ಕೊಪ್ಫಳ:
ಪ್ರಸಿದ್ಧ ಹುಲಿಗೆಮ್ಮ ದೇವಸ್ಥಾನದಲ್ಲಿ ನವಜಾತ ಹೆಣ್ಣು ಶಿಶುವೊಂದು ಪತ್ತೆಯಾಗಿದೆ. ದೇವಾಲಯದ ಆವರಣದಲ್ಲಿ ಶಿಶುವನ್ನು ಬಿಸಾಡಿ ಹೋಗಲಾಗಿದೆ. ಶಿಶುವಿನ ದೇಹ ಹುಳುಗಳಿಂದ ತುಂಬಿತ್ತು. ಮಗು ಅಳುವ ಶಬ್ಧ ಕೇಳಿ ಭಕ್ತರು ಗಮನಿಸಿ ಹೋಂ ಗಾರ್ಡ್ ಸಿಬ್ಬಂದಿಗೆ ತಿಳಿಸಿದ್ದಾರೆ. ಸದ್ಯ ಶಿಶುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದೆ.
ತುಂಗಭದ್ರಾ ನದಿ ದಂಡೆಯಲ್ಲಿರುವ ಈ ಪ್ರಸಿದ್ಧ ಹುಲಿಗೆಮ್ಮ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಜಾತ್ರೆ ಸಮಯದಲ್ಲಿ ಲಕ್ಷಾಂತರ ಜನ ಸೇರುತ್ತಾರೆ. ಇಂತಹ ಪವಿತ್ರ ಸ್ಥಳದಲ್ಲಿ ನವಜಾತ ಶಿಶುವನ್ನು ಬಿಸಾಡಿ ಹೋದ ಘಟನೆ ಆಘಾತ ಮೂಡಿಸಿದೆ. ಸದ್ಯ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ತಡರಾತ್ರಿ ದೇವಸ್ಥಾನದ ಆವರಣದಲ್ಲಿ ಶಿಶುವಿನ ಅಳು ಕೇಳಿ ಬಂದಿತ್ತು. ಸಿಬ್ಬಂದಿಗಳು ಹಾಗೂ ಭಕ್ತರು ಸುತ್ತ ಮುತ್ತಲಿನ ಜಾಗದಲ್ಲಿ ಹುಡುಕಾಟ ನಡೆಸಿದ್ದರು. ಆಗ ಸಂಪೂರ್ಣ ಹುಳುವಿನಿಂದ ಆವರಿಸಿದ್ದ ಹೆಣ್ಣು ಮಗು ಪತ್ತೆಯಾಗಿತ್ತು.
ವೈದ್ಯರು ತಿಳಿಸಿದಂತೆ, ಶಿಶುವು ತಡರಾತ್ರಿ ಜನಿಸಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆದರೆ ಸಕಾಲಿಕ ಚಿಕಿತ್ಸೆಯಿಂದ ಪ್ರಾಣಾಪಾಯದಿಂದ ಪಾರಾಗಿದೆ. ಶಿಶು ಈಗ ಸುರಕ್ಷಿತವಾಗಿದ್ದು, ಆರೈಕೆ ಮಾಡಲಾಗುತ್ತಿದೆ. ಹೆಣ್ಣು ಮಗುವೆಂದು ತಿಳಿದು ಬಿಸಾಡಿದ್ದಾರಾ ಎಂಬ ಅನುಮಾನ ಕಾಡುತ್ತಿದೆ.
ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ನಡೆಯುತ್ತವೆ. ಕಳೆದ ಎರಡು ವರ್ಷಗಳಲ್ಲಿ 3 ಪ್ರಕರಣಗಳು ದಾಖಲಾಗಿದ್ದು, ಒಟ್ಟು 13 ಮಂದಿಯನ್ನು ಬಂಧನ ಮಾಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುವ ಮಾಹಿತಿಗಳ ಪ್ರಕಾರ, ಬೆಂಗಳೂರು ಗ್ರಾಮಾಂತರದ ಎಸ್ಪಿ ಜಿ ಆಸ್ಪತ್ರೆ, ಮಂಡ್ಯ ಜಿಲ್ಲೆಯ ಪಾಂಡವಪುರದ ಸರ್ಕಾರಿ ವಸತಿ ಗೃಹ, ಬೆಂಗಳೂರು ನಗರದ ದ್ಯಾನಿಷ್ ಪಾಲಿ ಕ್ಲಿನಿಕ್ ನಲ್ಲಿ ತಲಾ ಒಂದು ಪ್ರಕರಣ ನಡೆದಿದೆ.
ಭ್ರೂಣ ಲಿಂಗ ಪರೀಕ್ಷೆ ನಡೆಸಿ ಪಿಸಿ ಮತ್ತು ಪಿಎನ್ಡಿಟಿ ಕಾಯ್ದೆಯನ್ನು ಉಲ್ಲಂಘಿಸಿರುವ ಆರೋಪದ ಅಡಿಯಲ್ಲೂ ಪ್ರಕರಣಗಳು ದಾಖಲು ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ಒಟ್ಟು 12 ಪ್ರಕರಣಗಳು ಈವರೆಗೆ ದಾಖಲು ಮಾಡಿಕೊಳ್ಳಲಾಗಿದೆ. ಬೆಂಗಳೂರು ನಗರ 1, ಬೆಂಗಳೂರು ಗ್ರಾಮಾಂತರ 1, ಬೆಳಗಾವಿ 1, ಮೈಸೂರು 1, ರಾಮಗರ 1, ಚಿತ್ರದುರ್ಗ 1, ಶಿವಮೊಗ್ಗ 1, ಮಂಡ್ಯ 1, ಹಾಸನ 1 ಹಾಗೂ ಬಾಗಲಕೋಟೆಯಲ್ಲಿ 3 ಪ್ರಕರಣಗಳು ದಾಖಲಾಗಿವೆ.








