ಬೆಂಗಳೂರರಿಗರಿಗೆ ಶುರುವಾಯ್ತು ಮತ್ತೊಂದು ಆತಂಕ ….!

ಬೆಂಗಳೂರು

     ಬೆಂಗಳೂರಿಗೆ  ಈಗ ಇಲಿ ಜ್ವರದ ಆತಂಕ ಎದುರಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಲೆಪ್ಟೊಸ್ಪೈರೋಸಿಸ್  ಎಂದು ಕರೆಯಲ್ಪಡುವ ಇಲಿ ಜ್ವರ ಪ್ರಕರಣಗಳು ಹೆಚ್ಚಾಗುತ್ತಿವೆ . ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ 169 ಜನರನ್ನು ಇಲಿ ಜ್ವರ ಪತ್ತೆ ಪರೀಕ್ಷೆಗೆ ಒಳಪಡಿಸಿದ್ದು 24 ಜನರಲ್ಲಿ ಇಲಿ ಜ್ವರ ಪತ್ತೆಯಾಗಿದೆ. ಜನವರಿಯಿಂದ ಇಲ್ಲಿವರೆಗೆ 3044 ಮಂದಿಯಲ್ಲಿ ಲಕ್ಷಣಗಳು ಕಂಡುಬಂದಿದ್ದು, ಜನರ ರಕ್ತ ಮಾದರಿ ಪಡೆದು ಪರೀಕ್ಷೆ ಮಾಡಿಸಿದಾಗ 365 ಜನರಲ್ಲಿ ಪಾಸಿಟಿವ್ ಕಂಡುಬಂದಿದೆ. ಹೀಗಾಗಿ ಆರೋಗ್ಯ ಇಲಾಖೆ ಇಲಿ ಜ್ವರದ ಬಗ್ಗೆ ಎಚ್ಚರಿಕೆ ನೀಡಿದೆ.

    ಲೆಪ್ಟೊಸ್ಪೈರೋಸಿಸ್ ಅಥವಾ ಇಲಿ ಜ್ವರ ಇಲಿಗಳಿಂದ ಹರಡುತ್ತದೆ. ಬೆಂಗಳೂರು ವೈದ್ಯರು ಇಲಿ ಜ್ವರದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಇಲಿಯ ಎಂಜಲು, ಮೂತ್ರ, ಮಲ ಅಥವಾ ಅದರ ದೇಹದ ಯಾವುದೇ ದ್ರವ ಮಾನವರ ಚರ್ಮಕ್ಕೆ ತಾಗುವುದರಿಂದ ಈ ಸೋಂಕು ಹರಡುತ್ತದೆ. ಹೀಗಾಗಿ ತೀವ್ರ ಜ್ವರ , ತಲೆನೋವು, ಕಣ್ಣು ಕೆಂಪಾಗುವುದು, ವಾಕರಿಕೆ ಅಥವಾ ವಾಂತಿ, ಮೈಕೈ ನೋವು, ಮೈಮೇಲೆ ಗುಳ್ಳೆಗಳು ಹಾಗೂ ಸೋಂಕು ಉಂಟಾದ ಎರಡು ದಿನಗಳ ನಂತರ ಮತ್ತು ಕೀಲುನೋವು ಕಂಡುಬಂದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ.

   ಸಾಮಾನ್ಯವಾಗಿ ಮಳೆಗಾಲದಲ್ಲಿ ಇಲಿ ಜ್ವರ ಪ್ರಕರಣಗಳು ಹೆಚ್ಚು ಕಂಡುಬರುತ್ತವೆ. ಆದರೆ ಈ ವರ್ಷ ಮಳೆಗಾಲ ಆರಂಭಕ್ಕೂ ಇಲಿಜ್ವರ ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಆರೋಗ್ಯ ಇಲಾಖೆ ನಿರ್ದೇಶಕ ಅನ್ಸಾರ್ ಅಹ್ಮದ್ ತಿಳಿಸಿದ್ದಾರೆ.

ಇಲಿ ಜ್ವರದ ಲಕ್ಷಣಗಳು ಏನು?

  • ತಲೆನೋವು
  • ಕಣ್ಣು ಕೆಂಪಾಗುವುದು
  • ವಾಕರಿಕೆ ಅಥವಾ ವಾಂತಿ
  • ಮೈಕೈ ನೋವು
  • ಮೈಮೇಲೆ ಗುಳ್ಳೆಗಳು
  • ತೀವ್ರ ಜ್ವರ
  • ಸೋಂಕು ಉಂಟಾದ ಎರಡು ದಿನಗಳ ನಂತರ ಕೀಲುನೋವು 

    ಬೆಂಗಳೂರಿನಲ್ಲಿ ಡೆಂಘಿ, ಚಿಕುನ್ ಗುನ್ಯಾ ಹಾಗೂ ಇತರ ಅನೇಕ ವೈರಲ್ ಸೋಂಕುಗಳ ನಡುವೆ ಈಗ ಇಲಿ ಜ್ವರದ ಆತಂಕ ಹೆಚ್ಚಾಗಿರುವುದರಿಂದ ಮನೆಯ ಸಂಪ್​ಗಳ, ಬಳಸುವ ನೀರಿನ ಬಗ್ಗೆ ಎಚ್ಚರ ವಹಿಸಿ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಮನೆಯಲ್ಲಿ ಅಥವಾ ಉಗ್ರಾಣಗಳಲ್ಲಿ ಆಹಾರ ಪದಾರ್ಥಗಳು, ದವಸ ಧಾನ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೆ ಸ್ವಚ್ಛತೆ ಕಾಪಾಡಿಕೊಳ್ಳುವುದರ ಮೂಲಕ ಹಾಗೂ ಸಾಧ್ಯವಾದಷ್ಟು ಬಿಸಿ ನೀರು ಸೇವನೆ ಮಾಡುವ ಮೂಲಕ ಇಲಿ ಜ್ವರ ಹರಡುವುದನ್ನು ನಿಯಂತ್ರಿಸಬಹುದು ಎಂದು ಕೆಸಿ ಜನರಲ್ ಆಸ್ಪತ್ರೆ ವೈದ್ಯ ಡಾ ಜಗದೀಶ್ ಸಲಹೆ ನೀಡಿದ್ದಾರೆ. 

    ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಬಿಸಿಲ ಬೇಗೆ, ಹಾಗೂ ಅಕಾಲಿಕ ಮಳೆಯಿಂದ ಸಾಂಕ್ರಾಮಿಕ ಖಾಯಿಲೆಗಳು ಹೆಚ್ಚುತ್ತಿವೆ. ಹೀಗಾಗಿ ಜನರು ಮುನ್ನೆಚ್ಚರಿಕೆ ವಹಿಸಬೇಕಿದೆ.

Recent Articles

spot_img

Related Stories

Share via
Copy link