ದುಬೈ:
ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ರೋಚಕ ಜಯ ಸಾಧಿಸಿದ ಭಾರತ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಷೇಶವಾಗಿ ಅಭಿನಂದಿಸಿದ್ದಾರೆ. ಜತೆಗೆ ಪಾಕಿಸ್ತಾನಕ್ಕೂ ತಕ್ಕ ತಿರುಗೇಟು ನೀಡಿದ್ದಾರೆ.
ಭಾರತ ತಂಡದ ಗೆಲುವಿನ ಬಳಿಕ ಟ್ವೀಟ್ ಮಾಡಿರುವ ಮೋದಿ, ‘ಕ್ರಿಕೆಟ್ ಮೈದಾನದಲ್ಲಿಯೂ ಆಪರೇಷನ್ ಸಿಂಧೂರ. ಫಲಿತಾಂಶ ಒಂದೇ– ಭಾರತಕ್ಕೆ ಜಯ. ಭಾರತ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು’ ಎಂದು ಮೋದಿ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಮೂಲಕ ಆಪರೇಷನ್ ಸಿಂಧೂರ್ ವೇಳೆ ಭಾರತದ 6-0 ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎನ್ನುವ ರೀತಿಯಲ್ಲಿ ಕೈಸನ್ನೆ ಸಂಭ್ರಮಾಚರಣೆ ನಡೆಸಿದ್ದ ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಮುಖ್ಯಸ್ಥರೂ ಆಗಿರುವ ಮೊಹ್ಸಿನ್ ನಖ್ವಿ ಮತ್ತು ಪಾಕ್ ಆಟಗಾರರಿಗೆ ಮೋದಿ ತಕ್ಕ ಉತ್ತರ ನೀಡಿದ್ದಾರೆ.
ಬಿಸಿಸಿಐ ಕೂಡ ಪಾಕಿಸ್ತಾನ 6-0 ಸಂಭ್ರಮಾಚರಣೆಗೆ ಪ್ರತಿಕಾರ ತೋರಿಸಿಕೊಂಡಿದೆ. ಭಾರತ ಅಜೇಯವಾಗಿ 6 ಗೆಲುವು ಸಾಧಿಸಿ ಟ್ರೋಫಿ ತನ್ನದಾಗಿಸಿಕೊಂಡ ಬಳಿಕ ಟ್ವೀಟ್ ಮಾಡಿರುವ ಬಿಸಿಸಿಐ, 6-0 ಎಂದು ಬರೆದುಕೊಂಡಿದೆ.
ಕಿಕ್ಕಿರಿದು ಸೇರಿದ ದುಬೈ ಸ್ಟೇಡಿಯಂನಲ್ಲಿ ಪಾಕಿಸ್ತಾನ ಆಟಗಾರರು ಸೋಲು ರನ್ನರ್ ಅಪ್ ಬಹುಮಾನ ಸ್ವೀಕರಿಸಲು ವೇದಿಕೆಗೆ ಕಾಲಿಡುತ್ತಿದ್ದಂತೆ ಸ್ಟ್ಯಾಂಡ್ಸ್ನಲ್ಲಿದ್ದ ಭಾರತೀಯ ಅಭಿಮಾನಿಗಳು ‘ಮೋದಿ.. ಮೋದಿ’ ಎಂದು ಕೂಗಿ, ಪಾಕ್ ಆಟಗಾರರನ್ನ ಕಿಚ್ಚಾಯಿಸಿದರು. ಇದೇ ಸಿಟ್ಟಿನಲ್ಲಿ ಪಾಕ್ ನಾಯಕ ಸಲ್ಮಾನ್ ಅಲಿ ಅಘ ಚೆಕ್ ಸ್ವೀಕರಿಸಿ ಅದನ್ನು ವೇದಿಕೆ ಮೇಲೆಯೇ ಎಸೆದು ಹೊರನಡೆದರು.








