ಚಿಕ್ಕನಾಯಕನಹಳ್ಳಿ :
ತಾಲ್ಲೂಕಿಗೆ 2ಸಾವಿರ ಮನೆಗಳು ಮಂಜೂರಾಗಿದ್ದು ಈಗ 900 ಮನೆಗಳಿಗೆ ಆದೇಶ ಪತ್ರ ನೀಡಲಾಗುವುದು, ಉಳಿದ 1100 ಮನೆಗಳಿಗೆ ಶೀಘ್ರವೇ ಆದೇಶ ಪತ್ರ ನೀಡಲಾಗುವುದು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯ್ತಿಗಳ ಅಲೆಮಾರಿ, ಅರೆ ಅಲೆಮಾರಿಗಳ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿ ಮಾತನಾಡಿ, ಆದೇಶ ಪತ್ರ ತೆಗೆದುಕೊಂಡ ಫಲಾನುಭವಿಗಳು ಮಾರ್ಚ್ ಒಳಗೆ ಮನೆಗಳ ಅಧಿಯನ್ನು ಹಾಕಿ ಒಂದು ಬಿಲ್ಲು ತೆಗೆದುಕೊಳ್ಳಬೇಕು, ಇಲ್ಲದೆ ಹೋದರೆ ಮನೆ ಕೈತಪ್ಪಲಿದೆ, ಅಲೆಮಾರಿಗಳು,
ಅರೆ ಅಲೆಮಾರಿಗಳು ಈಗಾಗಲೇ ಗುಡ್ಡ, ಬಾರೆ, ಚಳಿ, ಗಾಳಿ ಎನ್ನದೆ ಗುಡಿಸಲುಗಳಲ್ಲಿ ಇಂತಹವರನ್ನು ಗುರುತಿಸಿ, ಹಕ್ಕುಪತ್ರ ವಿತರಿಸಲಾಗುತ್ತಿದೆ ಎಂದ ಅವರು, ಗ್ರಾಮ ಪಂಚಾಯ್ತಿಗಳ ಬದಲಿಗೆ ತಾಲ್ಲೂಕು ಪಂಚಾಯ್ತಿ ಮುಖಾಂತರ ಮನೆಗಳನ್ನು ಪಟ್ಟಿ ಮಾಡಿ ವಿತರಿಸಲಾಗುತ್ತದೆ, ಮನೆ ಇಲ್ಲದೆ ಇದ್ದವರು ಗ್ರಾಮ ಠಾಣ, ತಮ್ಮ ಜಮೀನು, ನಿವೇಶನ ಇರುವವರೂ ಸಹ ಮನೆ ಕಟ್ಟಿಕೊಳ್ಳಬಹುದು ಎಂದರು.
ಗೊಲ್ಲರಹಟ್ಟಿಗಳು ಹಾಗೂ ಲಂಬಾಣಿ ತಾಂಡ್ಯಗಳನ್ನು ಅಸಲಿ ಗ್ರಾಮ ಎಂದು ನಾಮಕರಣ ಮಾಡಲು ಸರ್ಕಾರ ಸಂಪುಟದಲ್ಲಿ ತೀರ್ಮಾನಿಸಿದೆ, ಪ್ರತಿ ಹಳ್ಳಿಗಳಲ್ಲಿ 100 ರೇಷನ್ ಕಾರ್ಡ್ ಇರುವ ಗ್ರಾಮಗಳಲ್ಲಿ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲು ಸರ್ಕಾರ ತೀರ್ಮಾನಿಸಿದೆ ಇದರಿಂದ ಸರ್ಕಾರಕ್ಕೆ ಹೆಚ್ಚಿನ ಹೊರೆ ಬಿದ್ದರೂ ಸಹ ಕ್ರಮ ಕೈಗೊಳ್ಳಲಾಗುತ್ತಿದೆ ಎಂದ ಅವರು,
ಜಲ ಜೀವನ್ ಮಿಷನ್ ಯೋಜನೆ ಕಾರ್ಯಕ್ರಮದಲ್ಲಿ ತಾಲ್ಲೂಕಿಗೆ 128 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರತಿ ಮನೆಮನೆಗಳಿಗೆ ಕೊಳಾಯಿಗಳ ಮೂಲಕ ನೀರು ಹರಿಸಲು ಕೇಂದ್ರ 9200 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿದ್ದು ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ತಾಲ್ಲೂಕಿಗೆ 128 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಶೇ.50ರಷ್ಟು ಅನುದಾನ ಬಿಡುಗಡೆ ಮಾಡುತ್ತಿದೆ, ಟ್ಯಾಂಕ್ ಇರುವ ಗ್ರಾಮಗಳಲ್ಲಿ ನಲ್ಲಿಗಳ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದರು.
ಬೋರನಕಣಿವೆಯಿಂದ ಈ ಭಾಗದ 5 ಗ್ರಾಮ ಪಂಚಾಯ್ತಿಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು, ತಾಲ್ಲೂಕಿನ 4 ಪಂಚಾಯ್ತಿಗಳಿಗೆ ಆವೃತ್ತಿ ಯೋಜನೆ ಅಡಿಯಲ್ಲಿ ಎಲ್ಲಾ ಬಡ ಸಮುದಾಯದ ಬಡವರಿಗೆ ಮನೆ ನಿರ್ಮಿಸಲು ತೀರ್ಮಾನಿಸಲಾಗಿದೆ, ಸರ್ಕಾರದ ಶಾಲೆಗಳಿಗೆ 10 ಲಕ್ಷ ರೂ ಅನುದಾನ ಬಿಡುಗಡೆ ಮಾಡಲಾಗಿದೆ,
ಬಗರ್ ಹುಕುಂ ಸಮಿತಿ ಮೂಲಕ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲು ಪ್ರತಿ ಸೋಮವಾರ ಸಭೆ ನಡೆಸಿ ಸಾಗುವಳಿ ಚೀಟಿ ವಿತರಿಸಲಾಗುವುದು ಎಂದರು.
ತಹಶೀಲ್ದಾರ್ ತೇಜಸ್ವಿನಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ವಸಂತ್ ಕುಮಾರ್, ಮಾಜಿ ತಾ.ಪಂ.ಸದಸ್ಯ ಕೇಶವಮೂರ್ತಿ, ನಿರಂಜನ್ ಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
