ಪಾವಗಡ :
ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಚರಂಡಿ ತ್ಯಾಜ್ಯ ಸರಾಗವಾಗಿ ಹರಿಯದೆ ದುರ್ನಾತ ಬೀರುತ್ತಿದ್ದು, ಇದರಿಂದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಗೂ ನಿವಾಸಿಗಳಿಗೆ ಕಿರಿಕಿರಿಯುಂಟಾಗುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರನ ವಿರುದ್ದ ಗುಟ್ಟಹಳ್ಳಿ ನಿವಾಸಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ 13 ಕೋಟಿ ರೂ. ವೆಚ್ಚದಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಆಸ್ಪತ್ರೆಯ ಪಕ್ಕದಲ್ಲಿ ಗುಟ್ಟಹಳ್ಳಿಗೆ ಮತ್ತು ರೈನ್ ಗೇಜ್ ಬಡಾವಣೆಗೆ ಹೋಗುವ ರಸ್ತೆ ಪಕ್ಕದ ಚರಂಡಿಯಲ್ಲಿ ಕಾಮಗಾರಿಯ ಮಣ್ಣು, ಕಲ್ಲು ಬಿದ್ದು ಚರಂಡಿ ಮುಚ್ಚಿಹೋಗಿದೆ. ಇದರಿಂದ ಚರಂಡಿ ತ್ಯಾಜ್ಯ ಸರಾಗವಾಗಿ ಹರಿಯದೇ ಗಬ್ಬುವಾಸನೆ ಬೀರುತ್ತಿದೆ. ಗುತ್ತಿಗೆದಾರನಿಗೆ ಪುರಸಭೆ ಹಾಗೂ ನಿವಾಸಿಗಳು ಚರಂಡಿ ದುರಸ್ತಿಗೊಳಿಸಿ ಕಾಮಗಾರಿ ಮಾಡಿ ಎಂದು ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ ಎಂದು ಗುಟ್ಟಹಳ್ಳಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮುಖಂಡ ಗುಟ್ಟಹಳ್ಳಿ ಆಂಜಿನಪ್ಪ ಮಾತನಾಡಿ, ಈ ಕಾಮಗಾರಿ ಮಾಡುವ ಮೊದಲೇ ನಾವು ಗುತ್ತಿಗೆದಾರನಿಗೆ ಚರಂಡಿಯ ಬಗ್ಗೆ ಮಾಹಿತಿ ನೀಡಿದ್ದೆವು. ಆದರೆ ಗುತ್ತಿಗೆದಾರ ಇದರ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ. ಕಾಮಗಾರಿಯ ಮಣ್ಣು, ಕಲ್ಲುಚಪ್ಪಡಿ, ಮತ್ತಿತರ ವಸ್ತುಗಳು ಅಡ್ಡಲಾಗಿ ಬಿದ್ದು, ಚರಂಡಿ ಬ್ಲಾಕ್ ಆಗಿದೆ. ಪುರಸಭೆಯ ಪೌರಕಾರ್ಮಿಕರು ಚರಂಡಿ ತುಂಬಿರುವ ತ್ಯಾಜ್ಯವನ್ನು ಸ್ವಚ್ಚಗೊಳಿಸುತ್ತಿದ್ದು, ಇದು ಪುನರಾವರ್ತನೆ ಆಗುತ್ತಿರುವುದರಿಂದ ಅವರು ಕೂಡ ಹೈರಾಣಾಗಿದ್ದಾರೆ. ಇದೇ ರೀತಿ ಮುಂದುವರೆದರೆ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಎಚ್ಚರಿಸಿದ್ದಾರೆ.
ಮುಖಂಡ ಗೇಟ್ ಕುಮಾರ್ ಮಾತನಾಡಿ, ಹೆರಿಗೆ ಆಸ್ಪತ್ರೆಯ ಕಾಮಗಾರಿಗೆ ಮರಳು, ಮಣ್ಣು ಮತ್ತಿತರ ಸಾಮಗ್ರಿಗಳನ್ನು ಸಾಗಿಸಲು ಚರಂಡಿಯ ಮೇಲೆ ದೊಡ್ಡ ಟಿಪ್ಪರ್ಗಳು ಮತ್ತು ಟ್ಯಾಕ್ಟರ್ಗಳು ಸಂಚರಿಸಿ ಚರಂಡಿ ಬ್ಲಾಕ್ ಆಗಿದೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹಾಗೂ ಪಾದಚಾರಿಗಳಿಗೆ ಗಬ್ಬು ವಾಸನೆಯಿಂದ ಹಿಂಸೆಯಾಗಿ, ಮೂಗುಮುಚ್ಚಿಕೊಂಡು ಹೋಗುತ್ತಿದ್ದಾರೆ. ಮೊದಲು ಈ ಚರಂಡಿಯನ್ನು ದುರಸ್ತಿಪಡಿಸಿ ನಂತರ ಕಾಮಗಾರಿ ಮಾಡಲಿ, ಇಲ್ಲವಾದಲ್ಲಿ ಕಾಮಗಾರಿ ವಿರುದ್ದ ನ್ಯಾಯಾಲಯದಲ್ಲಿ ದಾವೆ ಹೂಡಲಾಗುತ್ತಿದೆ ಎಂದು ಎಚ್ಚರಿಸಿದರು.
ಗುಟ್ಟಹಳ್ಳಿ ನಿವಾಸಿಗಳಾದ ಅಶ್ವತ್ಥ್, ಪದ್ಮ, ಶ್ರೀನಿವಾಸ್, ಶ್ರೀಧರ್, ನಭಿರಸುಲ್ಲಾ, ಕಲಾವತಿ, ಇಮಾಂಬಿ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
