ರಾಂಚಿ:
ಜಾರ್ಖಂಡ್ನಲ್ಲಿ ಬೆಳ್ಳಂ ಬೆಳಗ್ಗೆ ಭದ್ರತಾ ಪಡೆ ಕಾರ್ಯಾಚರಣೆ ನಡೆಸಿ ಆರು ಮಾವೋವಾದಿಗಳನ್ನು ಹೊಡೆದುರುಳಿಸಿದ್ದಾರೆ. ಸೋಮವಾರ ಬೆಳಿಗ್ಗೆ ಜಾರ್ಖಂಡ್ನ ಬೊಕಾರೊ ಜಿಲ್ಲೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಆರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯ ಲಾಲ್ಪಾನಿಯಾ ಪ್ರದೇಶದ ಲುಗು ಬೆಟ್ಟಗಳಲ್ಲಿ ಬೆಳಿಗ್ಗೆ 5.30 ರ ಸುಮಾರಿಗೆ ಪ್ರಾರಂಭವಾದ ಗುಂಡಿನ ಚಕಮಕಿಯಲ್ಲಿ ಆರು ನಕ್ಸಲರನ್ನು ಹೊಡೆದುರುಳಿಸಲಾಗಿದೆ.
ಹತ ನಕ್ಸಲರಿಂದ ಎರಡು INSAS ರೈಫಲ್ಗಳು, ಒಂದು ಸ್ವಯಂ-ಲೋಡಿಂಗ್ ರೈಫಲ್ (SLR) ಮತ್ತು ಒಂದು ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಕಾರ್ಯಾಚರಣೆ ವೇಳೆ ಭದ್ರತಾ ಸಿಬ್ಬಂದಿಯಲ್ಲಿ ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಅವರು ಹೇಳಿದರು.
ಕಳೆದ ಫೆಬ್ರವರಿಯಲ್ಲಿ ನಡೆದ ಎನ್ ಕೌಂಟರ್ನಲ್ಲಿ ಸಿ- 60 ಕಮಾಂಡೋ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಮಾವೋವಾದಿಗಳನ್ನು ಮಹಾರಾಷ್ಟ್ರದ ಗಡ್ಚಿರೋಳಿ ಜಿಲ್ಲೆಯಲ್ಲಿಎರುಡು ದಿನಗಳ ಹಿಂದೆ ಬಂಧಿಸಲಾಗಿದೆ. ಸೈಲು ಮುದ್ದೇಲಾ ಅಲಿಯಾಸ್ ರಘು (55), ಆತನ ಪತ್ನಿ ಜೈನಿ ಖರತಮ್ ಅಲಿಯಾಸ್ ಅಖಿಲಾ (41), ಝಾನ್ಸಿ ತಲಾಂಡಿ ಅಲಿಯಾಸ್ ಗಂಗು ಮತ್ತು ಮನಿಲಾ ಗವಾಡೆ ಅಲಿಯಾಸ್ ಸರಿತಾ (21) ಬಂಧಿತರು. ಇವರನ್ನು ತಡಗಾಂವ್ ಪೊಲೀಸ್ ಠಾಣೆ ಮತ್ತು ಸಿಆರ್ ಪಿಎಫ್ ನ 9ನೇ ಬೆಟಾಲಿಯನ್ ಸಿಬ್ಬಂದಿ ಬಂಧಿಸಿದ್ದಾರೆ.
ಭಮ್ರಾಗಡ್ ಉಪವಿಭಾಗದ ಭಾಗವಾಗಿರುವ ತಡ್ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಪಲ್ಲಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ಈ ನಾಲ್ವರು ಮಾವೋವಾದಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ದಾಳಿ ನಡೆಸುವ ಉದ್ದೇಶದಿಂದ ಅವರು ಅಲ್ಲಿಗೆ ಬಂದಿದ್ದರು. ಕಳೆದ ಫೆಬ್ರವರಿ 11 ರಂದು ದಿರಂಗಿ- ಫುಲ್ನಾರ್ ಅರಣ್ಯ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಸಿ -60 ಕಮಾಂಡೋ ಹತ್ಯೆಯಲ್ಲಿ ಈ ನಾಲ್ವರು ಭಾಗಿಯಾಗಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೈಲು ಮುದ್ದೇಲಾ ಅಲಿಯಾಸ್ ರಘು ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ದಕ್ಷಿಣ ಗಡ್ಚಿರೋಲಿ ವಿಭಾಗದಲ್ಲಿದ್ದನು. ಜೈನಿ ಖರಟಮ್ ಅಲಿಯಾಸ್ ಅಖಿಲಾ ಭಮ್ರಾಗಡ್ ಪ್ರದೇಶ ಸಮಿತಿಯಲ್ಲಿದ್ದನು . ಝಾನ್ಸಿ ತಲಾಂಡಿ ಅಲಿಯಾಸ್ ಗಂಗು ಮತ್ತು ಮನಿಲಾ ಗವಾಡೆ ಭಮ್ರಾಗಡ್ ಎಲ್ ಒಸಿಯ ಭಾಗವಾಗಿದ್ದನು.34 ಎನ್ಕೌಂಟರ್, ಏಳು ಬೆಂಕಿ ಹಚ್ಚಿದ ಪ್ರಕರಣ, 23 ಕೊಲೆಗಳು ಸೇರಿದಂತೆ ಒಟ್ಟು 77 ಪ್ರಕರಣಗಳಲ್ಲಿ ಸೈಲು ಮುದ್ದೇಲ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. 18 ಎನ್ಕೌಂಟರ್, ಮೂರು ಬೆಂಕಿ ಹಚ್ಚಿದ ಪ್ರಕರಣ ಮತ್ತು ನಾಲ್ಕು ಕೊಲೆಗಳು ಸೇರಿದಂತೆ ಒಟ್ಟು 29 ಪ್ರಕರಣಗಳಲ್ಲಿ ಖರತಮ್ ಆರೋಪಿಯಾಗಿದ್ದಾನೆ.
ಝಾನ್ಸಿ ತಲಂಡಿ 12 ಎನ್ಕೌಂಟರ್ ಮತ್ತು ಒಂದು ಕೊಲೆ ಸೇರಿದಂತೆ ಒಟ್ಟು 14 ಅಪರಾಧಗಳಲ್ಲಿ ಭಾಗಿಯಾಗಿದ್ದು, ಮನಿಲಾ 10 ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ. ಇವುಗಳಲ್ಲಿ ನಾಲ್ಕು ಕೊಲೆ ಮತ್ತು ಐದು ಎನ್ಕೌಂಟರ್ಗಳು ಸೇರಿವೆ. ಈ ಪ್ರದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಗಡ್ಚಿರೋಲಿ ಎಸ್ಪಿ ನೀಲೋತ್ಪಾಲ್ ತಿಳಿಸಿದ್ದಾರೆ.
