ಅಲೆಮಾರಿ ಸಮುದಾಯಕ್ಕೆ ವಸತಿ ಸೌಲಭ್ಯ:ಸಿಎಂ

ಬೆಂಗಳೂರು

    ಅಲೆಮಾರಿ ಸಮುದಾಯದವರಿಗೆ ಸೂರು ಒದಗಿಸುವ ’ವಸತಿ ಸೌಲಭ್ಯ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.ಅಲೆಮಾರಿ ಸಮುದಾಯ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ವಾಗಿ ಪ್ರಗತಿ ಸಾಧಿಸಬೇಕಾಗಿದ್ದು ಅವರಿಗೆ ಸ್ವಂತ ಸೂರು ಒದಗಿಸಿ ಅವರ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.

    ನಗರದ ಕುಮಾರ ಕೃಪಾದ ಗಾಂಧಿ ಭವನದಲ್ಲಿ ಶನಿವಾರ ಕರ್ನಾಟಕ ಅಲೆಮಾರಿ, ಅಲೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ವತಿಯಿಂದ ಆಯೋಜಿಸಿದ್ದ, ಅಲೆಮಾರಿ ಸಮಸ್ಯೆ ಸವಾಲುಗಳು ಮತ್ತು ಪರಿಹಾರೋಪಾಯಗಳು ಸಮಾಲೋಚನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ಹಿಂದೆ ಮುಖ್ಯಮಂತ್ರಿ ಆಗಿದ್ದ ವೇಳೆಯೂ ಅಲೆಮಾರಿ ಸಮುದಾಯದ ಅಭಿವೃದ್ಧಿ ಗಾಗಿ ವಿಶೇಷ ಯೋಜನೆಗಳನ್ನು ಕೈಗೊಳ್ಳಲಾಗಿತ್ತು. ಜೊತೆಗೆ ಶೈಕ್ಷಣಿಕ ಪ್ರಗತಿಗೂ ಒತ್ತು ನೀಡಲಿದ್ದು, ಯಾವೊಂದು ಮಗು ಸಹ ಶಾಲೆಯಿಂದ ಹೊರಗಡೆ ಇರಬಾರದು ಎಂದು ಅವರು ಹೇಳಿದರು.

      ಅಲೆಮಾರಿ ಸಮಸ್ಯೆ ಸವಾಲುಗಳು ಮತ್ತು ಪರಿಹಾರೋಪಾಯಗಳು ಸಮಾಲೋಚನಾ ಸಭೆಯಲ್ಲಿ ಜನಾಂಗದ ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿ ಗತಿ ಗಳ ಬಗ್ಗೆ ಚರ್ಚೆ ನಡೆಯಲಿ.ಬಳಿಕ, ಪ್ರಮುಖ ಅಂಶಗಳನ್ನು ಇಲ್ಲಿನ ಮುಖಂಡರು ಶಿಫಾರಸ್ಸು ಮಾಡಿದರೆ, ಸರ್ಕಾರದ ಮುಂದಿನ ಬಜೆಟ್ ನಲ್ಲಿ ಜಾರಿಗೆ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.

      ಅಲೆಮಾರಿ ಒಳ ಜಾತಿ ಗಳು ಇಂದು ಸರ್ಕಾರದ ಸೌಲಭ್ಯ ಪಡೆಯುವಲ್ಲಿ ವಿಫಲವಾಗಿವೆ.ಆದರೆ, ಇತರೆ ಜಾತಿಗಳು ನಕಲಿ ಜಾತಿ ಪ್ರಮಾಣವನ್ನಿಟ್ಟುಕೊಂಡು ಇವರ ಹಕ್ಕು ಕಸಿದುಕೊಳ್ಳುತ್ತಿದ್ದಾರೆ.ಈ ಸಂಬಂಧ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸೂಚನೆ ನೀಡಿದರು.ಅಲೆಮಾರಿ ಸಮುದಾಯ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು.ಇದಕ್ಕಾಗಿ ಸರ್ಕಾರ ಹೆಚ್ಚಿನ ಒತ್ತು ನೀಡಲಿದ್ದು, ಸಮುದಾಯದ ಮುಖಂಡರು ಕೈಜೋಡಿಸಬೇಕಾಗಿದೆ ಎಂದ ಅವರು, ಅಲೆಮಾರಿ ಸಮುದಾಯ ಉಳಿವಿಗಾಗಿ ಭೂಮಿ ಹಂಚಿಕೆ ಪ್ರಕ್ರಿಯೆ ಚಿಂತನೆ ನಡೆಸಲಾಗಿದೆ ಎಂದು ನುಡಿದರು.

     ಈ ಸಂದರ್ಭದಲ್ಲಿ ಕೇಂದ್ರ ದ ಅಲೆಮಾರಿ ಕಲ್ಯಾಣ ಮತ್ತು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಆರ್.ಇದಾರೆ(ದಾದಾ), ಹಂಪಿಯ ಕನ್ನಡ ವಿವಿಯ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಕೆ.ಎಂ.ಮೈತ್ರಿ, ಬಿಜೆಪಿ ಮುಖಂಡ ರವಿ ಕುಮಾರ್, ಒಕ್ಕೂಟದ ಅಧ್ಯಕ್ಷ ಕೆ.ಭಾಸ್ಕರ್ ದಾಸ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap