ಸಂಸದರು ಇನ್ಮುಂದೆ ಸಂಸತ್ತಿನ ಗೇಟ್​ ಬಳಿ ಪ್ರತಿಭಟನೆ ಮಾಡುವಂತಿಲ್ಲ: ಓಂ ಬಿರ್ಲಾ

ನವದೆಹಲಿ :

   ಸಂಸತ್ತಿನ ಸಂಕೀರ್ಣ ಗುರುವಾರ ಕೇವಲ ಗದ್ದಲಗಳಿಂದಲೇ ಕೂಡಿತ್ತು. ಬಿಜೆಪಿ, ಕಾಂಗ್ರೆಸ್​ ನಡುವೆ ತಿಕ್ಕಾಟ ನಡೆದಿತ್ತು. ಇವರು ತಳ್ಳಿದರೆಂದು ಅವರು ಅವರು ತಳ್ಳಿದರೆಂದು ಇವರು ಜಗಳ ಮಾಡುತ್ತಾ ಬೀಳುತ್ತಲೇ ಇದ್ದರು. ಇದೆಲ್ಲವನ್ನು ನೋಡಿ ತಾಳ್ಮೆ ಕಳೆದುಕೊಂಡ ಸ್ಪೀಕರ್ ಓಂ ಬಿರ್ಲಾ ಇನ್ನುಮುಂದೆ ಯಾವ ಸಂಸದರೂ ಕೂಡ ಸಂಸತ್ತಿನ ಗೇಟ್ ಬಳಿ ಪ್ರತಿಭಟನೆ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

  ಸಂಸತ್ ಭವನದಲ್ಲಿ ನಡೆದ ಪ್ರತಿಭಟನೆಯ ವೇಳೆ ಇಬ್ಬರು ಬಿಜೆಪಿ ಸಂಸದರಾದ ಪ್ರತಾಪ್ ಸಾರಂಗಿ ಮತ್ತು ಮುಖೇಶ್ ರಜಪೂತ್ ಗಾಯಗೊಂಡಿದ್ದರು. ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ತಳ್ಳುವಿಕೆಯಿಂದ ಇಬ್ಬರೂ ಸಂಸದರು ಗಾಯಗೊಂಡಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ. ಆದರೆ, ಬಿಜೆಪಿಯ ಈ ಆರೋಪಗಳನ್ನು ಕಾಂಗ್ರೆಸ್ ಸಾರಾಸಗಟಾಗಿ ತಳ್ಳಿಹಾಕಿದೆ. 

ಗಲಾಟೆ ಘಟನೆ ಕುರಿತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ‘ರಾಹುಲ್ ಗಾಂಧಿ ಬಿ.ಆರ್. ಶಾಂತಿಯುತವಾಗಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಿಡಿದುಕೊಂಡು ‘ಜೈ ಭೀಮ್’ ಘೋಷಣೆಗಳನ್ನು ಕೂಗುತ್ತಾ ಸಂಸತ್ತಿಗೆ ತೆರಳುತ್ತಿದ್ದರು. ಅವರನ್ನು ಸಂಸತ್ತಿಗೆ ಹೋಗದಂತೆ ತಡೆದವರು ಯಾರು ಎಂದು ಪ್ರಶ್ನಿಸಿದ್ದಾರೆ.

   ದೆಹಲಿ ಪೊಲೀಸರು ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಬಿಜೆಪಿ ಲೋಕಸಭಾ ಸದಸ್ಯರಾದ ಅನುರಾಗ್ ಠಾಕೂರ್ ಮತ್ತು ಬಾನ್ಸುರಿ ಸ್ವರಾಜ್ ಅವರು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು.

   ಬಿಜೆಪಿ ಸಂಸದರು ತಮ್ಮ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಹಲವಾರು ಮಹಿಳಾ ಸಂಸದರನ್ನು ಸಂಸತ್ ಭವನಕ್ಕೆ ಪ್ರವೇಶಿಸದಂತೆ ತಡೆದು ಗದ್ದಲ ಮಾಡಿದರು ಎಂದು ಕಾಂಗ್ರೆಸ್ ಹೇಳಿಕೊಂಡಿದೆ.ಇಂದು ಎಲ್ಲದಕ್ಕೂ ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಹೆಸರೆತ್ತುವುದು ಫ್ಯಾಷನ್ ಆಗಿ ಹೋಗಿದೆ. ಇಷ್ಟು ಬಾರಿ ದೇವರ ಹೆಸರನ್ನು ಹೇಳಿದ್ದರೆ, ಏಳು ಜನ್ಮದ ಸ್ವರ್ಗವಾದರೂ ಸಿಕ್ಕಿರುತ್ತಿತ್ತು ಎಂದು ವಿರೋಧ ಪಕ್ಷಗಳ ವಿರುದ್ಧ ಅಮಿತ್ ಶಾ ವಾಗ್ದಾಳಿ ನಡೆಸಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.