ಒಂದು ರಾಷ್ಟ್ರ, ಒಂದು ಚುನಾವಣೆ : ಮಾಜಿ ರಾಷ್ಟ್ರಪತಿ ನೇತೃತ್ವದಲ್ಲಿ ಸಮಿತಿ ರಚನೆ

ನವದೆಹಲಿ:

   ಕೇಂದ್ರ ಸರ್ಕಾರ  ಒಂದು ರಾಷ್ಟ್ರ, ಒಂದು ಚುನಾವಣೆಯ ಸಾಧಕ-ಭಾದಕ ತಿಳಿಯಲು ಶುಕ್ರವಾರ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಿದೆ.

    ದೆಹಲಿಯ ಜಿ 20 ಶೃಂಗಸಭೆಯ ನಂತರ ವಿಶೇಷ ಅಧಿವೇಶನ ನಡೆಯಲಿದ್ದು, ಇದರ ನಡುವೆಯೇ ಒಂದು ರಾಷ್ಟ್ರ, ಒಂದು ಚುನಾವಣೆಯ ಸಾಧ್ಯತೆಯನ್ನು ಅಧ್ಯಯನ ಮಾಡಲು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿದೆ. ಸಮಿತಿಯ ಸದಸ್ಯರ ಕುರಿತು ಅಧಿಸೂಚನೆಯನ್ನು ನಂತರ ಹೊರಡಿಸಲಾಗುವುದು. ಸೆ.18ರಿಂದ ಸೆ.22ರವರೆಗೆ ವಿಶೇಷ ಸಂಸತ್ ಅಧಿವೇಶನ ನಡೆಯಲಿದ್ದು, ಹಲವು ಮಸೂದೆಯನ್ನು ಮಂಡಿಸಲು ಬಾಕಿ ಇರುವ ಕಾರಣ ಈ ವಿಶೇಷ ಅಧಿವೇಶವನ್ನು ಕರೆಯಲಾಗಿದೆ ಎಂದು ಸರ್ಕಾರ ತಿಳಿಸಿದೆ.

    ಈ ವಿಶೇಷ ಅಧಿವೇಶನದ ಶಾಸಕಾಂಗ ಕಾರ್ಯಸೂಚಿಯ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಈ ಅಧಿವೇಶ ಮುಂದಿನ ಸಾರ್ವತ್ರಿಕ ಚುನಾವಣೆಗಳಿಗೆ ಬಲವಾದ ರಾಜಕೀಯ ಸಂದೇಶವನ್ನು ನೀಡುವಂತಿದೆ ಎಂದು ಹೇಳಲಾಗಿದೆ.

    ಇನ್ನು ಈಗಾಗಲೇ ಚರ್ಚೆಯಲ್ಲಿರುವ ‘ಒಂದು ರಾಷ್ಟ್ರ-ಒಂದು ಚುನಾವಣೆ’ ಮಸೂದೆಯು ಸ್ವಲ್ಪ ಸಮಯದವರೆಗೆ ಸರ್ಕಾರದ ಕಾರ್ಯಸೂಚಿಯಲ್ಲಿರಲಿದೆ. ಕೇಂದ್ರ ಸರ್ಕಾರವು ಸೆಪ್ಟೆಂಬರ್ 18 ರಿಂದ 22 ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

    ಈ ಮಸೂದೆಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಅವಕಾಶ ನೀಡುತ್ತದೆ ಎಂದು ಹೇಳಲಾಗಿದೆ. ಇದೀಗ ಈ ಬಗ್ಗೆ ರಾಜ್ಯ ಮತ್ತು ಇತರ ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವ ರೀತಿಯ ಅಭಿಪ್ರಾಯ ಇದೆ ಜತೆಗೆ ಕೇಂದ್ರದ ಈ ನಿಲುವಿನ ಬಗ್ಗೆ ಪಕ್ಷಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಯಾವ ರೀತಿಯಲ್ಲಿ ಚರ್ಚೆಯಾಗುತ್ತಿದೆ ಎಂಬುದನ್ನು ಅಧ್ಯಯನ ನಡೆಸಲು ಕೇಂದ್ರವು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಸಮಿತಿಯೊಂದನ್ನು ರಚಿಸಿದೆ.

    ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕಲ್ಪನೆಯು ದೇಶಾದ್ಯಂತ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದನ್ನು ಉಲ್ಲೇಖಿಸುತ್ತದೆ. ಇದರರ್ಥ ಲೋಕಸಭೆ ಮತ್ತು ಭಾರತದಾದ್ಯಂತ ಎಲ್ಲಾ ರಾಜ್ಯಗಳ ಅಸೆಂಬ್ಲಿಗಳಿಗೆ ಏಕಕಾಲದಲ್ಲಿ ಚುನಾವಣೆಗಳು ನಡೆಯುತ್ತವೆ, ಮತದಾನವು ಬಹುಶಃ ಅದೇ ಸಮಯದಲ್ಲಿ ನಡೆಯುತ್ತದೆ.

    ಸಂಸತ್ತಿನ ವಿಶೇಷ ಅಧಿವೇಶನವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಒಂಬತ್ತು ವರ್ಷಗಳಲ್ಲಿ ಮೊದಲ ವಿಶೇಷ ಅಧಿವೇಶನವಾಗಿದೆ, ಇದು ಜೂನ್ 30 ರಂದು ಮಧ್ಯರಾತ್ರಿ ಜಿಎಸ್ಟಿ ಜಾರಿಯನ್ನು ಗುರುತಿಸಲು 2017ರಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ವಿಶೇಷ ಜಂಟಿ ಅಧಿವೇಶನವನ್ನು ಕರೆದಿತ್ತು. ಆದಾಗ್ಯೂ, ಇದು ಐದು ದಿನಗಳ ಪೂರ್ಣಾವಧಿಯ ಅಧಿವೇಶನವಾಗಿದ್ದು, ಅಧಿವೇಶನಗಳ ಸಮಯದಲ್ಲಿ ಸಾಮಾನ್ಯವಾಗಿ ಎರಡೂ ಸದನಗಳು ಪ್ರತ್ಯೇಕವಾಗಿ ಸಭೆ ಸೇರುತ್ತವೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap