ಮುಂಬೈ:
ಮಹಾರಾಷ್ಟ್ರಕ್ಕೆ ಮೂರನೇ ಉಪಮುಖ್ಯಮಂತ್ರಿ ಬರಲಿದ್ದಾರೆ. ಶಿವಸೇನೆ ಮುಖ್ಯಸ್ಥ ಮತ್ತು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಪಕ್ಷದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಶಿವಸೇನೆ(ಯುಬಿಟಿ) ನಾಯಕ ಸಂಜಯ್ ರಾವತ್ ಶುಕ್ರವಾರ ಹೇಳಿದ್ದಾರೆ.ಇಂದು ವರದಿಗಾರರೊಂದಿಗೆ ಮಾತನಾಡಿದ ರಾಜ್ಯಸಭಾ ಸಂಸದ, ತೆರೆಮರೆಯ ಚಟುವಟಿಕೆಗಳನ್ನು ನೋಡಿದರೆ ಭವಿಷ್ಯದಲ್ಲಿ ರಾಜ್ಯಕ್ಕೆ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ.
“ಏಕನಾಥ್ ಶಿಂಧೆ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸಬಾರದು. ಏಕೆಂದರೆ ಅವರು ಉಪಮುಖ್ಯಮಂತ್ರಿ. ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದರು. ಈಗ ಅದೇ ಪಕ್ಷದಿಂದ ಮೂರನೇ ಉಪಮುಖ್ಯಮಂತ್ರಿ ನೇಮಕ ವಾಗುತ್ತಿರುವುದರಿಂದ ಅವರು ನಾಳೆ ಡಿಸಿಎಂ ಆಗಿ ಇರುವುದಿಲ್ಲ. ಅವರು (ಶಿಂಧೆ) ಇದರ ಬಗ್ಗೆ ಯೋಚಿಸಬೇಕು” ಎಂದಿದ್ದಾರೆ.
ಬಿಜೆಪಿಯನ್ನು ಉಲ್ಲೇಖಿಸಿ, ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರದ “ಶತ್ರುಗಳಿಗೆ” ಸೇವೆ ಸಲ್ಲಿಸುತ್ತಿದ್ದಾರೆ ಎಂದು ರಾವತ್ ಟೀಕಿಸಿದ್ದಾರೆ.ಕೈಗಾರಿಕಾ ಸಚಿವ ಉದಯ್ ಸಮಂತ್ ಅವರು 20 ಶಾಸಕರ ಬೆಂಬಲವನ್ನು ಹೊಂದಿರುವುದರಿಂದ ಶಿಂಧೆ ನೇತೃತ್ವದ ಶಿವಸೇನೆ ವಿಭಜನೆಯಾಗಬಹುದು ಎಂದು ಹೇಳಿಕೊಂಡ ಕೆಲವು ದಿನಗಳ ನಂತರ ರಾವತ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಕಳೆದ ವರ್ಷ ನವೆಂಬರ್ನಲ್ಲಿ ನಡೆದ ರಾಜ್ಯ ವಿಧಾಸಭೆ ಚುನಾವಣೆಯ ನಂತರ ಶಿಂಧೆ ಅವರಿಗೆ ಮುಖ್ಯಮಂತ್ರಿ ಸ್ಥಾನ ನಿರಾಕರಿಸಿದ್ದರಿಂದ ಬೇಸರಗೊಂಡಿದ್ದಾಗ, ತಮ್ಮನ್ನು ಡಿಸಿಎಂ ಮಾಡುವ ಬಗ್ಗೆ ಯೋಚಿಸಲಾಗಿತ್ತು ಎಂದು ಸಮಂತ್ ಹೇಳಿದ್ದಾರೆ.
ಆದಾಗ್ಯೂ, ಪಕ್ಷದ ಮುಖ್ಯಸ್ಥ ಶಿಂಧೆ ಅವರೊಂದಿಗಿನ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ತಮ್ಮ ನಡುವೆ ಬಿರುಕು ಮೂಡಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಸಮಂತ್ ಪ್ರತಿಪಾದಿಸಿದ್ದಾರೆ.ಮಹಾರಾಷ್ಟ್ರದಲ್ಲಿ ಪ್ರಸ್ತುತ ಶಿಂಧೆ ಮತ್ತು ಎನ್ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಉಪಮುಖ್ಯಮಂತ್ರಿಗಳಾಗಿದ್ದಾರೆ.