ಐಪಿಎಲ್‌ ಸಂಭ್ರಮಾಚರಣೆಗೆ ಹೊಸ ನಿಯಮ ಜಾರಿ ಸಾಧ್ಯತೆ!

ಮುಂಬಯಿ: 

   ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಆರ್‌ಸಿಬಿ ಸಂಭ್ರಮಾಚರಣೆಗೆ ವೇಳೆ ನಡೆದ ಕಾಲ್ತುಳಿತ  ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದರು. ಈ ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ಬಿಸಿಸಿಐ ಭವಿಷ್ಯದಲ್ಲಿ ಈ ರೀತಿ ಘಟನೆ ಸಂಭವಿಸದಿರಲು ಹೊಸ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ನಾಳೆ ಶನಿವಾರ ನಡೆಯುವ ಬಿಸಿಸಿಐ 28ನೇ ಅಪೆಕ್ಸ್‌ ಕೌನ್ಸಿಲ್‌ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

   ಮಹತ್ವದ ಸಭೆಯಲ್ಲಿ ಸಂಭ್ರಮಾಚರಣೆಗೆ ನಿಯಮ ಜಾರಿಗೊಳಿಸುವ ಬಗ್ಗೆ ಉಲ್ಲೇಖವಿದೆ. ‘ಐಪಿಎಲ್‌ ಸಂಭ್ರಮಾಚರಣೆಗೆ ಕೆಲ ನಿಯಮಗಳನ್ನು ಜಾರಿಗೊಳಿಸಬೇಕಾದ ಅಗತ್ಯವಿದೆ. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಿದ್ದೇವೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.

   ಸಭೆಯಲ್ಲಿ ಆರ್‌ಸಿಬಿ ಫ್ರಾಂಚೈಸಿ ಮತ್ತು ಇನ್ನು ಮುಂದೆ ಚಿನ್ನಸ್ವಾಮಿಯಲ್ಲಿ ಐಪಿಎಲ್‌ ಪಂದ್ಯಗಳನ್ನು ನಡೆಸುವ ಬಗ್ಗೆಯೂ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆಯೂ ಇದೆ. ಇದು ಮಾತ್ರವಲ್ಲದೆ 2025-26ರ ದೇಶೀಯ ಕ್ರಿಕೆಟ್‌ ವೇಳಾಪಟ್ಟಿ ನಿರ್ಧಾರ, 2026ರ ಆರಂಭದಲ್ಲಿ ಭಾರತಕ್ಕೆ ಬರಲಿರುವ ನ್ಯೂಜಿಲ್ಯಾಂಡ್‌ ತಂಡ ಆಡಲಿರುವ ತಾಣಗಳನ್ನು ನಿರ್ಧರಿಸುವುದು ಬಿಸಿಸಿಐ ಚರ್ಚಾಪಟ್ಟಿಯಲ್ಲಿ ಸೇರಿದೆ.

   ಜೂನ್‌ 3 ರಂದು ನಡೆದಿದ್ದ ಐಪಿಎಲ್‌ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರುತಂಡ ಪಂಜಾಬ್‌ ಕಿಂಗ್ಸ್‌ ತಂಡವನ್ನೂ ಮಣಿಸಿ 18 ವರ್ಷಗಳ ಬಳಿಕ ಮೊದಲ ಐಪಿಎಲ್‌ ಟ್ರೋಫಿ ಗೆದ್ದಿತ್ತು. ಆರ್‌ಸಿಬಿ ಗೆದ್ದರೂ ಕೂಡ ಆ ಬಳಿಕ ಚಿನ್ನಸ್ವಾಮಿಯ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11ಮಂದಿ ಸಾವನ್ನಪ್ಪಿದ್ದು ತಂಡದ ಕಪ್‌ ಗೆದ್ದ ಎಲ್ಲ ಸಂಭ್ರಮವನ್ನು ಮರೆಯುಂತೆ ಮಾಡಿತ್ತು. ಐಪಿಎಲ್‌ ಇತಿಹಾಸದ ಪುಟದಲ್ಲಿ ಈ ಘಟನೆ ದುರಂತವಾಗಿ ದಾಖಲಾಯಿತು.

Recent Articles

spot_img

Related Stories

Share via
Copy link