ಮುನ್ನಲೆಗೆ ಬಂತು ಬಿಜೆಪಿಯ ಹಳೆ ಹಗರಣ …!

ಬೆಂಗಳೂರು:

    ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಮತ್ತೊಂದು ಹಗರಣ ಮುನ್ನಲೆಗೆ ಬಂದಿದೆ. ಭಾಗ್ಯಲಕ್ಷ್ಮಿ ಯೋಜನೆಯಡಿ ಉಚಿತ ಸೀರೆ ಹಂಚಿಕೆಯಲ್ಲಿ 23 ಕೋಟಿ ಹಗರಣ ನಡೆದಿರುವುದಾಗಿ ಮಾಜಿ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಸಂವಹನ ಮತ್ತು ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಬಹಿರಂಗಪಡಿಸಿದ್ದಾರೆ.

   ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, 2011 ರಲ್ಲಿ ಭಾಗ್ಯಲಕ್ಷ್ಮಿ ಯೋಜನೆಯ ಅಡಿ ಉಚಿತ ಸೀರೆ ಹಂಚಿಕೆಯಲ್ಲಿ 23 ಕೋಟಿ ಹಗರಣ ನಡೆದಿದೆ. ಸುಮಾರು 10 ಲಕ್ಷ ಸೀರೆಗಳನ್ನು ಹಂಚಿಕೆ ಮಾಡಲಾಗಿತ್ತು. ರೂ.100 ಮುಖಬೆಲೆಯ ಸೀರೆಗಳಿಗೆ ಹೆಚ್ಚು ಬೆಲೆ ಕೊಟ್ಟು ಸೂರತ್ ಇಂದ ತರಿಸಲಾಗಿತ್ತು. ಈ ಹಗರಣದ ಬಗ್ಗೆ ವಿಧಾನ ಪರಿಷತ್ ಅಲ್ಲಿ ಮೋಟಮ್ಮ ಅವರು ವಿರೋಧ ಪಕ್ಷದ ನಾಯಕರಾಗಿ ಇದ್ದಾಗ ಈ ವಿಚಾರದ ಬಗ್ಗೆ ಚರ್ಚೆಯಾಗಿದೆ. ಸದಸ್ಯರಾಗಿದ್ದ ಯು. ಬಿ. ವೆಂಕಟೇಶ್ ಅವರು ಹಾಗೂ ದಯಾನಂದ ಅವರು ಇದರ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದ್ದರು. ಈ ಹಗರಣದ ಬಗ್ಗೆ ತನಿಖೆ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

   ರಾಜಸ್ಥಾನದಿಂದ ಬಂದಿರುವ ಲೆಹರ್ ಸಿಂಗ್ ಅವರು ನಮ್ಮ ಕರ್ನಾಟಕದ ಹಿತ ಕಾಪಾಡುತ್ತಾರೋ ಅಥವಾ ರಾಜಸ್ಥಾನದ ಹಿತ ಕಾಪಾಡುತ್ತಾರೋ ನೋಡಬೇಕು. ಅಕ್ರಮಗಳ ಬಗ್ಗೆ ಮಾತನಾಡುವ ಅವರು ಈ ಸೀರೆ ಹಗರಣದ ಬಗ್ಗೆ ದನಿ ಎತ್ತಬೇಕು, ತನಿಖೆ ನಡೆಸಿ ಎಂದು ಸಿಎಂಗೆ ಪತ್ರ ಬರೆಯಬೇಕು ಎಂದು ತಿಳಿಸಿದರು.

   ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಟಿ.ಜೆ.ಅಬ್ರಹಾಂ, ಪ್ರದೀಪ್ ಕುಮಾರ್, ಸ್ನೇಹಮಯಿ ಕೃಷ್ಣ ಮುಡಾ ಪ್ರಕರಣದಲ್ಲಿ ನೀಡಿರುವ ದೂರಿನ ಆಧಾರದ ಮೇಲೆ ಮುಖ್ಯಮಂತ್ರಿ ವಿರುದ್ಧ ಸೆಕ್ಷನ್ 17 ಎ ಅಡಿ ತನಿಖೆ ನಡೆಸಲು ಸೂಚಿಸಲಾಗಿದೆ. ಇವರು ಸುಪ್ರೀಂ ಕೋರ್ಟಿನಲ್ಲಿ ಹೇಗೆ ಶುಲ್ಕ ಕಟ್ಟುತ್ತಾರೆ. ಅಷ್ಟೊಂದು ಹಣ ಇವರ ಬಳಿ ಇದೆಯೇ? ಎಂದು ಪ್ರಶ್ನಿಸಿದರು.

   ಸ್ನೇಹಮಯಿ ಕೃಷ್ಣ ಮೇಲೆ ಮೈಸೂರು ನಗರ ಒಂದರಲ್ಲಿ 22 ಎಫ್‍ಐಆರ್ ಗಳಾಗಿವೆ. ಈತ ಒಂದೇ ವರ್ಷದಲ್ಲಿ 110 ಅರ್ಜಿಗಳ ಮೂಲಕ ದಾಖಲಾತಿಯನ್ನು ಪಡೆದುಕೊಂಡಿದ್ದಾರೆ. ಸ್ನೇಹಮಯಿ ಕೃಷ್ಣ ಭೂ ಹಗರಣಗಳನ್ನು ಸೃಷ್ಟಿ ಮಾಡಿ ಅದಕ್ಕೆ ಸಂಬಂಧಪಟ್ಟವರಿಗೆ ಕಿರುಕುಳ ನೀಡುವ ವ್ಯಕ್ತಿ. ಅಮಾಯಕ ಭೂಮಾಲಕರನ್ನು ಹೆದರಿಸಿ ಸಣ್ಣ ಪುಟ್ಟ ಜಗಳಗಳನ್ನು ಸೃಷ್ಟಿ ಮಾಡಿ ಕಾನೂನನ್ನು ದುರುಪಯೋಗ ಮಾಡಿಕೊಂಡಿರುವ ವ್ಯಕ್ತಿ ಎಂದು ಅವರು ದೂರಿದರು.

   ಈತ ಕೊಟ್ಟ ಕಿರುಕುಳಕ್ಕೆ ಮೈಸೂರಿನ ಕುವೆಂಪು ನಗರದ ಮಹಿಳೆ ಮಾನಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್‍ಟಿಐ ನಲ್ಲಿ ದಾಖಲೆ ಪಡೆಯುವುದು, ಅದಕ್ಕೆ ವೈಟ್ನರ್ ಹಾಕುವುದು, ನಕಲಿ ಸೀಲುಗಳನ್ನು ಹಾಕಿ ದಾಖಲೆ ಸೃಷ್ಟಿ ಮಾಡುವುದು ಹೀಗೆ ಈತ ನಕಲಿಗಳ ಸರದಾರ. ಮುಡಾ ಪ್ರಕರಣದಲ್ಲಿ ಒಂದಷ್ಟು ನಕಲಿ ದಾಖಲೆ ಸೃಷ್ಟಿ ಮಾಡಿದ್ದಾನೆ ಎಂದು ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಆದರೆ ಇದುವರೆರೆಗೂ ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಿದರು.

   ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್ ಪೇದೆಯ ವಿಡಿಯೋ ಚಿತ್ರೀಕರಣ ಮಾಡಿ ಅಶ್ಲೀಲವಾಗಿ ಬಿಂಬಿಸಿದ ಪ್ರಕರಣ ಈತನ ಮೇಲಿದೆ. ಈತನ ಮೇಲೆ ಮೈಸೂರು ನಗರ, ಗ್ರಾಮಾಂತರ ಸೇರಿ 44 ಪ್ರಕರಣಗಳು ದಾಖಲಾಗಿವೆ. ಸ್ನೇಹಮಯಿ ಕೃಷ್ಣ ನೀಡಿದ್ದ ದಾಖಲೆಗಳನ್ನೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದು ಎಂದು ತಿಳಿಸಿದರು.

Recent Articles

spot_img

Related Stories

Share via
Copy link
Powered by Social Snap