ಹುಬ್ಬಳ್ಳಿ:
ರಾಜ್ಯದಲ್ಲಿರುವ ಜೈನ ಸಮಾಜದ ಜನಸಂಖ್ಯೆಯ ನಿಖರ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲು ಇಂದಿನಿಂದ (ಗುರುವಾರ) ನಾನು ಸೇರಿದಂತೆ ವಿವಿಧ ಜೈನ ಸ್ವಾಮೀಜಿಗಳು ರಾಜ್ಯಾದ್ಯಾಂತ ಪಾದಯಾತ್ರೆ ಮಾಡಲಿದ್ದೇವೆ ಎಂದು ಗುಣಧರನಂದಿ ಮಹಾರಾಜರು ಹೇಳಿದರು.
ಸಮೀಪದ ವರೂರದಲ್ಲಿರುವ ನವಗ್ರಹ ತೀರ್ಥಕ್ಷೇತ್ರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಜಾತಿಗಣತಿ ಆಧರಿಸಿ ಮಾಧ್ಯಮಗಳಲ್ಲಿ ವರದಿಯಾದಂತೆ ರಾಜ್ಯದಲ್ಲಿ 1.62 ಲಕ್ಷ ಮಂದಿ ಜೈನರಿದ್ದಾರೆ. ಆದರೆ, ಸಚಿವ ಜಮೀರ್ ಅಹ್ಮದ್ ಅವರು ವಿಧಾನಸಭೆಯಲ್ಲಿ ಮಾತನಾಡುವಾಗ ಜೈನರ ಜನಸಂಖ್ಯೆ 20 ಲಕ್ಷವಿದೆ ಎಂಬುದಾಗಿ ಹೇಳಿದ್ದರು ಎಂದರು.
ಜಾತಿಗಣತಿ ವೇಳೆ ನಮ್ಮನ್ನೂ ಸೇರಿದಂತೆ ಸಮಾಜದ ಬಹುತೇಕರ ಸಮೀಕ್ಷೆ ಮಾಡಿಲ್ಲ. ಜಾತಿಗಣತಿ ವರದಿಯಲ್ಲಿ ತೋರಿಸಿರುವ ಜೈನ ಸಮಾಜದ ಜನಸಂಖ್ಯೆ ಸುಳ್ಳಾಗಿದೆ. ಇದರಿಂದ ಸಮಾಜಕ್ಕೆ ಬೇಸರವಾಗಿದೆ. ಮಾಧ್ಯಮದಲ್ಲಿ ಪ್ರಕಟವಾದ ಜಾತಿಗಣತಿ ಕುರಿತ ವರದಿ ಅಧಿಕೃತವಾಗಿದ್ದಲ್ಲಿ, ಅದಕ್ಕೆ ನಮ್ಮ ವಿರೋಧವಿದೆ. ಸಮಾಜದ ಅಭಿವೃದ್ಧಿಗೆ ತೊಂದರೆಯಾದರೆ ಸಹಿಸೊಲ್ಲ ಎಂದು ಹೇಳಿದರು.
ನಾವೇ ಸಮೀಕ್ಷೆ ಮಾಡಿ, ಜೂನ್ 8 ರಂದು ಸರ್ಕಾರಕ್ಕೆ ಕಡತ ಸಲ್ಲಿಸುವೆವು. ನಂತರ ಸಮಾಜದವರ ಸಭೆ ನಡೆಸಿ ಮುಂದಿನ ಹೋರಾಟದ ನಿರ್ಧಾರ ಮಾಡಲಾಗುವುದು. ನಮ್ಮ ವರದಿಯನ್ನು ಸರ್ಕಾರ ಒಪ್ಪದಿದ್ದರೆ ರಾಜ್ಯಪಾಲರು, ರಾಷ್ಟ್ರಪತಿ ಮೊರೆ ಹೋಗುತ್ತೇವೆ. ಕಾನೂನು ಹೋರಾಟಕ್ಕೂ ಮುಂದಾಗುತ್ತೇವೆ ಎಂದರು.
ಬೆಳಗಾವಿಯ ಚಿಕ್ಕೊಡಿಯಲ್ಲೇ ಸುಮಾರು 1 ಲಕ್ಷದಷ್ಟು ಜೈನ ಸಮಾಜದವರಿದ್ದಾರೆ. ಸರ್ಕಾರ ಇದನ್ನು ಪರಿಗಣಿಸಿ, ಮತ್ತೆ ಗಣತಿ ನಡೆಸಬೇಕು. ಸಮಾಜದ ನಿಜವಾದ ಜನಸಂಖ್ಯೆ ತಿಳಿಸಬೇಕು ಎಂದು ಆಗ್ರಹಿಸಿದರು.ಜೂನ್ 8 ರಂದು ಬೆಳಗಾವಿ ಜಿಲ್ಲೆ ಅಥಣಿಯ ಐನಾಪುರದಲ್ಲಿ ಬೃಹತ್ ಸಭೆ ನಡೆಸಲಾಗುವುದು. ಪದೇ ಪದೇ ಸಮಾಜಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು ಎಂದರು.
