ಆಪರೇಷನ್‌ ಹಸ್ತಕ್ಕೆ ಜೆಡಿಎಸ್‌ ಶಾಸಕರು ಸಿದ್ದ…..!

ಬೆಂಗಳೂರು:

    ಇಷ್ಟೂ ದಿನ ತೆರೆಮರೆಯಲ್ಲಿ ಗುಸುಗುಸು ಚರ್ಚೆಯಲ್ಲಿದ್ದ ಜೆಡಿಎಸ್ ಶಾಸಕರ ಕಾಂಗ್ರೆಸ್ ಸೇರುವ ವಿಚಾರ ಈಗ ಬಹಿರಂಗವಾಗಿಯೇ ಗರಿಬಿಚ್ಚಿಕೊಳ್ಳುತ್ತಿದೆ.

   ಸ್ವತಃ ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಅವರೇ ತಮ್ಮ ಪಕ್ಷದ ಶಾಸಕರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ. ಆಮಿಷ ಒಡ್ಡುತ್ತಿದೆ ಎಂದು ಹಿಂದೆಯೇ ಆಪಾದನೆ ಮಾಡಿದ್ದರು. ಇದನ್ನು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸಾರಾಸಗಟಾಗಿ ತಳ್ಳಿಹಾಕಿದ್ದರು. ಆದರೆ ಈಗ ಬದಲಾದ ಬೆಳವಣಿಗೆಯಂತೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತುಂಬಿದ ಬಹಿರಂಗ ಸಭೆಯಲ್ಲಿ ಜೆಡಿಎಸ್ ಶಾಸಕರಿಗೆ ಕಾಂಗ್ರೆಸ್ ಸೇರುವಂತೆ ಆಹ್ವಾನ ನೀಡಿದ್ದಾರೆ. 

   ಭಾನುವಾರ ಚನ್ನಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕೃತಜ್ಞತಾ ಸಮಾರಂಭದಲ್ಲಿ ಜೆಡಿಎಸ್ ವರಿಷ್ಠ ಕೇಂದ್ರ ಸಚಿವ ಕುಮಾರಸ್ವಾಮಿ ಕುಟುಂಬಕ್ಕಾಗಿ ಪಕ್ಷವನ್ನು ಬಲಿಕೊಟ್ಟವರು ಎಂದು ಡಿ.ಕೆ.ಶಿವ ಕುಮಾರ್ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಆ ಪಕ್ಷದಲ್ಲಿ ಇರುವವರು ಇನ್ನು ಉಳಿದಿರುವ ಅವಧಿಯನ್ನು ನಷ್ಟ ಮಾಡಿಕೊಳ್ಳುವುದು ಬೇಡ. ಕಾಂಗ್ರೆಸ್ ಗೆ ಬಂದುಬಿಡಿ ಎನ್ನುವ ಸಂದೇಶವನ್ನು ಜೆಡಿಎಸ್ ಶಾಸಕರಿಗೆ ನೀಡಿದ್ದಾರೆ.

   ಇದರೊಂದಿಗೆ ಇಷ್ಟೂ ದಿನ ತೆರೆಯ ಮರೆಯಲ್ಲಿದ್ದ ಆಪರೇಷನ್ ಹಸ್ತ ವಿಚಾರ ಈಗ ಬಹಿರಂಗ ವೇದಿಕೆಗೆ ಬಂದಂತಾಗಿದೆ. ಅಷ್ಟೇ ಅಲ್ಲದೆ, ಇದು ಕಾಂಗ್ರೆಸ್ ಸೇರಲು ಸಿದ್ಧವಾಗಿ ನಿಂತಿರುವ ಜೆಡಿಎಸ್ ಶಾಸಕರ ಪ್ರಯತ್ನಕ್ಕೆ ಇನ್ನಷ್ಟು ಉತ್ತೇಜನ ನೀಡಿದಂತಾಗಿದೆ. ಅದರಲ್ಲೂ ಜಿ.ಟಿ. ದೇವೇಗೌಡ ಮತ್ತು ಹನೂರು ಶಾಸಕ ಮಂಜುನಾಥ್ ನೇತೃತ್ವದಲ್ಲಿ ನಡೆಯುತ್ತಿರುವ ಆಪರೇಷನ್ ಹಸ್ತ ತಯಾರಿ ಇನ್ನಷ್ಟು ಗರಿಗೆದರಿದಂತಾಗಿದೆ.

