು ಉಲ್ಬಣಗೊಳ್ಳುತ್ತಿದ್ದಂತೆ, ಪೊಲೀಸರು ಹಲವಾರು ಸ್ಥಳಗಳಲ್ಲಿ ಗುಂಡು ಹಾರಿಸಿದ್ದಾರೆ. ರಾಜಧಾನಿಯಲ್ಲಿ ಕರ್ಫ್ಯೂ ಘೋಷಣೆ ಮಾಡಲಾಗಿದೆ.

   ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಲ್ಲಿ ನೋಂದಾಯಿಸಲು ವಿಫಲವಾದ ಕಾರಣಕ್ಕಾಗಿ ಸೆಪ್ಟೆಂಬರ್ 4 ರಂದು ಫೇಸ್‌ಬುಕ್, ಟ್ವಿಟರ್, ವಾಟ್ಸಾಪ್ ಮತ್ತು ಯೂಟ್ಯೂಬ್ ಸೇರಿದಂತೆ 26 ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಸರ್ಕಾರ ನಿರ್ಬಂಧಿಸಿತ್ತು. ಪ್ರತಿಭಟನಾಕಾರರು ಮರದ ಕೊಂಬೆಗಳು ಮತ್ತು ನೀರಿನ ಬಾಟಲಿಗಳನ್ನು ಎಸೆದು ಸರ್ಕಾರದ ವಿರೋಧಿ ಘೋಷಣೆಗಳನ್ನು ಕೂಗಿದ ನಂತರ ಪೊಲೀಸರು ಜಲಫಿರಂಗಿ, ಅಶ್ರುವಾಯುವನ್ನು ಪ್ರಯೋಗಿಸಿದ್ದಾರೆ. 

   ನೇಪಾಳದಲ್ಲಿ ವ್ಯಾಪಕವಾಗಿ ಬಳಸಲಾಗುವ ಸುಮಾರು 26 ಕ್ಕೂ ಅಧಿಕ ಸೋಶಿಯಲ್‌ ಮೀಡಿಯಾಗಳ ಕಂಪನಿಗಳಿಗೆ ಅಧಿಕೃತವಾಗಿ ತಮ್ಮ ಕಂಪನಿಗಳನ್ನು ನೋಂದಾಯಿಸಲು ಪದೇ ಪದೇ ನೋಟಿಸ್ ನೀಡಲಾಗುತ್ತಿದ್ದರೂ ನೋಂದಾಯಿಸಲು ವಿಫಲವಾದ ಕಂಪನಿಗಳನ್ನು ಕಳೆದ ವಾರದಿಂದ ನಿರ್ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ನೋಂದಾಯಿಸಲು ಆಗಸ್ಟ್ 28 ರಿಂದ ಏಳು ದಿನಗಳ ಕಾಲಾವಕಾಶ ನೀಡಲಾಗಿತ್ತು.

Recent Articles

spot_img

Related Stories

Share via
Copy link