ನವದೆಹಲಿ :
ನಿನ್ನೆಯಷ್ಟೇ ಜಾಮೀನಿನ ಮೇಲೆ ಹೊರ ಬಂದ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಇದೀಗ ಸಂಸತ್ ಎದುರು ನಡೆಯುತ್ತಿರುವ ಈರುಳ್ಳಿ ಬೆಲೆ ಏರಿಕೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಐಎನ್ಕ್ಸ್ ಮೀಡಿಯಾ ಹಗರಣದಲ್ಲಿ ಸಿಬಿಐನಿಂದ ಬಂಧಿತರಾಗಿ ಜೈಲು ಸೇರಿದ್ದ ಚಿದಂಬರಂ ರವರನ್ನು ಜಾಮೀನು ಪಡೆದ ನಂತರ ನಿನ್ನೆ ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಇಂದು ರಾಜ್ಯಸಭಾ ಕಲಾಪಕ್ಕೂ ಮುನ್ನ ಸಂಸತ್ ನಲ್ಲಿ ನಡೆದ ಈರುಳ್ಳಿ ಬೆಲೆ ಏರಿಕೆ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನ ಇತರ ನಾಯಕರ ಜೊತೆಯಾಗಿ ಭಾಗವಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್ನಲ್ಲಿ ನ್ಯಾಯದ ಪರ ಧ್ವನಿ ಎತ್ತುವ ನನ್ನನ್ನು ಸರ್ಕಾರ ಕಟ್ಟಿಹಾಕಲು ಸಾಧ್ಯವಿಲ್ಲ ನಾನು ಹಿಂದಿರುಗಿರುವುದಕ್ಕೆ ಖುಷಿಯಾಗಿದೆ. ಕೇಂದ್ರದ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ ಎಂದರು.
ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಗೌರವ ಗೋಗಯ್ ಅವರೊಂದಿಗೆ ಸಂಸತ್ ಭವನದ ಮುಂದೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಅವರು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಸಂಸದರು ಮತ್ತು ಪಕ್ಷದ ಇತರ ನಾಯಕರು ಈರುಳ್ಳಿ ತುಂಬಿದ ಬುಟ್ಟಿಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಈರುಳ್ಳಿ ಬೆಲೆಯನ್ನು ತಕ್ಷಣ ಕಡಿಮೆ ಮಾಡಿ ರೈತರ ಹಿತಾಸಕ್ತಿ ರಕ್ಷಿಸುವಂತೆ ಆಗ್ರಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