    ಆದರೆ, ಈ ಬೆಳವಣಿಗೆ ತೀವ್ರಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಶಾಸಕರ ವಲಯದ ಚಿತ್ರಣವೇ ಬದಲಾ ಗುತ್ತಿದೆ. ಅಂದರೆ ಜೆಡಿಎಸ್ ಶಾಸಕರನ್ನು ಈಗ ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಅಗತ್ಯವಾದರೂ ಏನಿದೆ ಎನ್ನುವ ಪ್ರಶ್ನೆಗಳೊಂದಿಗೆ ಕೆಲವರು ಆಕ್ಷೇಪ ಎತ್ತುತ್ತಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಹೆಚ್ಚು ಶಾಸಕ ರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕಾಗುತ್ತದೆ.

   ಹಾಗಂತ ಅಷ್ಟೂ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಂಡು ಸರಕಾರ ಮಾಡಬೇಕಾದ ಸಾಧನೆ ಯಾದರೂ ಏನು ಎಂದು ಕೆಲವು ಶಾಸಕರು ,ಮುಖಂಡರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಜೆಡಿಎಸ್ ಶಾಸಕರು ಈಗ ಕಾಂಗ್ರೆಸ್ ಸೇರದೆ ತಮ್ಮ ಅವಧಿಯನ್ನು ಸಾರ್ಥಕ ಗೊಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಹಾಗೆಯೇ ಕಾಂಗ್ರೆಸ್ ಆಪರೇಷನ್ ಹಸ್ತ ನಡೆಸುವುದು ಕೂಡ ಅಷ್ಟೇನೂ ಸುಲಭವಲ್ಲ ಎಂದು ಪಕ್ಷದ ಹಿರಿಯ ಮುಖಂಡರು ಹೇಳಿದ್ದಾರೆ. 

   ಹನೂರು ಕ್ಷೇತ್ರದ ಜೆಡಿಎಸ್ ಶಾಸಕ ಮಂಜುನಾಥ್ ಬೆಂಗಳೂರಿನ ಕೆಆರ್ ಪುರ ಕ್ಷೇತ್ರದಲ್ಲಿ ರಾಜ ಕಾರಣ ಮುಂದುವರಿಸಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಅವಧೊಯಲ್ಲಿ ಸೋಲು ಅನುಭವಿಸಿದ್ದಾಲೂ ಮಂಜುನಾಥ್ ಹನೂರು ಕ್ಷೇತ್ರದಲ್ಲಿ ನೆಲೆಯೂರಿ ಜನಮನ ಗೆಲ್ಲಲು ಯತ್ನಿಸಿದ್ದರು. ಆದರೆ ಈಗ ಶಾಸಕರಾದ ಮೇಲೆ ಅವರು ಹೆಚ್ಚಿನ ಸಮಯ ಬೆಂಗಳೂರಿನಲ್ಲಿ ಕಳೆಯುತ್ತಿದ್ದು ಹನೂರು ಕ್ಷೇತ್ರದಲ್ಲಿ ವಾರಾಂತ್ಯದ ರಾಜಕಾರಣಿ ಎನಿಸಿಕೊಂಡಿದ್ದಾರೆ. ಅಂದರೆ ಕೇವಲ ಶನಿವಾರ ಮತ್ತು ಭಾನುವಾರ ಮಾತ್ರ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಉಳಿದ ಎಲ್ಲ ದಿನ ಬೆಂಗಳೂರಿನಲ್ಲಿ ಇರುತ್ತಾರೆ ಎಂದು ಕ್ಷೇತ್ರದ ಮತದಾರರು ಹೇಳುತ್ತಿದ್ದಾರೆ.

   ಜೆಡಿಎಸ್ ಶಾಸಕರಾಗಿದ್ದರೂ ಇವರು ಕಾಂಗ್ರೆಸ್ ಸರಕಾರದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದು ಇವರು ಬಹುತೇಕ ಕಾಂಗ್ರೆಸ್ ಸೇರುವುದು ಖಚಿತ ಎನ್ನುವ ಚರ್ಚೆಗಳು ನಡೆದಿದೆ. ಆದರೆ ಅವರು ಕಾಂಗ್ರೆಸ್ ಸೇರಿ ಹನೂರು ಕ್ಷೇತ್ರದಲ್ಲಿ ಮುಂದುವರಿದ ಬದಲು ತಮ್ಮ ಮೂಲ ಕರ್ಮಭೂಮಿ, ಬೆಂಗಳೂರಿನ ಕೆಆರ್ ಪುರ ಕ್ಷೇತ್ರದಲ್ಲಿ ರಾಜಕಾರಣ ಮುಂದುವರಿಸಲು ತಯಾರಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಏಕೆಂದರೆ ಬೈರತಿ ಬಸವರಾಜ್ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದ ನಂತರ ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಕೊರತೆ ಇದೆ. ಅದನ್ನು ತುಂಬುವ ನಿಟ್ಟಿನಲ್ಲಿ ಮಂಜುನಾಥ್ ಸನ್ನದ್ಧರಾಗಿದ್ದಾರೆ ಎನ್ನಲಾಗಿದೆ. 

   ರಾಜ್ಯ ಕಾಂಗ್ರೆಸ್ ತನ್ನ 136 ಶಾಸಕರ ಜೊತೆ ಸರಕಾರ ರಚನೆ ಮಾಡಿದ್ದರೂ ಆಪರೇಷನ್ ಹಸ್ತದ ಆಸಕ್ತಿಯಲ್ಲಿದೆ. ಕಾರಣ ಕೇವಲ 18 ಶಾಸಕರನ್ನು ಹೊಂದಿ ರುವ ಜೆಡಿಎಸ್ ಬಿಜೆಪಿ ಜತೆ ಸೇರಿ ಕಾಂಗ್ರೆಸ್ ಕಾಲೆಳೆಯುವ ಪ್ರಯತ್ನ ನಡೆಸ ತ್ತಿದೆ. ಇದಕ್ಕೆ ಪ್ರತಿಯಾಗಿ ಜೆಡಿಎಸ್ ಶಾಸಕರನ್ನು ತನ್ನತ್ತ ಸೆಳೆದು ಪಕ್ಷವನ್ನೇ ಮೂಲೆಗುಂಪು ಮಾಡಬೇಕೆನ್ನುವ ತಂತ್ರ ಕಾಂಗ್ರೆಸ್ ಪಕ್ಷದ್ದಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಜೆಡಿಎಸ್ ನ 18 ಶಾಸಕರ ಪೈಕಿ 12 ಮಂದಿಯನ್ನು ಸೆಳೆದು ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗದಂತೆ ನೋಡಿಕೊಳ್ಳಬೇಕು ಎನ್ನುವುದು ಕಾಂಗ್ರೆಸ್ ತಂತ್ರವಾಗಿದೆ ಎಂದು ಮೂಲಗಳು ತಿಳಿಸಿವೆ. 

   ಜೆಡಿಎಸ್ ಶಾಸಕರಾದ ಜಿ ಟಿ ದೇವೇಗೌಡ, ಪುತ್ರ ಹರೀಶ್ ಗೌಡ, ಶಾರದಾ ಪೂರ್ಯಾನಾಯಕ್ , ಕರಿಯಮ್ಮ ನಾಯಕ್, ಸಮೃದ್ಧಿ ಮಂಜುನಾಥ್ ,ವೆಂಕಟಶಿವಾರೆಡ್ಡಿ ,ಹನೂರು ಮಂಜುನಾಥ್, ಸುರೇಶ್‌ಬಾಬು ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಸೇರಲು ಸಿದ್ಧರಾ ಗುತ್ತಿzರೆ ಎಂದು ಮೂಲಗಳು ತಿಳಿಸಿವೆ. ಈ ಶಾಸಕರನ್ನು ಕಾಂಗ್ರೆಸ್ ನ ಕೆಲ ಮುಖಂಡರು ಸಂಪರ್ಕಿಸಿದ್ದು ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರ ಆಪ್ತಮೂಲಗಳು ಹೇಳಿವೆ.

Recent Articles

spot_img

Related Stories

Share via
Copy link