ಬೆಂಗಳೂರು:
ಜೆಡಿಎಸ್ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆಗಳ ಅನುಷ್ಠಾನಕ್ಕಾಗಿ ಯಾವುದೇ ಹೊಸ ತೆರಿಗೆ ಹೇರುವುದಿಲ್ಲ, ಸಾಲವನ್ನೂ ತರುವುದಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿದ ಅವರು, ಜಾಗತಿಕವಾಗಿ ಹೆಸರು ಮಾಡಿರುವ ಮಹಾನಗರದಲ್ಲಿ ಬಡತನ ಇನ್ನೂ ತಾಂಡವವಾಡುತ್ತಿರುವುದು ಅತ್ಯಂತ ನೋವಿನ ಸಂಗತಿ. ಈ ಬಡತನಕ್ಕೆ ಪರಿಹಾರ ಪಂಚರತ್ನಗಳಲ್ಲಿ ಇದೆ. ಈ ಯೋಜನೆಗಳಿ ಸಂಜೀವಿನಿಯಾಗಿ ಕೆಲಸ ಮಾಡುತ್ತವೆ
ಪಂಚರತ್ನ ಯೋಜನೆಗಳು ರಾಜ್ಯದ ಜನರ ಜೀವನದಲ್ಲಿ ಮಹತ್ತರ ಬದಲಾವಣೆ ತರಲಿವೆ. ನಗರದಲ್ಲಿ ಇರುವ ಬಡತನದ ಸಮಸ್ಯೆ ಸೇರಿದಂತೆ ಅನೇಕ ಸವಾಲುಗಳನ್ನು ಎದುರಿಸಿ ಮುನ್ನಡೆಯಲು ಈ ಯೋಜನೆಗಳು ಸಹಕಾರಿಯಾಗಲಿವೆ. 25 ವರ್ಷ ಅಧಿಕಾರ ಕೊಟ್ಟರೆ ಅಮೃತ ಕಾಲ ತರುವುದಾಗಿ ಬಿಜೆಪಿಯವರು ಹೇಳುತ್ತಾರೆ. ನಾನು ಹಾಗೆ ಕೇಳುವುದಿಲ್ಲ. ಒಂದು ಬಾರಿ ನನಗೆ ಅವಕಾಶ ಕೊಡಿ, ಎಲ್ಲರ ಬದುಕು ಹಸನು ಮಾಡುವೆ’ ಎಂದರು.
