ಸ್ವಪಕ್ಷದ ಕಾರ್ಯಕ್ರಮಗಳಿಗೆ ಶಶಿ ತರೂರ್‌ಗೆ ನೋ ಎಂಟ್ರಿ!

ತಿರುವನಂತಪುರಂ: 

    ಕಾಂಗ್ರೆಸ್ ಸಂಸದ  ಶಶಿ ತರೂರ್   ಅವರು ಈಗ ನಮ್ಮೊಂದಿಗೆ ಇಲ್ಲ. ರಾಷ್ಟ್ರೀಯ ಭದ್ರತಾ ವಿಷಯದ ಬಗ್ಗೆ ಅವರು ತಮ್ಮ ನಿಲುವನ್ನು ಬದಲಾಯಿಸುವವರೆಗೆ ರಾಜ್ಯ ರಾಜಧಾನಿಯಲ್ಲಿ ನಡೆಯುವ ಯಾವುದೇ ಪಕ್ಷದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಕೆ. ಮುರಳೀಧರನ್  ಹೇಳಿದ್ದಾರೆ. ಕೊಚ್ಚಿಯಲ್ಲಿ ಶನಿವಾರ ಮಾತನಾಡಿದ್ದ ತರೂರ್, ರಾಷ್ಟ್ರ ಮೊದಲು. ಪಕ್ಷಗಳು ದೇಶವನ್ನು ಉತ್ತಮಗೊಳಿಸುವ ಸಾಧನಗಳಾಗಿವೆ ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ ಮುರಳೀಧರನ್ ಈ ಪ್ರತಿಕ್ರಿಯೆ ನೀಡಿದ್ದಾರೆ.

    ತಿರುವಂತಪುರಂನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುರಳೀಧರನ್, ರಾಷ್ಟ್ರೀಯ ಭದ್ರತಾ ವಿಷಯದ ಬಗ್ಗೆ ತಮ್ಮ ನಿಲುವನ್ನು ಬದಲಾಯಿಸುವವರೆಗೆ ಶಶಿ ತರೂರ್ ಅವರನ್ನು ರಾಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದಿಲ್ಲ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸದಸ್ಯರೂ ಆಗಿರುವ ತರೂರ್ ಅವರನ್ನು ಇನ್ನು ಮುಂದೆ “ನಮ್ಮಲ್ಲಿ ಒಬ್ಬರು” ಎಂದು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದರು.

   ಕಾಂಗ್ರೆಸ್ ಸಂಸದರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕೆಂದು ಪಕ್ಷದ ರಾಷ್ಟ್ರೀಯ ನಾಯಕರು ನಿರ್ಧರಿಸುತ್ತಾರೆ. ತರೂರ್ ತಮ್ಮ ನಿಲುವನ್ನು ಬದಲಾಯಿಸುವವರೆಗೆ ತಿರುವನಂತಪುರಂನಲ್ಲಿ ನಡೆಯುವ ಯಾವುದೇ ಪಕ್ಷದ ಕಾರ್ಯಕ್ರಮಕ್ಕೆ ನಾವು ಅವರನ್ನು ಆಹ್ವಾನಿಸುವುದಿಲ್ಲ. ಅವರು ನಮ್ಮೊಂದಿಗಿಲ್ಲ, ಆದ್ದರಿಂದ ಅವರು ಕಾರ್ಯಕ್ರಮವನ್ನು ಬಹಿಷ್ಕರಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

  ದೇಶ ಮತ್ತು ಅದರ ಗಡಿಗಳಲ್ಲಿ ಇತ್ತೀಚೆಗೆ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಸಶಸ್ತ್ರ ಪಡೆಗಳು ಮತ್ತು ಕೇಂದ್ರ ಸರ್ಕಾರವನ್ನು ಬೆಂಬಲಿಸುವ ಅವರ ನಿಲುವಿನಿಂದಾಗಿ ಬಹಳಷ್ಟು ಜನರು ಅವರನ್ನು ಟೀಕಿಸಿದ್ದಾರೆ ಎಂದು ಹೇಳಿದ್ದ ಕಾಂಗ್ರೆಸ್ ಸಂಸದ ತರೂರ್, ಆದರೂ ನಾನು ನನ್ನ ನಿಲುವಿಗೆ ಬದ್ಧನಾಗಿರುವುದಾಗಿ ತಿಳಿಸಿದ್ದರು.

   ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, ರಾಷ್ಟ್ರವು ಮೊದಲು ಬರುತ್ತದೆ. ಪಕ್ಷಗಳು ರಾಷ್ಟ್ರವನ್ನು ಉತ್ತಮಗೊಳಿಸುವ ಸಾಧನಗಳಾಗಿವೆ. ಆದ್ದರಿಂದ ನನ್ನ ಅಭಿಪ್ರಾಯದಲ್ಲಿ ನೀವು ಯಾವುದೇ ಪಕ್ಷಕ್ಕೆ ಸೇರಿದವರಾಗಿರಲಿ ಆ ಪಕ್ಷದ ಉದ್ದೇಶವು ತನ್ನದೇ ಆದ ರೀತಿಯಲ್ಲಿ ಉತ್ತಮ ಭಾರತವನ್ನು ರಚಿಸುವುದು ಎಂದು ಹೇಳಿದ್ದರು. 

   ಮುಖ್ಯಮಂತ್ರಿ ಹುದ್ದೆಗೆ ತರೂರ್ ಸೂಕ್ತ ಎಂದು ಸೂಚಿಸುವ ಸಮೀಕ್ಷೆಯ ಕುರಿತು ಮಾತನಾಡಿದ ಮುರಳೀಧರನ್, ತರೂರ್ ಅವರನ್ನು ತರಾಟೆಗೆ ತೆಗೆದುಕೊಂಡು, ಅವರು ಮೊದಲು ಅವರು ಯಾವ ಪಕ್ಷಕ್ಕೆ ಸೇರಿದವರು ಎಂಬುದನ್ನು ನಿರ್ಧರಿಸಬೇಕು ಎಂದು ಹೇಳಿದರು.

   ಕಾಶ್ಮೀರದ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಅನಂತರ ತರೂರ್ ಅವರ ಪ್ರತಿಕ್ರಿಯೆಗಳಿಂದಾಗಿ ತರೂರ್ ಮತ್ತು ಪಕ್ಷದ ಕೇಂದ್ರ ನಾಯಕರ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗುತ್ತಿದೆ. ಈ ಮಧ್ಯೆಯೇ ತಿರುವನಂತಪುರಂ ಸಂಸದ ಮುರಳೀಧರನ್ ಅವರನ್ನು ಟೀಕಿಸಿ ಕಾಂಗ್ರೆಸ್‌ನಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

Recent Articles

spot_img

Related Stories

Share via
Copy link